ವಿಜಯಾನಂದ ಕಾಶಪ್ಪನವರ್ ಜಾಮೀನು ಅರ್ಜಿ ವಜಾ
ಬೆಂಗಳೂರು, ಜು. 10 : ಪೊಲೀಸ್ ಪೇದೆಗಳ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಹುನಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಿಟಿ ಸಿವಿಲ್ ಮತ್ತು ಸೆಷನ್ ಕೋರ್ಟ್ ಗುರುವಾರ ವಜಾಗೊಳಿಸಿದೆ. ಜಾಮೀನು ಸಿಗದ ಹಿನ್ನಲೆಯಲ್ಲಿ ಶಾಸಕರು ಬಂಧದ ಭೀತಿ ಎದುರಿಸುತ್ತಿದ್ದಾರೆ.
ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ್ದ ಸಿಟಿ ಸಿವಿಲ್ ಕೋರ್ಟ್ ಗುರುವಾರಕ್ಕೆ ಆದೇಶ ಕಾಯ್ದಿರಿಸಿತ್ತು. ಇಂದು ಆದೇಶ ಹೊರಡಿಸಿದ್ದು, ಪ್ರಕರಣದ ಆರೋಪಿಗಳಾದ ರೌಡಿ ಶೀಟರ್ ಸೋಮಶೇಖರ್ ಗೌಡ ಮತ್ತು ಕಾಶಪ್ಪನವರ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಶಾಸಕ ವಿಜಯಾನಂದ ಕಾಶಪ್ಪನವರ್ ಈಗಾಗಲೇ ಸಿಸಿಬಿ ಪೊಲೀಸರು ಮುಂದೆ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಅವರನ್ನು ಬಂಧಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಆದರೆ, ಪ್ರಕರಣ ದಾಖಲಾದ ತಕ್ಷಣ ರೌಡಿ ಶೀಟರ್ ಸೋಮಶೇಖರ್ ಗೌಡ ತಲೆ ಮರಿಸಿಕೊಂಡಿದ್ದು, ಅವರನ್ನು ಪೊಲೀಸರು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಇದೆ. [ಸಿಸಿಬಿ ಪೊಲೀಸರ ಮುಂದೆ ಕಾಶಪ್ಪನವರ್ ಹೇಳಿದ್ದೇನು?]
ರೌಡಿ ಶೀಟರ್ ಸೋಮಶೇಖರ್ ಗೌಡ ಮತ್ತು ವಿಜಯಾನಂದ ಕಾಶಪ್ಪನವರ್ ವಿಚಾರಣೆ ಪೂರ್ಣಗೊಂಡಿಲ್ಲ. ಈಗ ಅವರಿಗೆ ಜಾಮೀನು ನೀಡಿದರೆ, ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆ ಇದೆ. ಆದ್ದರಿಂದ ಜಾಮೀನು ನೀಡಬಾರದು ಎಂದು ಸರ್ಕಾರಿ ವಕೀಲರು ವಾದ ಮಂಡಿಸಿದ್ದರು. ವಾದವನ್ನು ಪುರಸ್ಕರಿಸುವ ನ್ಯಾಯಾಲಯ ಇಬ್ಬರು ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. [ಸೋಮಶೇಖರ್ ಗೌಡ ಯಾರು?]
ಏನಿದು ಪ್ರಕರಣ : ಹುನಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ಸೋಮಶೇಖರ್ ಗೌಡ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜು.1ರಂದು ಕಾಶಪ್ಪನವರ್ ಮತ್ತು ಸೋಮಶೇಖರ್ ಗೌಡ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಪೇದೆಗಳ ಮೇಲೆ ಯುಬಿ ಸಿಟಿಯಲ್ಲಿರುವ ಸ್ಕೈಬಾರ್ ನಲ್ಲಿ ಹಲ್ಲೆ ನಡೆಸಿದ್ದಾರೆ ಎಂಬುದು ಆರೋಪವಾಗಿದ್ದು ಸಿಸಿಬಿ ಪೊಲೀಸರು ಇದರ ತನಿಖೆ ಕೈಗೊಂಡಿದ್ದಾರೆ. [ಪೊಲೀಸ್ ಪೇದೆಗಳಿಗೆ ಥಳಿಸಿದ ಶಾಸಕ]