ಖಿನ್ನತೆಗೆ ಒಳಗಾಗಿ ಸಾಫ್ಟ್ ವೇರ್ ಇಂಜಿನಿಯರ್ ಆತ್ಮಹತ್ಯೆ!
ಬೆಂಗಳೂರು, ಡಿಸೆಂಬರ್ 15: ಮಾನಸಿಕ ಖಿನ್ನತೆಗೆ ಒಳಗಾಗಿ 32 ವರ್ಷ ವಯಸ್ಸಿನ ಸಾಫ್ಟ್ ವೇರ್ ಇಂಜಿನಿಯರ್ ರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟಬೆ ವಿಜಯನರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಹರ್ಷ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಶಾಂತ್ ನಗರ ನಿವಾಸಿಯಾಗಿದ್ದ ಹರ್ಷ್, ಸ್ಥಳೀಯ ಖಾಸಗಿ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಡೆವಲಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಹರ್ಷ್ ಅವರು ಪತ್ನಿ ಹಾಗೂ ಎರಡು ವರ್ಷದ ಮಗಳನ್ನು ಅಗಲಿದ್ದಾರೆ.
ತಾಯಿ ಸಾವಿನ ನೋವು: ಹರ್ಷ್ ಶೆಟ್ಟಿ ಸಾವಿಗೆ ಮಾನಸಿಕ ಖಿನ್ನತೆಯೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಹರ್ಷ್ ಅವರ ತಾಯಿ ಹಾಗೂ ಸಂಬಂಧಿಕರೊಬ್ಬರು ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ.
ಇತ್ತೀಚಿಗೆ ಅವರ ಸೋದರಿಗೂ ಕ್ಯಾನ್ಸರ್ (ಕೊನೆಯ ಹಂತ) ಇರುವುದು ಪತ್ತೆಯಾಗಿದ್ದು, ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಹೆಚ್ಚು ದಿನಗಳ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ.
ಇದಾದ ಬಳಿಕ ಬೆಂಗಳೂರಿನ ಮನೆಗೆ ಬಂದ ಹರ್ಷ್ ತನ್ನ ಪತ್ನಿಗೆ ಕರೆ ಮಾಡಿ, ಸೋದರಿಗೆ ಇರುವ ಕಾಯಿಲೆ ಬಗ್ಗೆ ಹೇಳಿಕೊಂಡು ದುಃಖಿಸಿದ್ದಾರೆ. ಸೋದರಿಯ 11 ವರ್ಷದ ಮಗನ ಜವಾಬ್ದಾರಿ ಬಗ್ಗೆ ಮಾತನಾಡಿದ್ದಾರೆ.
ನಂತರ ಮತ್ತೊಂದು ರೂಮಿಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.