ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಶಾಸಕ ಆನಂದ್ ಸಿಂಗ್
ಬೆಂಗಳೂರು, ಜುಲೈ 1: ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿರುವ ವಿಜಯನಗರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರು ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದಾರೆ ಎನ್ನಲಾಗಿದೆ.
ಮಧ್ಯಾಹ್ನ 12.30ರ ಬಳಿಕ ಭೇಟಿಯಾಗಲು ತಮಗೆ ಅವಕಾಶ ನೀಡುವಂತೆ ಅವರು ರಾಜ್ಯಪಾಲ ವಜೂಬಾಯಿ ವಾಲಾ ಅವರನ್ನು ಕೋರಿದ್ದಾರೆ. ರಾಜಭವನದ ಕಡೆಯಿಂದ ಇನ್ನೂ ಅವರ ಭೇಟಿಗೆ ಅನುಮತಿ ದೊರೆತಿಲ್ಲ ಎಂದು ಖಾಸಗಿ ವಾಹಿನಿಯ ವರದಿಗಳು ತಿಳಿಸಿವೆ.
ಆನಂದ್ ಸಿಂಗ್ ದಿಢೀರ್ ರಾಜೀನಾಮೆ: ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ?
ರಾಜ್ಯಪಾಲರ ಭೇಟಿ ಸಂದರ್ಭದಲ್ಲಿ ಆನಂದ್ ಸಿಂಗ್, ಜಿಂದಾಲ್ ಕಂಪೆನಿಗೆ ಭೂಮಿ ಪರಭಾರೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರದ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಜತೆಗೆ ತಮ್ಮ ರಾಜೀನಾಮೆ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. ಆದರೆ, ರಮೇಶ್ ಕುಮಾರ್ ಅವರು ತಮಗೆ ಯಾರೂ ರಾಜೀನಾಮೆ ನೀಡಿಲ್ಲ ಎಂದು ಹೇಳಿದ್ದಾರೆ.
ಆನಂದ್ ಸಿಂಗ್ ಅವರ ರಾಜೀನಾಮೆ ಅಂಗೀಕಾರಕ್ಕೆ ಕಾಂಗ್ರೆಸ್ ವಿಳಂಬ ಮಾಡುವ ಸಾಧ್ಯತೆ ಇರುವುದರಿಂದ ರಾಜ್ಯಪಾಲರಲ್ಲಿ ಜಿಂದಾಲ್ ಪ್ರಕರಣದ ಬಗ್ಗೆ ಮಾತನಾಡಿ ಅವರಿಂದ ಒತ್ತಡ ಹೇರಿಸಿ ರಾಜೀನಾಮೆ ಅಂಗೀಕರಿಸುವಂತೆ ಮಾಡುವ ಪ್ರಯತ್ನ ಮಾಡಲಿದ್ದಾರೆ ಎನ್ನಲಾಗಿದೆ.
ನನಗೆ ಯಾರೂ ರಾಜೀನಾಮೆ ಪತ್ರ ನೀಡಿಲ್ಲ: ಸ್ಪೀಕರ್ ರಮೇಶ್ ಕುಮಾರ್
ಜೂನ್ 27ರಂದು ಜಿಂದಾಲ್ಗೆ ಭೂಮಿ ನೀಡುವುದನ್ನು ಆಕ್ಷೇಪಿಸಿ ಗೃಹ ಸಚಿವಾಲಯಕ್ಕೆ ಏಳು ಪುಟಗಳ ಪತ್ರ ಬರೆದಿದ್ದರು. ಈಗಾಗಲೇ ಜಿಂದಾಲ್ ಕಂಪೆನಿ ತಾನು ಪಡೆದ ಭೂಮಿಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದೆ. ಭೂಮಿ ಪರಭಾರೆ ಮಾಡಿದರೂ ಭೂಮಿ ಕಳೆದುಕೊಂಡವರಿಗೆ ಸೂಕ್ತಪರಿಹಾರ ನೀಡುತ್ತಿಲ್ಲ. ಈ ಯೋಜನೆಗೆ ಹಿಂದಿನ ಬಿಜೆಪಿ ಸರ್ಕಾರ ಕೂಡ ಹೊಣೆ ಎಂದು ಆನಂದ್ ಸಿಂಗ್ ಬರೆದಿದ್ದರು.