ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೇಮಮಾಲಿನಿ ಕೆನ್ನೆ ತರ ಆಗ್ಲೇ ಇಲ್ಲ ನೋಡಿ ನನ್ ಮನೇ ರೋಡು!

By ಬಾಲರಾಜ್ ತಂತ್ರಿ
|
Google Oneindia Kannada News

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಬಿಬಿಎಂಪಿಯಲ್ಲಿ ಮೇಯರ್ ಮತ್ತು ಉಪಮೇಯರ್ ಹುದ್ದೆ ಹುಡುಕಿಕೊಂಡು ಬಂದ ನಂತರ, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ನಾಲ್ಕು ಒಳ್ಳೆ ಕೆಲ್ಸ ಮಾಡ್ಬಹುದು ಅನ್ನೋ ಆಸೆ ಸದ್ಯದ ಮಟ್ಟಿಗೆ ಕಮರಿ ಹೋಗಿದೆ.

ಅಧಿಕಾರ ಸ್ವೀಕರಿಸಿದ ಹೊಸದರಲ್ಲಿ ಹುಮ್ಮಸ್ಸಿನಿಂದಲೇ ಕೆಲಸ ಆರಂಭಿಸಿದ್ದ ಮೇಯರ್ ಸಾಹೇಬ್ರು, ಬೆಂಗಳೂರಿನ ಕಸದ ಸಮಸ್ಯೆಗೆ ಮತ್ತು ಕುಲಗೆಟ್ಟು ಹೋಗಿರುವ ರಸ್ತೆಗಳಿಗೆ ಆದ್ಯತೆಯ ಮೇರೆಗೆ 'ಟಾರ್ ಭಾಗ್ಯ' ಕರುಣಿಸ ಬಹುದು ಅನ್ನೋ ಜನರ ಲೆಕ್ಕಾಚಾರ ಎಂಬತ್ತು ದಿನವಾಗುತ್ತಾ ಬಂದರೂ ನಿಜವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ರಸ್ತೆ ಮಧ್ಯೆ ಗುಂಡಿ ಇದೆಯೋ ಅಥವಾ ಗುಂಡಿಯ ಮಧ್ಯೆ ರಸ್ತೆ ಇದೆಯೋ ಅನ್ನೋ ರೀತಿಯಲ್ಲಿದೆ ಬೆಂಗಳೂರಿನ ರಸ್ತೆಗಳು (ಸಿಎಂ, ಸಚಿವರುಗಳು ಹೆಚ್ಚಾಗಿ ಓಡಾಡುವ ರಸ್ತೆಗಳನ್ನು ಹೊರತು ಪಡಿಸಿ). ಯಾವ ಹಳ್ಳದಿಂದ ಅದೇನೂ ಕಾದಿದೆಯೋ ಅನ್ನುವಂತಾಗಿದೆ ದ್ವಿಚಕ್ರ ವಾಹನ ಚಾಲಕರ ಪರದಾಟ. (ಸಚಿವ ಜಾರ್ಜ್ ಬೆಂಗಳೂರು ರೌಂಡ್ಸ್)

Vidyapeetha ward in Bengaluru - Roads are in horrible condition

ಕಸದ ಮತ್ತು ರಸ್ತೆ ಸಮಸ್ಯೆಗೆ ಪರ್ಮನೆಂಟ್ ಪರಿಹಾರ ಬಿಡಿ, ಟೆಂಪರರಿ ಪರಿಹಾರದ ಸುದ್ದಿಯೂ ಇಲ್ಲ. ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನಗರದ ಕಸದ ಸಮಸ್ಯೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮೇಲ್ದರ್ಜೆಗೇರಿಸಿದ್ದ ರಾಷ್ಟ್ರೀಯ ವಾಹಿನಿಗಳಿಗೆ ಈಗ ಗಬ್ಬು ನಾರುತ್ತಿರುವ ಕಸಗಳು ಸುಗಂಧದ್ರವ್ಯದಂತಿದೆಯೋ ಗೊತ್ತಿಲ್ಲ.

ಬೆಂಗಳೂರಿನ ಆಳವನ್ನು ಅರಿತಿರುವ ರಾಮಲಿಂಗ ರೆಡ್ಡಿಯವರನ್ನು ಉಸ್ತುವಾರಿಯಿಂದ ಎತ್ತಂಗಡಿ ಮಾಡಿದ್ದು, ಸಮಸ್ಯೆ ಪರಿಹಾರದ ವಿಳಂಬಕ್ಕೆ ಇನ್ನೊಂದು ಕಾರಣ ಇದ್ದರೂ ಇರಬಹುದು. ನಗರದ ಕಸ, ರಸ್ತೆ ಗುಂಡಿಗೆ ಬಿಬಿಎಂಪಿ, ಸರಕಾರ ಕಾರಣ ಅಲ್ಲ ಅನ್ನೋ ಈಗಿನ ನಗರದ ಉಸ್ತುವಾರಿ ಕೆ ಜೆ ಜಾರ್ಜ್ ನೀಡಿರುವ ಹೇಳಿಕೆ ಎಂಥಹಾ ಬಾಲ್ಯಾವಸ್ಥೆಯದ್ದದ್ದು ನೋಡಿ.

ನಾನು ವಾಸವಾಗಿರುವ ಪ್ರದೇಶ ಬೆಂಗಳೂರಿನ ಗ್ರಾಮಾಂತರ ಪ್ರದೇಶವೇನೂ ಅಲ್ಲ, ಕುಗ್ರಾಮವಂತೂ ಅಲ್ಲವೇ ಅಲ್ಲ. ನಗರದ ಹೃದಯ ವ್ಯಾಪ್ತಿಯಲ್ಲಿ ಬರುವ ವಿದ್ಯಾಪೀಠ ವಾರ್ಡಿನಲ್ಲಿರೋದು. ಇದು easy accessible ಎಂದೇ ಹೆಸರಾಗಿರುವ ಬಸವನಗುಡಿಯ ಶಾಸಕ ರವಿ ಸುಬ್ರಮಣ್ಯ ಅವರ ಅಸೆಂಬ್ಲಿ ಕ್ಷೇತ್ರ ವ್ಯಾಪ್ತಿಯದ್ದು.

5-6 ತಿಂಗಳ ಹಿಂದೆ ಹೆಚ್ಚುಕಮ್ಮಿ ಹೇಮಾಮಾಲಿನಿ ಕೆನ್ನೆಯಂತೇ ಇತ್ತು ನಮ್ ಮನೇ ರಸ್ತೆ. ಹಾಗಂತ ಹೇಮಾಮಾಲಿನಿ ಕೆನ್ನೆಯ ಬಗ್ಗೆ ನಿಮಗೆ ಹೇಗೆ ಗೊತ್ತು ಅಂಥಾ ಅಪಾರ್ಥ ಮಾಡಿಕೊಳ್ಳಬೇಡಿ, ಅದೊಂದು ಆಡುಭಾಷೆ ಅಷ್ಟೇ. ಚೆನ್ನಾಗಿದ್ದ ರೋಡಿಗೆ ಒಳಚರಂಡಿ ಇಲಾಖೆಯ ವಕ್ರದೃಷ್ಟಿ ಬಿದ್ದಿದ್ದೇ ರಸ್ತೆ ಕುಲಗೆಟ್ಟಲು ಹೋಗಲು ಕಾರಣವಾಯಿತು.

ಟಾರ್ ಹಾಕಿದ ಮೇಲೆ ರಸ್ತೆ ಅಗಿಯೋದು ನಮ್ಮ ರಾಜಕೀಯ ವ್ಯವಸ್ಥೆಯ ಒಂದು ಭಾಗವಾಗಿರುವುದರಿಂದ, ಬೆಂಗಳೂರಿನ ರಸ್ತೆಗಳಿಗೆ ಆಯುಸ್ಸು ಕಮ್ಮಿ. ಮೂರು ಬಾರಿ ಮುಂದೂಡಲ್ಪಟ್ಟ ಬಿಬಿಎಂಪಿ ಚುನಾವಣೆ, ಚುನಾವಣಾ ನೀತಿಸಂಹಿತೆಯಿಂದ ಐದಾರು ತಿಂಗಳಿನಿಂದ ಅಧ್ವಾನವಾಗಿರುವ ವಿದ್ಯಾಪೀಠ ವಾರ್ಡಿನ ಈ ರಸ್ತೆ, ಮಳೆಯಿಂದಾಗಿ ಗುಂಡಿಯ ನಡುವಿರುವ ರಸ್ತೆಯಂತಾಗಿದೆ. (ಬೆಂಗಳೂರು ರಸ್ತೆಗಳ ಗುಂಡಿ ಮುಚ್ಚಲು 11 ಕೋಟಿ)

Vidyapeetha ward in Bengaluru - Roads are in horrible condition

ಮೊದಲ ಬಾರಿಗೆ ಚುನಾವಣೆ ಗೆದ್ದಿರುವ ಈ ವಾರ್ಡಿನ ಬಿಜೆಪಿ ಕಾರ್ಪೋರೇಟರ್ (ವಾರ್ಡ್ ನಂ. 164) ಶ್ರೀಮತಿ ಶ್ಯಾಮಲಾ ಸಾಯಿಕುಮಾರ್ ಅವರನ್ನು ಸಂಪರ್ಕಿಸಿದಾಗ, ಆದಷ್ಟು ಬೇಗ ಎಲ್ಲಾ ಸರಿಹೋಗುತ್ತೆ ಎನ್ನುವ ಭರವಸೆ ಮಾತು ಹೊರಬರುತ್ತೆ. ನೋಡೋಣ?

ನಗರದ ಪ್ರಮುಖ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ಸದ್ಯದ ಮಟ್ಟಿಗೆ ಆರಂಭವಾಗಿದ್ದರೂ, ಹಣ ಬಿಡುಗಡೆಯ ವಿಚಾರದಲ್ಲಿ ಬಿಬಿಎಂಪಿ/ಸರಕಾರದ ತಾರತಮ್ಯ ಬಿಜೆಪಿ ವಾರ್ಡಿನ ಬೆಂಗಳೂರಿಗರಿಗೆ ಖುಷಿ ಕೊಡುವ ವಿಚಾರವಂತೂ ಅಲ್ಲವೇ ಅಲ್ಲ ಎನ್ನುವುದು ಆಫ್ ದಿ ರೆಕಾರ್ಡ್ ಮಾಹಿತಿ.

English summary
Vidyapeetha ward (BBMP Ward No. 164) in Bengaluru - Roads are in horrible condition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X