ವಿಡಿಯೋ: ಒಂದು ಸಾವಿರ ರೂ. ಗೆ ಐದು ಲೀಟರ್ ಪೆಟ್ರೋಲ್, ಭಾರಿ ಮೋಸ!
ಬೆಂಗಳೂರು, ಮಾರ್ಚ್ 05: ರಾಜಧಾನಿಯ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಕದ್ದು ಜನರಿಗೆ ಮೋಸ ಮಾಡುತ್ತಿರುವ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬಂಕ್ಗಳಲ್ಲಿ ಆಗುವ ಮೋಸವನ್ನು ಪ್ರಶ್ನೆ ಮಾಡಿ ಪರಿಶೀಲನೆ ಮಾಡುವ ತಾಳ್ಮೆ, ಸಮಯ ಯಾರಿಗೂ ಇರಲ್ಲ. ಆದರೆ "ನಮ್ಮ ಚಾಲಕರ ಟ್ರೇಡ್ ಯೂನಿಯನ್ ಚಾಲಕನೊಬ್ಬ ಬೆಂಗಳೂರಿನ ಪೆಟ್ರೋಲ್ ಬಂಕ್ನಲ್ಲಿ ನಡೆದ ಮೋಸವನ್ನು ಸಾಕ್ಷಿಗಳ ಸಮೇತ ಬಯಲು ಮಾಡಿದ್ದಾನೆ. ಈ ಕುರಿತ ಚಾಲಕ ಮಾಡಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ವೈರಲ್:
ನಮ್ಮ ಚಾಲಕರ ಟ್ರೇಡ್ ಯೂನಿಯನ್, ಹೊಸಹಳ್ಳಿ, ವಿಜಯನಗರ ಕ್ಷೇತ್ರದ ಲಿಂಗರಾಜು ಎಂಬುವರೇ ಪೆಟ್ರೋಲ್ ಬಂಕ್ ನ ಮೋಸವನ್ನು ಸಾಕ್ಷಿ ಸಮೇತ ಬಯಲಿಗೆ ಎಳೆದಿದ್ದಾರೆ. ಚಾಮರಾಜಪೇಟೆಯ ಸಿರ್ಸಿ ಸರ್ಕಲ್ ಸಮೀಪ ಇರುವ ಸಿಟಿ ವರ್ಕ್ಸ್ ಪೆಟ್ರೋಲ್ ಬಂಕ್ ನಲ್ಲಿ ಮೋಸ ಮಾಡಲಾಗಿದೆ ಎಂದು ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ. ಒಂದು ಸಾವಿರ ರೂಪಾಯಿಗೆ ಪೆಟ್ರೋಲ್ ಹಾಕಿಸಿದ್ದು, ಆದರ ಬಗ್ಗೆ ಕಾರು ಚಾಲಕ ಅನುಮಾನಗೊಂಡು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಪೆಟ್ರೋಲ್ ಬಂಕ್ ನವರೇ ತರಕಾರು ತೆಗೆದಿದ್ದಾರೆ. ಈ ವೇಳೆ, ಕಾರು ರಿಪೇರಿ ಮಡುವರನ್ನು ಕರೆಸಿ ತಪಾಸಣೆ ನಡೆಸಿ, ಒಂದು ಸಾವಿರ ರೂಪಾಯಿಗೆ ನಾನು ಪೆಟ್ರೋಲ್ ಹಾಕಿಸಿದ್ದೇನೆ. ಅಷ್ಟು ಮೌಲ್ಯದ್ದು ಪೆಟ್ರೋಲ್ ನನ್ನ ವಾಹನದಲ್ಲಿದ್ದರೆ, ಕೂಲಿ ಸಮೇತ ಎಲ್ಲವನ್ನು ನಾನೇ ಕಟ್ಟಿಕೊಡುತ್ತೇನೆ ಎಂದು ಚಾಲಕ ಲಿಂಗರಾಜು ಹೇಳಿದ್ದಾರೆ. ಆ ಬಳಿಕ ಕಾರು ರಿಪೇರಿ ಮಡುವರನ್ನು ಕರೆಸಿ ಕಾರಿನ ಟ್ಯಾಂಕ್ ಬಿಚ್ಚಿಸಿದಾಗ ಕಾರಿನ ಟ್ಯಾಂಕ್ನಲ್ಲಿ ಕೇವಲ ಐದು ನೂರು ರೂಪಾಯಿ ಮೌಲ್ಯದ ಐದು ಲೀಟರ್ ಪೆಟ್ರೋಲ್ ಇರುವುದು ಕಂಡು ಬಂದಿದೆ.
ವಿಡಿಯೋ ಕೈ ಸೇರಿದ್ರೂ ಕ್ರಮವಿಲ್ಲ
ಪೆಟ್ರೋಲ್ ಬಂಕ್ ನಲ್ಲಿ ಮೋಸ ಮಾಡಿರುವ ಸಂಗತಿ ಬಯಲು ಆಗುತ್ತಿದ್ದಂತೆ, ಪೆಟ್ರೋಲ್ ಹಾಕಿದ ಯುವಕನ ಮೇಲೆ ಗೂಬೆ ಕೂರಿಸಿ ಬಂಕ್ ಮಾಲೀಕ ಕೆಲಸಗಾರನನ್ನು ಥಳಿಸಿದ್ದಾರೆ. ವಾದ ವಾಗ್ವಾದ ಬಳಿಕ ವಿಡಿಯೋ ಡಿಲೀಟ್ ಮಾಡುವಂತೆ ಪೆಟ್ರೋಲ್ ಬಂಕ್ನ ಮಾಲೀಕರು ಜಗಳ ತೆಗೆದಿದ್ದಾರೆ. ಅಂತೂ ಈ ವಿಡಿಯೋ ಅಂತ ಸದ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ವಂಚನೆ ವಿಡಿಯೋ ಅಳತೆ ಮತ್ತು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳ ಕೈ ಸೇರಿದೆ. ಈ ವೈರಲ್ ವಿಡಿಯೋ ಅಳತೆ ಮತ್ತು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳಿಗೆ ಕೈ ಸೇರಿ ಒಂದು ದಿನ ಆಗಿದೆ. ಆದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಯಾರೂ ಮುಂದಾಗಿಲ್ಲ. ಪೆಟ್ರೋಲ್ ಬಂಕ್ ಮಾಲೀಕರ ಮುಲಾಜಿಗೆ ಒಳಗಾಗಿರುವ ಕಾರಣಕ್ಕೋ ಏನೋ ? ಈಗಾಗಲೇ ಬಂಕ್ಗೆ ಭೇಟಿ ಮಾಡಿ ತಪಾಸಣೆ ನಡೆಸಬೇಕಿತ್ತು. ಆದರೆ ಇದ್ಯಾವುದೂ ನಮಗೆ ಸಂಬಂಧ ಇಲ್ಲ ಎಂದು ಅಳತೆ ಮತ್ತು ತೂಕದ ಇಲಾಖೆ ಅಧಿಕಾರಿಗಳು ನಿದ್ದೆಯಿಂದ ಎದ್ದಂತೆ ಕಾಣುತ್ತಿಲ್ಲ.
ನೆರೆ ರಾಜ್ಯದಲ್ಲಿ ಕೈಗೊಂಡ ಕ್ರಮ ನಮ್ಮಲ್ಲಿ ಇಲ್ಲ
ಡಿಜಿಟಲ್ ಮೀಟರ್ನಲ್ಲಿ ಚೀಟಿಂಗ್ ಚಿಪ್ ಅಳವಡಿಸಿ ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ಕದಿಯುವ ಬಹುದೊಡ್ಡ ಜಾಲವನ್ನು ನೆರೆಯ ತೆಲಂಗಾಣ ಪೊಲೀಸರು ಬಯಲಿಗೆ ಎಳೆದಿದ್ದರು. ಕರ್ನಾಟಕದಲ್ಲೂ ವಂಚಕ ಚಿಪ್ ಸಂಪರ್ಕ ಜಾಲ ಇರುವ ಬಗ್ಗೆ ತೆಲಂಗಾಣ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿತ್ತು. ಆದರೆ, ಬೆಂಗಳೂರಿನಲ್ಲಿ ಅಳತೆ ಮತ್ತು ತೂಕದ ಇಲಾಖೆ ಅಧಿಕಾರಿಗಳು ಯಾವ ತಪಾಸಣೆಗೂ ಮುಂದಾಗಲಿಲ್ಲ. ಸಿಸಿಬಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸಲು ಮುಂದಾಗಿದ್ದರು. ಅಳತೆ ಮತ್ತು ತೂಲಕದ ಇಲಾಖೆಯ ಅಧಿಕಾರಿಗಳ ನೆರವು ಕೋರಿದ್ದರು. ವಿಪರ್ಯಾಸ ಎಂದರೆ ಅಳತೆ ಮತ್ತು ತೂಕದ ಇಲಾಖೆ ಅಧಿಕಾರಿಗಳು ಪೆಟ್ರೋಲ್ ಬಂಕ್ ಮಾಲೀಕರ ಸಂಘಕ್ಕೆ ಸಿಸಿಬಿ ದಾಳಿ ಮಾಹಿತಿ ಸೋರಿಕೆ ಮಾಡಿದ್ದರು. ಸಿಸಿಬಿ ಪೊಲೀಸರು ದಾಳಿ ಮಾಡುವ ಬಗ್ಗೆ ವಾಟ್ಸಪ್ನಲ್ಲಿ ಸಂದೇಶ ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರಿಗೆ ತಲುಪಿ ಆಗಿತ್ತು. ನಂತರ ದಾಳಿ ಮಾಡಿದರೂ ಏನೂ ಪ್ರಯೋಜನ ಆಗಿರಲಿಲ್ಲ.
ಲೀಗರ್ ಚೀಟಿಂಗ್ ಗೆ ಅಧಿಕಾರಿಳಿಂಗಳಿಂದ ಅವಕಾಶ
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ಗೆ ಕನಿಷ್ಠ ಐದು ರಿಂದ ಹತ್ತು ಎಂ.ಎಲ್ . ಲೂಟಿ ಮಾಡಲಿಕ್ಕೆ ಅನಧಿಕೃತವಾಗಿ ಅಳತೆ ಮತ್ತು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳೇ ಅವಕಾಶ ನೀಢಿದ್ದಾರೆ. ಐದು ಲೀಟರ್ ಇಂಧನ ಹಾಕಿಸಿಕೊಂಡರೆ, 25 ಎಂ.ಎಲ್ ಕಡಿಮೆ ಬಂದರೆ, ಕೇಸು ದಾಖಲಿಸಲಾಗದು ಎಂಬ ಅನಧಿಕೃತ ನಿಯಮ ರೂಪಿಸಿಕೊಂಡು ಪಾಲನೆ ಮಾಡುತ್ತಿದ್ದಾರೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಪೆಟ್ರೋಲ್ ಬಂಕ್ ಮಾಲೀಕರು ಜನ ಸಾಮಾನ್ಯರಿಗೆ ವಂಚನೆ ಮಾಡಲಿಕ್ಕೆ ಅಧಿಕಾರಿಗಳೇ ಅನುಮತಿ ನೀಡಿದ್ದು, ಈ ಸಿಂಪಲ್ ಚೀಟಿಂಗ್ನಿಂದ ಅಳತೆ ಮತ್ತು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳಿಗೆ ಮಾಮೂಲಿ ಸಂದಾಯ ವಾಗುತ್ತದೆ ಎಂಬ ಆರೋಪವಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬಂಕ್ಗಳು ಎಷ್ಟು ಪಾರದರ್ಶಕವಾಗಿವೆ ಎಂಬುದನ್ನು ಸಾಮೂಹಿಕವಾಗಿ ತಪಾಸಣೆ ನಡೆಸುವ ಕಾರ್ಯವನ್ನು ಮಾಡದ ಹೊರತೂ ಈ ಅಕ್ರಮಗಳಿಗೆ ಕಡಿವಾಣ ಬೀಳುವುದಿಲ್ಲ.
Recommended Video