ವಿಡಿಯೋ: ಭಾಷಾ ಹುಳುಕು ನೀತಿ ಖಂಡಿಸಬೇಕು ಹೇಗೆ? ಏಕೆ?
ಬೆಂಗಳೂರು, ಅ.29: ಭಾರತದ ಕೇಂದ್ರ ಸರ್ಕಾರದ ಭಾಷಾ ನೀತಿ ಹಿಂದಿ ಮತ್ತು ಇಂಗ್ಲಿಷ್ ಎರಡನ್ನೇ ತನ್ನ ಅಧಿಕೃತ ಭಾಷೆಗಳೆಂದು ಗುರುತಿಸಿ, ಈ ಎರಡೇ ಭಾಷೆಯಲ್ಲಿ ತನ್ನೆಲ್ಲ ಆಡಳಿತ ನಡೆಸುತ್ತಿದೆ. ಸರ್ಕಾರದ ಭಾಷಾ ನೀತಿಯಲ್ಲಿನ ಹುಳುಕುಗಳನ್ನು ಚಿತ್ರಗಳ ಮೂಲಕ ಜನತೆ ಮುಂದಿಡಲು ಬನವಾಸಿ ಬಳಗ 'ಚಿತ್ರ ಪ್ರದರ್ಶನ' ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಎಲ್ಲರಿಗೂ ನೆನಪಿರಬಹುದು. ಈ ಬಗ್ಗೆ ವಿಡಿಯೋ ಲೇಖನ ಇಲ್ಲಿದೆ.
ಜನರ ಮತ್ತು ವ್ಯವಸ್ಥೆಯ ನಡುವಿನ ದೂರವನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡುವುದು ಪ್ರಜಾಪ್ರಭುತ್ವದ ಗೆಲುವಿಗೆ ಬೇಕಿರುವ ಅತೀ ಮುಖ್ಯ ಅಂಶ. ಸರ್ಕಾರ ಜಾರಿ ಮಾಡುವ ಹತ್ತಾರು ಯೋಜನೆಗಳು ಸಾಮಾನ್ಯ ಜನರನ್ನು ತಲುಪಿ ಯಶಸ್ವಿಯಾಗಬೇಕೆಂದರೆ ಆ ಯೋಜನೆಗಳ ಎಲ್ಲ ಮಾಹಿತಿ, ಅನುಷ್ಠಾನ ಜನರಿಗೆ ಅರ್ಥವಾಗುವ ನುಡಿಯಲ್ಲಿರಬೇಕು.
ಜನರ ಭಾಷೆಗೆ ಬೆಲೆ ಎಲ್ಲಿದೆ?: ಈ ನಿಟ್ಟಿನಲ್ಲಿ ಭಾರತದ ಇಂದಿನ ವ್ಯವಸ್ಥೆಯನ್ನು ಗಮನಿಸಿದಾಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ತನ್ನದೇ ಅಸ್ತಿತ್ವ, ಹೊಣೆಗಾರಿಕೆ ಇದೆಯಾದರೂ ನಾಗರೀಕ ಸೇವೆಗಳಾದ ಅಂಚೆ, ಬ್ಯಾಂಕು, ವಿಮೆ, ಪಿಂಚಣಿ, ರೈಲು, ವಿಮಾನಸೇವೆ, ತೆರಿಗೆ ಹೀಗೆ ಹತ್ತಾರು ಸೇವೆಗಳನ್ನು ಕಲ್ಪಿಸುವ ಕೇಂದ್ರ ಸರ್ಕಾರವು ಜನರ ಜೀವನದ ಮೇಲೆ ಸಹಜವಾಗಿಯೇ ಹೆಚ್ಚಿನ ಪ್ರಭಾವ ಹೊಂದಿದೆ. ಹೀಗಿರುವಾಗ ಆಯಾ ರಾಜ್ಯದ ಜನರ ಭಾಷೆಯಲ್ಲಿ ತನ್ನೆಲ್ಲ ನಾಗರೀಕ ಸೇವೆಗಳನ್ನು ಕಲ್ಪಿಸಬೇಕಾದದ್ದು ಧರ್ಮವೂ, ನ್ಯಾಯವೂ ಆದ ವಿಷಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿನ ಕೇಂದ್ರ ಸರ್ಕಾರಿ ಕಚೇರಿಗಳಲ್ಲೂ ಕನ್ನಡದಲ್ಲಿ ಮಾತನಾಡುವುದು, ಸೇವೆ ಪಡೆಯುವುದು ಒಂದು ಹರಸಾಹಸದ ಕೆಲಸವೇ ಆಗುತ್ತಿದೆ. ಇದು ಸಾಮಾನ್ಯ ಕನ್ನಡಿಗರಿಗೆ ತೀವ್ರ ತೊಂದರೆಯುಂಟು ಮಾಡುತ್ತಿರುವುದಲ್ಲದೇ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆಯುಂಟು ಮಾಡುತ್ತಿದೆ.
ಇದಕ್ಕೆ ಪರಿಹಾರವಾಗಿ ಕೇಂದ್ರವು ತನ್ನ ಆಡಳಿತವನ್ನು ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳಲ್ಲೂ ನಡೆಸುವಂತೆ ತನ್ನ ಆಡಳಿತ ಭಾಷಾ ಕಾಯ್ದೆಗೆ ತಿದ್ದುಪಡಿ ತರಬೇಕು ಅನ್ನುವ ಕೂಗು ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಬಲಗೊಳ್ಳುತ್ತಿದೆ.
ಬನವಾಸಿ ಬಳಗವು ಕಳೆದ ಸೆಪ್ಟೆಂಬರ್ 13ರ ಭಾನುವಾರದಂದು, ಭಾರತದ ಇವತ್ತಿನ ಭಾಷಾ ನೀತಿ ಮತ್ತು ಅದು ಜನಸಾಮಾನ್ಯರಿಗೆ ಉಂಟು ಮಾಡುತ್ತಿರುವ ತೊಂದರೆಗಳ ಬಗ್ಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ಚಿತ್ರ ಪ್ರದರ್ಶನ ಹಮ್ಮಿಕೊಂಡಿತ್ತು. ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ನಡೆದ ಈ ಪ್ರದರ್ಶನದಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿತ್ತು.
ಹಲವಾರು ಮಂದಿ ಈ ಚಿತ್ರಪ್ರದರ್ಶನವನ್ನು ನೋಡಿ, ಸಮಾನತೆಯ ಭಾಷಾನೀತಿಗಾಗಿ ಒತ್ತಾಯಿಸುವ ದೊಡ್ಡ ಮನವಿ ಪತ್ರಕ್ಕೆ ಸಹಿ ಮಾಡಿದರು. "ಹಿಂದೀ ಹೇರಿಕೆ - ಮೂರು ಮಂತ್ರ, ನೂರು ತಂತ್ರ" ಎಂಬ ಹೆಸರಿನ ಹೊತ್ತಗೆಯ ಬರಹಗಾರರಾದ ಆನಂದ್ ಅವರು, ಚಿತ್ರಪ್ರದರ್ಶನವನ್ನು ಬಣ್ಣಿಸುವ ವಿಡಿಯೋ ಕೊಂಡಿ ಇಲ್ಲಿ ನೀಡಲಾಗಿದ್ದು, ಆಸಕ್ತರು ಕೂತಲ್ಲಿಯೇ ಚಿತ್ರಪ್ರದರ್ಶನವನ್ನು ನೋಡಬಹುದಾಗಿದೆ.