ಅನರ್ಹರಿಗೆ ಗೆಲುವು, ಹೆಚ್ಚು ದಿನ ನಡೆಯಲ್ಲ: ಪ್ರಕಾಶ್ ರಾಜ್
ಬೆಂಗಳೂರು, ಡಿಸೆಂಬರ್ 09: ಕರ್ನಾಟಕ ಜನತೆಗೆ ಧನ್ಯವಾದ ತಿಳಿಸಿ, ಬೆನ್ನಿಗೆ ಚೂರಿ ಹಾಕಿದವರು ಮತ್ತೆ ಅಧಿಕಾರಕ್ಕೆ ಬಂದರು, ಆದರೆ ಇದು ಹೆಚ್ಚು ದಿನ ನಡೆಯುವುದಿಲ್ಲ ಎನ್ನುವ ನಂಬಿಕೆ ಇದೆ ಎಂದು ನಟ ಪ್ರಕಾಶ್ ರಾಜ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಅನರ್ಹ ಶಾಸಕರಿಗೆ ರಾಜ್ಯದ ಮಣೆ ಹಾಕಿದ್ದಾರೆ, ಮಾಡಿದುಣ್ಣೋ ಮಾರಾಯ ಎನ್ನುವ ಸ್ಥಿತಿ ಬರುತ್ತದೆ ಎಂದು ನಟ ಪ್ರಕಾಶ್ ರಾಜ್ ಟೀಕಿಸಿದ್ದಾರೆ. ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಬಂದಿದ್ದು, ಅದರಲ್ಲಿ ಬಿಜೆಪಿ ಪಕ್ಷ 12 ಸ್ಥಾನಗಳಲ್ಲಿ ಜಯಗಳಿಸಿದೆ.
ಟ್ವೀಟ್ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಕಾಶ್ ರಾಜ್ ಪ್ರಶ್ನೆ!
ಈ ಹಿನ್ನೆಲೆಯಲ್ಲಿ ಪ್ರಕಾಶ್ ರಾಜ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅನರ್ಹ ಶಾಸಕರಿಗೆ ರಾಜ್ಯದ ಮಣೆ ಹಾಕಿದ್ದಾರೆ, ಮಾಡಿದುಣ್ಣೋ ಮಾರಾಯ ಎನ್ನುವ ಸ್ಥಿತಿ ಬರುತ್ತದೆ ಎಂದು ನಟ ಪ್ರಕಾಶ್ ರಾಜ್ ಟೀಕಿಸಿದ್ದಾರೆ.
ಅನರ್ಹರಿಗೆ ಮಣೆ ಹಾಕಿದ್ದೀರಿ, ಒಳಿತಾಗಲಿ, "ಮಾಡಿದುಣ್ಣೋ ಮಾರಾಯ" ಈ ಮಾತು ಯಾರಿಗೆ ಅನ್ವಯಿಸುತ್ತೋ ಕಾದು ನೋಡೋಣ ಎಂದು ಬರೆದು,ಹ್ಯಾಶ್ ಟ್ಯಾಗ್ ಬಳಸಿ ಜಸ್ಟ್ ಆಸ್ಕಿಂಗ್ ಎಂದಿದ್ದಾರೆ.
ಅವಹೇಳನಕಾರಿ ಹೇಳಿಕೆ: ಪ್ರಕಾಶ್ ರಾಜ್ಗೆ ಸ್ಸಾರಿ ಎಂದ ಪ್ರತಾಪ್ ಸಿಂಹ
ಉಪ ಚುನಾವಣಾ ಪೂರ್ವದಲ್ಲಿ ಟ್ವೀಟ್ ಮೂಲಕ ಹರಿಹಾಯ್ದಿದ್ದ ಪ್ರಕಾಶ್ ರಾಜ್, 'ಹಾವೂ ಸಾಯ್ಬಾರ್ದು, ಕೋಲು ಮುರೀಬಾರ್ದು' ಎನ್ನುವ ತೀರ್ಪಿಗೆ ಆಶೀರ್ವಾದ ಪಡೆದುಕೊಂಡು 'ತೃಪ್ತ' ಶಾಸಕರು ಕೊಂಕಣ ಸುತ್ಕೊಂಡು ಮೈಲಾರಕ್ಕೆ ಬಂದಿವೆ. ಒಳ್ಳೇದೆ ಆಯ್ತು, ಸ್ವಾಭಿಮಾನಿ ಕನ್ನಡಿಗರೇ ಇವುಗಳು ಜನ್ಮ ಜನ್ಮಕ್ಕೂ ಮರೆಯಲಾರದ ತೀರ್ಪು ಕೊಡಬೇಕು, ಇದು ನಮ್ಮ ಜವಾಬ್ದಾರಿ ಎಂದು ಬರೆದುಕೊಂಡಿದ್ದರು.