ಮಿತ್ರನನ್ನು ನೆನಪಿಸಿಕೊಂಡು ಭಾವುಕರಾದ ವೆಂಕಯ್ಯ ನಾಯ್ಡು...
ಬೆಂಗಳೂರು, ಜನವರಿ 7: ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಪೂರೈಕೆ ಮಾಡುತ್ತಿರುವ ಅದಮ್ಯ ಚೇತನದ ಕಾರ್ಯವನ್ನು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಅದಮ್ಯ ಚೇತನದ ಪರಿಸರ ಸ್ನೇಹಿ ಅಡುಗೆ ಮನೆಗೆ ಭೇಟಿ ನೀಡಿದ ಉಪರಾಷ್ಟ್ರಪತಿಗಳು, ಅಲ್ಲಿನ ಕಾರ್ಯಚಟುವಟಿಕೆಗಳು ಮತ್ತು ಬಿಸಿಯೂಟ ಪೂರೈಕೆಯಾಗುತ್ತಿರುವ ಚಟುವಟಿಕೆಗಳ ಬಗ್ಗೆ ಸಂಸ್ಥೆಯ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ್ ಅವರಿಂದ ಮಾಹಿತಿ ಪಡೆದರು.
ಅನಂತಕುಮಾರ್ ಕಟ್ಟಿ ಬೆಳೆಸಿದ ಸಂಸ್ಥೆ
ಈ ವೇಳೆ ಮಾತನಾಡಿದ ವೆಂಕಯ್ಯ ನಾಯ್ಡು ಅವರು, "ಬಹಳ ವರ್ಷಗಳಿಂದ ಅದಮ್ಯ ಚೇತನದ ಬಗ್ಗೆ ತಿಳಿದುಕೊಂಡಿದ್ದೆ. ಇದು ನನ್ನ ಆತ್ಮೀಯ ಸ್ನೇಹಿತರಾಗಿದ್ದ ಅನಂತಕುಮಾರ್ ಮತ್ತು ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರು ಕಟ್ಟಿ ಬೆಳೆಸಿದ ಸಂಸ್ಥೆಯಾಗಿದೆ. ನನ್ನ ನೆಚ್ಚಿನ ಮಿತ್ರ ಅನಂತಕುಮಾರ್ ಅವರು ಈ ಸಂಸ್ಥೆಯನ್ನು ತಮ್ಮ ಸರ್ವಸ್ವವನ್ನಾಗಿಸಿಕೊಂಡಿದ್ದರು. ಅವರು ಇಂದು ನಮ್ಮೊಟ್ಟಿಗೆ ಇಲ್ಲ ಎಂಬುದಕ್ಕೆ ದುಃಖವಾಗುತ್ತಿದೆ ಎಂದು ಕೆಲಕ್ಷಣ ಭಾವುಕರಾದರು.
ಬೆಂಗಳೂರಿನಲ್ಲಿ 'ಅನಂತ್ ಕುಮಾರ್ ಗ್ರಂಥಾಲಯ' ಲೋಕಾರ್ಪಣೆ
ಸಮಾಜ ಸುಧಾರಣೆಯಾಗಲು ಸಾಧ್ಯ
"ಪೌಷ್ಠಿಕಾಂಶ ಆಹಾರ ನೀಡುವ ಹಾದಿಯಲ್ಲಿ ಅದಮ್ಯ ಚೇತನದಂತಹ ಸಂಸ್ಥೆಗಳು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿವೆ. ಪ್ರತಿಯೊಬ್ಬ ವ್ಯಕ್ತಿಯೂ ಸಮಾಜಕ್ಕೆ ಒಂದಲ್ಲಾ ಒಂದು ರೀತಿಯ ಕೊಡುಗೆಯನ್ನು ನೀಡಿದಾಗ ಸಮಾಜ ಸುಧಾರಣೆಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟ ವೆಂಕಯ್ಯನಾಯ್ಡು ಅವರು, ತೇಜಸ್ವಿನಿ ಅನಂತಕುಮಾರ್ ಅವರು ತಮ್ಮ ಇಡೀ ಜೀವನವನ್ನು ಅದಮ್ಯ ಚೇತನ ಉನ್ನತಿಗೆ ಮುಡಿಪಾಗಿಡುವ ಮೂಲಕ ಸಾವಿರಾರು ಮಕ್ಕಳಿಗೆ ಆಹಾರವನ್ನು ಒದಗಿಸುತ್ತಿದ್ದಾರೆ. ಇದು ಶ್ಲಾಘನೀಯವಾಗಿದೆ ಮತ್ತು ಅನುಕರಣೀಯವಾಗಿದೆ' ಎಂದು ಶ್ಲಾಘಿಸಿದರು.
ಉಷಾ ನಾಯ್ಡು ಅವರಿಂದಲೇ ಸಾರು ಮಾಡಲು ಕಲಿತಿದ್ದು
1996 - 97 ನೇ ಸಾಲಿನಲ್ಲಿ ದೆಹಲಿಯ ಸೌತ್ ಅವೆನ್ಯೂ ನಲ್ಲಿರುವ ಮನೆಯಲ್ಲಿ ಒಟ್ಟಿಗೆ ಇದ್ದಾಗ ದಕ್ಷಿಣ ಭಾರತ ಶೈಲಿಯ ಸಾಂಬಾರನ್ನು ಸರಿಯಾಗಿ ಮಾಡಲು ಕಲಿತಿದ್ದು ವೆಂಕಯ್ಯ ನಾಯ್ಡು ಅವರ ಪತ್ನಿ ಉಷಾ ನಾಯ್ಡು ಅವರಿಂದ. ಅಂದು ಅವರಿಂದ ಕಲಿತ ಸಣ್ಣ ಪ್ರಮಾಣದ ಸಾಂಬಾರು ತಯಾರಿಕೆ ಇಂದು ಲಕ್ಷಾಂತರ ಮಕ್ಕಳಿಗೆ ಸಾಂಬಾರು ಮಾಡುವಲ್ಲಿ ಸಹಾಯ ಮಾಡಿದೆ ಎಂದು ತೇಜಸ್ವಿನಿ ಅನಂತಕುಮಾರ್ ನೆನಪು ಮಾಡಿಕೊಂಡರು
ಯುರೋಪಿಯನ್ ತಂಡಕ್ಕೆ ಅದಮ್ಯ ಚೇತನ ಪರಿಚಯಿಸಿದ ತೇಜಸ್ವಿನಿ ಅನಂತ್
ಪ್ರತಿನಿತ್ಯ 1.5 ಲಕ್ಷ ಮಕ್ಕಳಿಗೆ ಬಿಸಿಯೂಟ
"ಶೂನ್ಯ ತ್ಯಾಜ್ಯ ಅಡುಗೆ ಮನೆ ನಿರ್ಮಾಣ ಮಾಡಿದ ಬಗೆಯನ್ನು ವಿವರಿಸಿದರು. ದಿವಂಗತ ಅನಂತಕುಮಾರ್ ಹಾಗೂ ವೆಂಕಯ್ಯನಾಯ್ಡು ಅವರ ಸ್ನೇಹವನ್ನು ನೆನಪಿಸಿಕೊಂಡು ಭಾವುಕರಾದರು. ಅದಮ್ಯ ಚೇತನದಿಂದ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ರಾಜಸ್ಥಾನದ ಜೋಧಪುರ ಅಡುಗೆ ಕೇಂದ್ರಗಳಿಂದ ಪ್ರತಿನಿತ್ಯ 1.5 ಲಕ್ಷ ಮಕ್ಕಳಿಗೆ ಬಿಸಿಯೂಟ ಪೂರೈಕೆ ಮಾಡಲಾಗುತ್ತಿದೆ ಎಂದು ತೇಜಸ್ವಿನಿ ಅನಂತಕುಮಾರ್ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅನಂತಕುಮಾರ್ ಅವರ ಸಹೋದರ ಹಾಗೂ ಅದಮ್ಯ ಚೇತನ ಟ್ರಸ್ಟಿಗಳಾದ ನಂದಕುಮಾರ್, ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಕೃಷ್ಣ ಭಟ್ ಸೇರಿದಂತೆ ಪ್ರಮುಖ ಟ್ರಸ್ಟಿಗಳು ಭಾಗವಹಿಸಿದ್ದರು.