ಬೆಂಗಳೂರಿಗೆ ಬಂದು ಪಾದರಕ್ಷೆ ಕಳೆದುಕೊಂಡ ಉಪರಾಷ್ಟ್ರಪತಿ
ಬೆಂಗಳೂರು, ಜನವರಿ 19: ಸಾಮಾಜಿಕ ಆರ್ಥಿಕ ವಲಯ ಸುಧಾರಣೆ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಚಪ್ಪಲಿ ಕಳೆದುಕೊಂಡು ಚಡಪಡಿಸುಂವತಾಯಿತು.
ನಗರಕ್ಕೆ ಬಂದ ವೆಂಕಯ್ಯ ನಾಯ್ಡು ಅವರು ತಮ್ಮ ಬಹು ಕಾಲದ ಗೆಳೆಯ ಕೇಂದ್ರ ಸಂಸದ ಪಿಸಿ ಮೋಹನ್ ಅವರ ಮನೆಗೆ ಬೆಳಗಿನ ಉಪಹಾರಕ್ಕೆಂದು ತೆರಳಿದರು, ಆ ಸಮಯ ಚಪ್ಪಲಿಗಳನ್ನು ಮನೆ ಹೊರಗೆ ಬಿಟ್ಟು ಹೋಗಿದ್ದರು, ಆದರೆ ಉಪರಾಷ್ಟ್ರಪತಿಗಳು ಮರಳಿ ಬಂದಾಗ ಅವರ ಚಪ್ಪಲಿಗಳು ನಾಪತ್ತೆಯಾಗಿದ್ದವು.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬೆಂಗಳೂರಿಗೆ
ಯಾರೋ ಮಹಾನುಭಾವರು ಉಪರಾಷ್ಟ್ರಪತಿಗಳ ಚಪ್ಪಲಿಯನ್ನೇ ಧರಿಸಿ ಪಲಾಯನ ಮಾಡಿದ್ದರು. ತಮ್ಮ ಚಪ್ಪಲಿ ಕಾಣದೆ ಗಲಿಬಿಲಿಗೊಂಡ ವೆಂಕಯ್ಯ ನಾಯ್ಡು ಅವರು ಮೊದಲು ಕೆಳಗೆ ಬಿಟ್ಟಿದ್ದೇನೆಂದು ನೋಡಿ ಬಂದರು ಅಲ್ಲಿಯೂ ಚಪ್ಪಲಿ ಇರಲಿಲ್ಲ, ವೆಂಕಯ್ಯ ಅವರ ಸಹಾಯಕರು ಕಾರಿನಲ್ಲಿಯೂ ನೋಡಿದರೂ ಅಲ್ಲಿಯೂ ಚಪ್ಪಲಿ ಇರಲಿಲ್ಲ, ಕೊನೆಗೆ ಬೇರೆ ದಾರಿ ಕಾಣದೆ ಹೊಸ ಚಪ್ಪಲಿ ಕೊಂಡು ತರುವಂತೆ ಸೂಚಿಸಿ ಮತ್ತೆ ಮೇಲೆ ಹೋಗಿ ಮೋಹನ್ ಅವರ ಮನೆ ಹೊಕ್ಕರು.
ವೆಂಕಯ್ಯ ನಾಯ್ಡು ಸಹಾಯಕರು ಹತ್ತಿರದಲ್ಲೇ ಇದ್ದ ಬಾಟಾ ಶೋರೂಂಗೆ ತೆರಳಿ ಹೊಸ ಚಪ್ಪಲಿ ಖರೀದಿಸಿ ತಂದು ವೆಂಕಯ್ಯ ಅವರಿಗೆ ನೀಡುವವರೆಗೆ ಅವರು ಬರಿಗಾಲಲ್ಲಿ ಚಪ್ಪಲಿಗಾಗಿ ಕಾಯುತ್ತಾ ಇದ್ದರು.
ವೆಂಕಯ್ಯ ನಾಯ್ಡು ಅವರ ಚಪ್ಪಲಿ ಕಳೆದ ಪ್ರಕರಣ ಅಲ್ಲಿ ಹಾಜರಿದ್ದ ಬಿಜೆಪಿ ಮುಖಂಡರಿಗೂ ಇರಿಸುಮುರುಸು ಉಂಟು ಮಾಡಿತು, ಆದರೆ ಪುಣ್ಯಕ್ಕೆ ಯಾರೂ ಮಾಧ್ಯಮದವರ ಮುಂದೆ ಬಂದು ಪ್ರಕರಣವನ್ನು ಎನ್ಐಎ ತನಿಖೆಗೆ ಒತ್ತಾಯಿಸಲಿಲ್ಲ ಹಾಗೂ ವೆಂಕಯ್ಯ ನಾಯ್ಡು ಅವರ ಚಪ್ಪಲಿ ನಾಪತ್ತೆ ಹಿಂದೆ ಕಾಂಗ್ರೆಸ್ ಕೈವಾಡ (ಕಾಲುವಾಡ) ಇದೆ ಎಂದು ಆರೋಪ ಮಾಡಲಿಲ್ಲ!