'ಅದಮ್ಯ ಚೇತನ'ದ ಅಡುಗೆ ಮನೆ ನೋಡಲು ಬಂದ ಉಪರಾಷ್ಟ್ರಪತಿ
ಬೆಂಗಳೂರು, ಜನವರಿ 06: ಮಾಜಿ ಸಂಸದ, ದಿವಂಗತ ಅನಂತ್ಕುಮಾರ್ ಸ್ಥಾಪಿಸಿದ್ದ ಅದಮ್ಯ ಚೇತನ ಟ್ರಸ್ಟ್ನ ಶೂನ್ಯ ತ್ಯಾಜ್ಯ ಅಡುಗೆ ಮನೆ ನೋಡಲು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಬೆಂಗಳೂರಿಗೆ ಬಂದಿದ್ದಾರೆ.
ಹೌದು, ವೆಂಕಯ್ಯ ನಾಯ್ಡು ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದು, ಅವರನ್ನು ಡಿಸಿಎಂ ಅಶ್ವತ್ಥನಾರಾಯಣ ಅವರು ಬರಮಾಡಿಕೊಂಡಿದ್ದಾರೆ. ಕಾರ್ಯಕ್ರಮ ಪಟ್ಟಿಯಲ್ಲಿನ ಪ್ರಮುಖ ಕಾರ್ಯಕ್ರಮ 'ಅದಮ್ಯ ಚೇತನ' ಟ್ರಸ್ಟ್ಗೆ ಭೇಟಿ ಮತ್ತು ಅಡುಗೆ ಮನೆ ವೀಕ್ಷಣೆ ಆಗಿದೆ.
ಅದಮ್ಯ ಚೇತನ ಟ್ರಸ್ಟ್ ಲಕ್ಷಾಂತರ ಮಕ್ಕಳಿಗೆ ಪ್ರತಿದಿನ ಊಟ ಹಾಕುತ್ತಿದೆ. ಸಾವಿರಾರು ಶಾಲೆಗಳಿಗೆ ಊಟವನ್ನು ನೀಡುತ್ತಿದೆ, ಆದರೆ ಅವರ ಅಡುಗೆ ಮನೆಯಲ್ಲಿ ಸ್ವಲ್ಪವೂ ತ್ಯಾಜ್ಯ ಉಳಿಯುವುದಿಲ್ಲ, ಅಚ್ಚುಕಟ್ಟಾದ ರೀತಿಯಲ್ಲಿ ಅವರು ಅಡುಗೆ ಮನೆ ನಿರ್ವಹಿಸುತ್ತಾರೆ. ಈ ಉತ್ತಮ ಮಾದರಿಯನ್ನು ಕಣ್ಣು ತುಂಬಿಕೊಳ್ಳಲೆಂದು ವೆಂಕಯ್ಯ ನಾಯ್ಡು ಬೆಂಗಳೂರಿಗೆ ಆಗಮಿಸಿದ್ದಾರೆ.
2003ರಲ್ಲಿ ಆರಂಭವಾದ ಅನ್ನಪೂರ್ಣ ಬಿಸಿಯೂಟ ಯೋಜನೆಯಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಪ್ರತಿನಿತ್ಯ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ರಾಜಸ್ಥಾನದ ಜೋಧಪುರ್ ಅಡುಗೆ ಕೇಂದ್ರಗಳಿಂದ 1,50,000 ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಸರಬರಾಜು ಮಾಡುತ್ತಿದೆ. ಇದುವರೆಗೂ ಸುಮಾರು 47 ಕೋಟಿ ಊಟ ಸರಬರಾಜು ಮಾಡಿದ ಹೆಗ್ಗಳಿಕೆ ಅದಮ್ಯ ಚೇತನ ಸಂಸ್ಥೆಯದ್ದು.
ಅದಮ್ಯ ಚೇತನ ಅಡುಗೆ ಮನೆ ಭೇಟಿ ಹೊರತಾಗಿ, ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅವರ ಬೃಂದಾವನ ಭೇಟಿ, ಕರ್ನಾಟಕ ರಾಜ್ಯದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಹೆಚ್ಚುವರಿ ನ್ಯಾಯಮೂರ್ತಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ, ಎನ್ಎಎಸಿ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಅನಂತ್ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ಕುಮಾರ್ ಅವರು ಈಗ 'ಅದಮ್ಯ ಚೇತನ'ವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.