ಭಗವಾನ್ ವಿರುದ್ಧ ವಿಎಚ್ಪಿ ಸಲ್ಲಿಸಲಿದೆ ನೂರು ದೂರು
ಬೆಂಗಳೂರು, ಸೆಪ್ಟೆಂಬರ್ 24 : ಹಿಂದೂಗಳ ಭಾವನೆ ಕೆರಳಿಸುವಂಥ ಮಾತನಾಡಿದ್ದ 'ಚಿಂತಕ' ಪ್ರೊ.ಕೆ.ಎಸ್. ಭಗವಾನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿರುವ ಬೆನ್ನಲ್ಲೇ, ವಿಶ್ವ ಹಿಂದೂ ಪರಿಷತ್ ಕೂಡ ದೂರು ಸಲ್ಲಿಸಲಿದೆ. ಅದೂ ಒಂದೆರಡಲ್ಲ, ಅನಾಮತ್ ನೂರು ದೂರುಗಳನ್ನು ಸಲ್ಲಿಸಲು ಸಿದ್ಧತೆ ನಡೆಸಿದೆ.
ರಾಮಾಯಣದ ರಾಮ ತನ್ನ ಅಪ್ಪನಿಗೆ ಹುಟ್ಟಿದವನೇ ಅಲ್ಲ, ಮಹಾಭಾರತ ಭಯೋತ್ಪಾದಕರನ್ನು ಹುಟ್ಟಿಸುತ್ತದೆ, ಭಗವದ್ಗೀತೆಯನ್ನು ಸುಡಬೇಕು ಮುಂತಾದ ಅಸಂಬದ್ಧ ಹೇಳಿಕೆಗಳನ್ನು ನೀಡಿ ನಾಡಿನ ಸಮಸ್ತ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿರುವ ನಿವೃತ್ತ ಆಂಗ್ಲ ಪ್ರೊಫೆಸರ್ ಕೆ.ಎಸ್. ಭಗವಾನ್ ವಿರುದ್ಧ ಈಗ ವಿಶ್ವ ಹಿಂದೂ ಪರಿಷತ್ ಕೂಡ ತಿರುಗಿಬಿದ್ದಿದೆ.
ಈ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ವಿಎಚ್ಪಿ ಲೀಗಲ್ ಸೆಲ್ ಅಧ್ಯಕ್ಷ ಜಗದೀಶ್ ಶೇನವಾ ಅವರು, ಇಂಥ ಸೋಕಾಲ್ಡ್ ಬುದ್ಧಿಜೀವಿಗಳು ಹಿಂದೂಗಳ ವಿರುದ್ಧ ಮಾತ್ರ ದನಿ ಎತ್ತುತ್ತಾರೆ. ಹಿಂದೆ ಸಂಗೀತ ನಿರ್ದೇಶಕ ಎಆರ್ ರಹಮಾನ್ ವಿರುದ್ಧ ಫತ್ವಾ ಹೊರಡಿಸಿದಾಗ ತುಟಿ ಪಿಟಕ್ ಅಂದಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. [ಭಗವಾನ್ ಅವರಿಗೆ ಪ್ರಶಸ್ತಿ ಯಾಕೆ ಕೊಡಬಾರದು?]
ಬೆಂಗಳೂರು ಪೊಲೀಸರಿಂದ ವಿಚಾರಣೆ
ಕೆಎಸ್ ಭಗವಾನ್ ವಿರುದ್ಧ ಉಡುಪಿ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಗೆ ವರ್ಗಾವಣೆ ಆದನಂತರ ಭಗವಾನ್ ಅವರನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295(ಎ) ಅಡಿಯಲ್ಲಿ ಕೇಸ್ ದಾಖಲಾಗಿದೆ. [ಕೆಎಸ್ ಭಗವಾನ್ ಯಾರು?]
ಸೆಕ್ಷನ್ 295(ಎ) ಏನು ಹೇಳುತ್ತದೆ?
ದುರುದ್ದೇಶದಿಂದ ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆ ಅಥವಾ ಭಾವನೆಯನ್ನು ಕೆರಳಿಸಿದರೆ, ಉದ್ದೇಶಪೂರ್ವಕವಾಗಿ ಆಯಾ ಧರ್ಮವನ್ನು ಅವಹೇಳನ ಮಾಡಿದರೆ ಅಥವಾ ಅವಮಾನವಾಗುವಂಥಾ ಮಾತುಗಳನ್ನಾಡಿದರೆ ಅಂಥವರು ಮೂರು ವರ್ಷಗಳವರೆಗೆ ಜೈಲು ಶಿಕ್ಷೆಗೆ ಅರ್ಹರಾಗುತ್ತಾರೆ.
ದೂರಿನ ವಿರುದ್ಧ ಮೇಲ್ಮನವಿ
ಒಂದು ಕಡೆ ಭಗವಾನ್ ವಿರುದ್ಧ ದೂರು ದಾಖಲಾಗಿದ್ದರೆ, ಮತ್ತೊಂದು ಕಡೆ ಭಾರತೀಯ ವೈಚಾರಿಕ ಒಕ್ಕೂಟ (Federation of Indian Rationalist Association) ಈ ದೂರಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಚಿಂತನೆ ನಡೆಸಿದೆ. ದೂರು ನೀಡಿದ್ದರಿಂದ ಭಾರತೀಯ ಸಂವಿಧಾನ ನೀಡುವ ವಾಕ್ ಸ್ವಾತಂತ್ರ್ಯದ ಹರಣವಾದಂತಾಗಿದೆ ಎಂದು ಒಕ್ಕೂಟ ಮೇಲ್ಮನವಿ ಸಲ್ಲಿಸುವ ತೀರ್ಮಾನಕ್ಕೆ ಬಂದಿದೆ.