ಬೆಂಗಳೂರಿನಲ್ಲಿ ಟೋಯಿಂಗ್ ತಾತ್ಕಾಲಿಕ ಸ್ಥಗಿತ: 15 ದಿನದಲ್ಲಿ ಹೊಸ ವ್ಯವಸ್ಥೆ
ಬೆಂಗಳೂರು,ಫೆ.2: ವಾಹನಗಳ ಟೋಯಿಂಗ್ ಮಾಡಿ ದಂಡ ಶುಲ್ಕ ವಸೂಲಿ ಮಾಡುವ ಸಂಬಂಧ ಹೊಸ ಸರಳೀಕೃತ ವ್ಯವಸ್ಥೆ ಬರುವವರೆಗೂ ಬೆಂಗಳೂರು ನಗರದಲ್ಲಿ ಟೋಯಿಂಗ್ ಸ್ಥಗಿತಗೊಳಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ನಗರದಲ್ಲಿ ಸುಗಮ ವಾಹನಗಳ ಸಂಚಾರಕ್ಕೆ ನೆರವಾಗುವ ಹಾಗೂ ಸಾರ್ವಜನಿಕರು ಕಿರುಕುಳ ಉಂಟಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದನ್ನು ನಿವಾರಿಸಲು ಸರ್ಕಾರ ಶೀಘ್ರದಲ್ಲಿಯೇ ಸರಳೀಕೃತ ವ್ಯವಸ್ಥೆಯೊಂದನ್ನು ಜಾರಿಗೆ ತರಲು ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಸಮಾಲೋಚನೆ ನಡೆಸಿದ್ದೇನೆ. ಹಾಗೂ ಮಾರ್ಗದರ್ಶನ ಪಡೆದಿದ್ದೇನೆ. ಮುಂದಿನ ಹದಿನೈದು ದಿನಗಳ ಒಳಗೆ ಹೊಸ ಮತ್ತು ಸರಳೀಕೃತ ಟೋಯಿಂಗ್ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಪ್ರಸ್ತುತ ದಂಡದ ಮೊತ್ತದ ಪರಿಷ್ಕರಣೆಯೂ ಸೇರಿದಂತೆ ಹಲವು ಸ್ತರಗಳಲ್ಲಿ ಚರ್ಚೆ ನಡೆದಿದೆ. ಟೋಯಿಂಗ್ ಸಂಬಂಧಿಸಿದಂತೆ ಜನರು ಏನೇನು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂಬುದರ ಬಗ್ಗೆಯೂ ಅಭಿಪ್ರಾಯಗಳನ್ನು ಪಡೆಯಲಾಗಿದೆ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗಿ ಸರಳೀಕೃತ ವ್ಯವಸ್ಥೆಯೊಂದನ್ನು ಜಾರಿ ಮಾಡಲಾಗುವುದು ಎಂದು ಹೇಳಿದರು.
ನಗರದಲ್ಲಿ ಹೊಸ ಟೋಯಿಂಗ್ ವ್ಯವಸ್ಥೆ ಘೋಷಣೆ ಆಗುವವರೆಗೂ ನಗರ ಪೊಲೀಸ್ ಸಿಬ್ಬಂದಿಗಳೇ ನೋ ಪಾರ್ಕಿಂಗ್ ಉಲ್ಲಂಘನೆ ಪ್ರಕರಣಗಳನ್ನೂ ನಿಭಾಯಿಸುತ್ತಾರೆ ಎಂದು ಆರಗ ಜ್ಞಾನೇಂದ್ರ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಟೋಯಿಂಗ್ ಬಗ್ಗೆ ಆಕ್ರೋಶ:
ನಗರದಲ್ಲಿ ಅವ್ಯವಾಹತವಾಗಿ ನಡೆಯುತ್ತಿದ್ದ ಟೋಯಿಂಗ್ ದಂಡ ವಸೂಲಿ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇತ್ತೀಚೆಗೆ ಪೊಲೀಸ್ ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆದ ಪ್ರಕರಣಗಳೂ ನಡೆದಿದ್ದವು. ಪರಿಸ್ಥಿತಿಯ ತೀವ್ರತೆ ಅರಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸದ್ಯ ಇರುವ ಟೋಯಿಂಗ್ ಪದ್ಧತಿಯಲ್ಲಿ ಬದಲಾವಣೆ ಮಾಡುವಂತೆ ಸೂಚಿಸಿದ್ದರು.