ಟೋಯಿಂಗ್ ವಿರುದ್ಧ ವಾಹನ ಸವಾರರು ಮುಗಿ ಬೀಳಲು ಕಾರಣವೇನು ಗೊತ್ತಾ?
ಬೆಂಗಳೂರು ಡಿ. 04: ರಾಜಧಾನಿ ಬೆಂಗಳೂರಿನಲ್ಲಿ ನೋ ಪಾರ್ಕಿಂಗ್ ಹೆಸರಿನಲ್ಲಿ ಟೋಯಿಂಗ್ ಮಾಡುತ್ತಿರುವ ಸಂಚಾರ ಪೊಲೀಸರ ಕ್ರಮದ ಬಗ್ಗೆ ಸಾರ್ವಜನಿಕರ ಅಸಹನೆ ಕಟ್ಟೆ ಹೊಡೆದಿದೆ. ಹೀಗಾಗಿ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ನಡೆಯುತ್ತಿವೆ. ಮತ್ತೊಂದಡೆಗೆ ಹಲ್ಲೆ ಮಾಡಿದವರನ್ನು ಬಂಧಿಸಿ ಜೈಲಿಗೆ ತಳ್ಳುವ ಮೂಲಕ ಜನರ ಸಿಟ್ಟಿನ ಮೇಲೆ ಕಾನೂನು ಪ್ರಯೋಗ ಮಾಡಲಾಗುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ಪದೇಪದೇ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ನಡೆಯುತ್ತಲೇ ಇದೆ. ಶುಕ್ರವಾರ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ವ್ಯಾಪ್ತಿಯ ಬಂಡೆಪಾಳ್ಯದಲ್ಲಿ ಟೋಯಿಂಗ್ ಮಾಡಿದ್ದ ಟೈಗರ್ ವಾಹನದ ಸಂಚಾರ ಸಿಬ್ಬಂದಿಯನ್ನು ಮೂವರು ಸಾರ್ವಜನಿಕವಾಗಿ ನಿಂದನೆ ಮಾಡಿದ್ದಾರೆ. ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ. ಸಾರ್ವಜನಿಕರವಾಗಿ ಸಂಚಾರ ಪೊಲೀಸರನ್ನು ಅಡ್ಡಗಟ್ಟಿ ವಾಹನ ಹತ್ತದಂತೆ ತಡೆದಿದ್ದಾರೆ. ಇದನ್ನು ನೋಡಿದ ಸಾರ್ವಜನಿಕರು ಸಹ ಪೊಲೀಸರ ಹಾಗೂ ಟೋಯಿಂಗ್ ಸಿಬ್ಬಂದಿ ರೆಕಾರ್ಡ್ ಮಾಡಿಕೊಂಡಿದ್ದ ವಿಡಿಯೋಗಳನ್ನು ಡಿಲೀಟ್ ಮಾಡಿಸಿದ್ದಾರೆ.
ಸಂಚಾರ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದು, ಸಂಚಾರ ಪೊಲೀಸರು ನೀಡಿದ ದೂರಿನ ಮೇರೆಗೆ ಮೂವರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕ ಸೇವೆಗೆ ಅಡ್ಡಿ ಪಡಿಸಿದ ಹಾಗು ಅವಾಚ್ಯ ಪದಗಳಿಂದ ನಿಂದನೆ ಮಾಡಿದ ಅರೋಪದಡಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಪದೇಪದೇ ವಿವಾದ:
ರಾಜಧಾನಿ ಬೆಂಗಳೂರಿನಲ್ಲಿ ವಾಹನಗಳನ್ನು ನಿಲ್ಲಿಸಲು ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ. ಪೇ ಅಂಡ್ ಪಾರ್ಕಿಂಗ್ ಗೂ ಅವಕಾಶ ಮಾಡಿಲ್ಲ. ಇನ್ನು ಬಿ ಟ್ರಾಕ್ ಯೋಜನೆಯಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸಿಕ್ಕ ಸಿಕ್ಕಲ್ಲಿ ನೋ ಪಾರ್ಕಿಂಗ್ ನಾಮಫಲಕ ಹಾಕಲಾಗಿದೆ. ಬೆಂಗಳೂರಿನಲ್ಲಿರುವ 40 ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ ಅಡಿಯಲ್ಲಿ ಸಿಕ್ಕಸಿಕ್ಕಲ್ಲಿ ನೋ ನಿಯಮ ಬಾಹಿರ ನೋ ಪಾರ್ಕಿಂಗ್ ಬೋರ್ಡ್ ಹಾಕಲಾಗಿದೆ. ಹಾಲಿ ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡರ ಆದೇಶದ ಪ್ರಕಾರ ಪಾರ್ಕಿಂಗ್ ಬೋರ್ಡ್ ಹೊರತು ಪಡಿಸಿದ ಎಲ್ಲಾ ಜಾಗಗಳು ನೋ ಪಾರ್ಕಿಂಗ್ ಎಂದೇ ಪರಿಗಣಿಸಿ ಟೋಯಿಂಗ್ ಗೆ ಆದೇಶ ಮಾಡಿದ್ದಾರೆ. ಹೀಗಾಗಿ ವಾಹನ ಸವಾರರು ಅನಿವಾರ್ಯವಾಗಿ ನೋ ಪಾರ್ಕಿಂಗ್ ಪ್ರದೇಶದಲ್ಲಿಯೇ ವಾಹನ ನಿಲ್ಲಿಸಿ ನಿಯಮ ಉಲ್ಲಂಘನೆ ಮಾಡುವಂತಾಗಿದೆ.
ಅನಿವಾರ್ಯ ಪರಿಸ್ಥಿತಿಗೆ ಸಿಲುಕಿ ವಾಹನ ಸವಾರರು ನೋ ಪಾರ್ಕಿಂಗ್ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಬೆಂಗಳೂರಿನಲ್ಲಿ 110 ಟೈಗರ್ ವಾಹನಗನ್ನು ಟೋಯಿಂಗ್ ಗೆ ಬಿಡಲಾಗಿದೆ. ಇನ್ನು ಟೋಯಿಂಗ್ ಬಗ್ಗೆ ರೂಪಿಸಿಕೊಂಡಿರುವ ಅಲಿಖಿತ ನಿಯಮಗಳನ್ನು ಪಾಲಿಸುವ ಟೋಯಿಂಗ್ ಸಿಬ್ಬಂದಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಅಲ್ಲದೇ ಸಾರ್ವಜನಿಕರಿಂದ ಹಲ್ಲೆಗೆ ಒಳಗಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಇತ್ತೀಚೆಗೆ ಯಲಹಂಕದಲ್ಲಿ ಟೋಯಿಂಗ್ ವಾಹನದ ಮೇಲಕ್ಕೆ ಹತ್ತಿ ಸಾರ್ವಜನಿಕರು ಟೋಯಿಂಗ್ ಸಿಬ್ಬಂದಿಗೆ ಥಳಿಸಿದ್ದರು. ಇದರ ನಡುವೆ ಬಾಣಸವಾಡಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಟೋಯೀಂಗ್ ವಾಹನ ಸಿಬ್ಬಂದಿಯನ್ನು ಅಟ್ಟಾಡಿಸಿ ಹಲ್ಲೆ ಮಾಡಿದ್ದರು. ಆ ಬಳಿಕ ಎರಡೂ ಪ್ರಕರಣದಲ್ಲಿ ಹಲ್ಲೆ ಮಾಡಿದವರನ್ನು ಪೊಲೀಸರು ಬಂಧಿಸಿದ್ದರು.
ಈ ಸಮಸ್ಯೆಯ ಮೂಲ ನೋಡಿದರೆ ಪೊಲೀಸ್ ಇಲಾಖೆಯ ಈ ಸಮಸ್ಯೆಗೆ ಮೂಲ ಕಾರಣ ಎಂಬುದು ಕಾಣುತ್ತಿದೆ. ಒಂದೆಡೆ ಜನ ವಸತಿ ಪ್ರದೇಶದಲ್ಲಿ ಕೂಡ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತದೆ. ಅದೇ ಮಾಮೂಲಿ ಕೊಡುವ ಹೋಟೆಲ್ ರೆಸ್ಟೋರೆಂಟ್, ಇತರೆ ವಾಣಿಜ್ಯ ಚಟುವಟಿಕೆ ಕೇಂದ್ರಗಳ ಎದುರು ವಾಹನ ನಿಲ್ಲಿಸಿದರೂ ಟೋಯಿಂಗ್ ಮಾಡುವುದಿಲ್ಲ. ಬೆಂಗಳೂರಿನಲ್ಲಿ ವಾಹನಗಳ ಪಾರ್ಕಿಂಗ್ ಗೆ ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ ಅನಿವಾರ್ಯವಾಗಿ ಜನ ಸಾಮಾನ್ಯರು ಸಂಚಾರ ನಿಯಮ ಉಲ್ಲಂಘನೆ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಇನ್ನು ಅನಿವಾರ್ಯವಾಗಿ ದುಬಾರಿ ದಂಡ ವಿಧಿಸುವ, ದಂಡದ ಹೆಸರಿನಲ್ಲಿ ಮಾಮೂಲಿ ವಸೂಲಿ ಮಾಡುವುದನ್ನು ನೋಡಲಾಗದೇ ಸಾರ್ವಜನಿಕರು ಕೂಡ ಟೋಯಿಂಗ್ ವಾಹನಗಳ ಮೇಲೆ ಮುಗಿ ಬೀಳುತ್ತಾರೆ. ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಯಾವ ಚಕಾರ ಎತ್ತದ ಜನರು ಟೋಯಿಂಗ್ ಮೇಲೆ ಮಾತ್ರ ತಮ್ಮ ಸಿಟ್ಟು ಹೊರ ಹಾಕುತ್ತಿದ್ದಾರೆ. ಇದನ್ನು ಅರಿಯದೇ ಪೊಲೀಸ್ ಇಲಾಖೆ ಕೇವಲ ದಂಡದ ಮೂಲಕವೇ ಸಮಸ್ಯೆಗೆ ಪರಿಹಾರ ಕಂಡಿಕೊಳ್ಳಲು ಹೊರಟಿರುವುದು ದೊಡ್ಡ ದುರಂತ.
ರಾಜಧಾನಿಯಲ್ಲಿ ವಾಹನಗಳ ದಟ್ಟಣೆ ಜಾಸ್ತಿ. ಅದಕ್ಕೆ ತಕ್ಕ ಹಾಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಈ ವಿಚಾರವಾಗಿ ಬಿಬಿಎಂಪಿ ಹಾಗೂ ಸಂಚಾರ ಪೊಲೀಸರ ಒಗ್ಗೂಡಿ ರಸ್ತೆ ಬದಿ ಪಾವತಿಸಿ ಪಾರ್ಕಿಂಗ್ ಗೆ ಅವಕಾಶ ಕೊಡಬೇಕು. ಅದನ್ನು ಪಾಲಿಸದಿದ್ದರೆ ದಂಡ ವಿಧಿಸುವುದಲ್ಲಿ ಅರ್ಥವಿದೆ. ಅದನ್ನು ಬಿಟ್ಟು, ಇಡೀ ಬೆಂಗಳೂರು ಕಮೀಷನರೇಟರ್ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಅಂತ ಬೋರ್ಟ್ ಇಲ್ಲದ ಎಲ್ಲಾ ಜಾಗಗಳು ನೋ ಪಾರ್ಕಿಂಗ್ ಪ್ರದೇಶ ಎಂದು ಭಾವಿಸಿ ಟೋಯಿಂಗ್ ಮಾಡಿದರೆ ಇದಕ್ಕೆ ಬಲಿ ಪಶು ಆಗುತ್ತಿರುವುದು ಸಂಚಾರ ಕೆಳ ಹಂತದ ಪೊಲೀಸ್ ಸಿಬ್ಬಂದಿ ಮತ್ತು ಟೋಯಿಂಗ್ ಕೆಲಸಗರರು. ಈ ಸಮಸ್ಯೆಯ ಮೂಲ ಅರಿತು ಪರಿಹಾರ ಕಂಡುಕೊಳ್ಳದಿದ್ದರೆ, ಭವಿಷ್ಯದಲ್ಲಿ ಸಂಚಾರ ಪೊಲೀಸರು ಟೋಯಿಂಗ್ ವಾಹನ ಹತ್ತಲಾಗದಂತಹ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿ ಪಡಬೇಕಿಲ್ಲ.
Recommended Video