ಸುಮನಹಳ್ಳಿ ಫ್ಲೈ ಓವರ್ನಲ್ಲಿ ಗುಂಡಿ, ಸಂಚಾರ ದಟ್ಟಣೆ
ಬೆಂಗಳೂರು, ನವೆಂಬರ್ 03 : ಬೆಂಗಳೂರಿನ ಸುಮನಹಳ್ಳಿ ಫ್ಲೈ ಓವರ್ ಮೇಲೆ ವಾಹನ ಸಂಚಾರವನ್ನು 10 ದಿನಗಳ ಕಾಲ ಬಂದ್ ಮಾಡಲಾಗಿದೆ. ಇದರಿಂದಾಗಿ ನಾಯಂಡಹಳ್ಳಿ-ತುಮಕೂರು ರಸ್ತೆ ಸಂಪರ್ಕಿಸುವ ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
ಸುಮನಹಳ್ಳಿ ಫ್ಲೈ ಓವರ್ ಮೇಲೆ ಸುಮಾರು 6 ಅಡಿಗಳಷ್ಟು ಗುಂಡಿ ಬಿದ್ದ ಹಿನ್ನಲೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ರಾಜರಾಜೇಶ್ವರಿ ನಗರ ವಲಯದ ವ್ಯಾಪ್ತಿಗೆ ಒಳಪಡುವ ಈ ರಸ್ತೆಯಲ್ಲಿ ಗುಂಡಿ ಮುಚ್ಚುವ ಕಾರ್ಯವನ್ನು ಬಿಬಿಎಂಪಿ ಕೈಗೊಳ್ಳಲಿದೆ.
10 ದಿನಗಳ ಕಾಲ ಸುಮನಹಳ್ಳಿ ಮೇಲ್ಸೇತುವೆ ಬಂದ್
ಫ್ಲೈ ಓವರ್ ಮೇಲೆ ಗುಂಡಿ ಕಾಣಿಸಿಕೊಂಡ ತಕ್ಷಣ ಸಂಚಾರಿ ಪೊಲೀಸರು ವಾಹನ ಸಂಚಾರ ನಿಷೇಧಿಸಿದ್ದಾರೆ. ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ನಾಗರಬಾವಿ ಮತ್ತು ಡಾ. ರಾಜ್ ಕುಮಾರ್ ಸಮಾಧಿ ನಡುವಿನ ರಸ್ತೆಯಲ್ಲಿ ಸಂಚಾರ ದಟ್ಟಣೆ ಇದೆ.
ಚಿತ್ರಗಳು : ಉಡುಪಿಯಲ್ಲಿ ದಿಢೀರ್ ಮಳೆ; ಕೊಚ್ಚಿ ಹೋದ ರಸ್ತೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್, ಆಯುಕ್ತರು ಫ್ಲೈ ಓವರ್ ಮೇಲಿನ ಗುಂಡಿಯನ್ನು ಪರಿಶೀಲನೆ ನಡೆಸಿದರು. ಗುಂಡಿಯನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಸಲಹೆಗಳನ್ನು ನೀಡಿದ್ದಾರೆ. ಇನ್ನೂ 10 ದಿನಗಳ ಕಾಲ ಫ್ಲೈ ಓವರ್ ಮೇಲೆ ವಾಹನ ಸಂಚಾರ ಇರುವುದಿಲ್ಲ.
ತಾಜ್ ವೆಸ್ಟೆಂಡ್ ಹೋಟೆಲ್ಗೆ ದಂಡ ಹಾಕಿದ ಬಿಬಿಎಂಪಿ
ಜಂಟಿ ಆಯುಕ್ತರು ಹೇಳಿದ್ದೇನು?
ಆರ್. ಆರ್. ನಗರದ ಜಂಟಿ ಆಯುಕ್ತ ಎಚ್. ಬಾಲಶೇಖರ್ ಮಾಧ್ಯಮಗಳ ಜೊತೆ ಮಾತನಾಡಿ, "ಫ್ಲೈ ಓವರ್ ಮೇಲಿನ ಕಾಂಕ್ರೀಟ್ ಕಿತ್ತು ಹೋಗಿ 6*4 ಅಳತೆಯ ಗುಂಡಿ ಉಂಟಾಗಿದೆ. ತಜ್ಞರ ಜೊತೆ ಚರ್ಚಿಸಿದ ಬಳಿಕ ಅದನ್ನು ಮುಚ್ಚಲಾಗುತ್ತದೆ. 10 ದಿನದ ಬಳಿಕ ಫ್ಲೈ ಓವರ್ನಲ್ಲಿ ವಾಹನ ಸಂಚಾರ ಆರಂಭಿಸಲಾಗುತ್ತದೆ" ಎಂದರು.
ತಜ್ಞರಿಂದ ಮತ್ತೊಮ್ಮೆ ಪರಿಶೀಲನೆ
ಫ್ಲೈ ಓವರ್ ಮೇಲಿನ ಹೊಂಡವನ್ನು ಮುಚ್ಚಿದ ಬಳಿಕ ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಲಾಗುತ್ತದೆ. ಬಳಿಕ ವಾಹನ ಸಂಚಾರವನ್ನು ಆರಂಭಿಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ಕಾಮಗಾರಿ ಸೋಮವಾರದಿಂದ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.
ಅಧಿಕಾರಿಗಳ ಪರಿಶೀಲನೆ
ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಮತ್ತು ಆಯುಕ್ತರು ಫ್ಲೈ ಓವರ್ ಮೇಲಿನ ಗುಂಡಿ ಸ್ಥಳವನ್ನು ವೀಕ್ಷಣೆ ಮಾಡಿದರು. ಫ್ಲೈ ಓವರ್ ನಿರ್ಮಾಣದ ಗುತ್ತಿಗೆ ಪಡೆದಿದ್ದ ಕಂಪನಿ ಮೇಲೆ ಬಿಬಿಎಂಪಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಬಿಬಿಎಂಪಿಗೆ ಹಸ್ತಾಂತರ
ನಾಯಂಡಹಳ್ಳಿ-ತುಮಕೂರು ರಸ್ತೆ ಸಂಪರ್ಕಿಸುವ ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾದಾಗ 2007ರಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಲು ಕಾಮಗಾರಿ ಕೈಗೊಳ್ಳಲಾಯಿತು. ಬಿಡಿಎ ಫ್ಲೈ ಓವರ್ ನಿರ್ಮಾಣದ ಗುತ್ತಿಗೆಯನ್ನು ಚೆನ್ನೈ ಮೂಲದ ಇಸಿಸಿಐ ಕಂಪನಿಗೆ ನೀಡಿತ್ತು. 2010ರಲ್ಲಿ ಫ್ಲೈ ಓವರ್ ಉದ್ಘಾಟನೆಗೊಂಡಿತು. 2016ರ ತನಕ ಬಿಡಿಎ ಇದರ ನಿರ್ವಹಣೆ ನೋಡಿಕೊಳ್ಳುತ್ತಿತ್ತು. ಬಳಿಕ ಬಿಬಿಎಂಪಿಗೆ ಹಸ್ತಾಂತರವಾಯಿತು.