ಅತಿ ಕಿರಿಯ ವನ್ಯಜೀವಿ ಛಾಯಾಗ್ರಾಹಕ ವೇದಾಂಶ್ ಪಾಂಡೆ
ಬೆಂಗಳೂರು, ನವೆಂಬರ್ 20: ಸಾಮಾನ್ಯವಾಗಿ 8-9 ನೇ ತರಗತಿ ವಿದ್ಯಾರ್ಥಿಗಳಿಗೆ ಅರಣ್ಯ ಸಂರಕ್ಷಣೆ, ಕಾಡು ಪ್ರಾಣಿಗಳ ಬಗ್ಗೆ ಬರೆಯಿರಿ ಎಂದರೆ ಆ ಪುಸ್ತಕ, ಈ ವೈಬ್ ಸೈಟ್ ತಡಕಾಡಿ ಬರೆಯುತ್ತಾರೆ. ಕಾಡು ಪ್ರಾಣಿಗಳ ತೀರಾ ಸನಿಹದಲ್ಲಿ ನಿಲ್ಲಿ ಎಂದರೆ ಬಹುತೇಕ ಮಕ್ಕಳು ಓಡಿ ಹೋಗುತ್ತಾರೆ. ಆದರೆ, ಕೋರಮಂಗಲದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ 8 ತರಗತಿ ಓದುತ್ತಿರುವ 13 ವರ್ಷದ ವೇದಾಂಶ್ ಪಾಂಡೆಗೆ ಕಾಡು ಪ್ರಾಣಿಗಳೆಂದರೆ ಎಲ್ಲಿಲ್ಲದ ಆಸಕ್ತಿ.
ಶಿಡ್ಲಘಟ್ಟದಲ್ಲಿ ಅಮರ ವಿಜ್ಞಾನಿ ಹರೀಶ್ ಸ್ಮರಣೆ
ಪೆನ್ನು ಪುಸ್ತಕ ಹಿಡಿಯಬೇಕಾದ ಕೈಯಲ್ಲಿ ಭಾರವಾದ ಲೈನ್ಸ್ ಕ್ಯಾಮೆರಾವನ್ನು ಹಿಡಿದು ಗಂಟೆಗಟ್ಟಲೆ ಕಾಯುತ್ತಾ ವನ್ಯ ಜೀವಿಗಳನ್ನು ಎದುರು ನೋಡುತ್ತಾರೆ.
ವಿಶ್ವ ಛಾಯಾಚಿತ್ರ ದಿನ: ಮನಸೆಳೆವ ಆ 10 ಚಿತ್ರಗಳು
ಹುಲಿ, ಸಿಂಹ, ಆನೆ ಸೇರಿದಂತೆ ಮತ್ತಿತರೆ ವನ್ಯಮೃಗಗಳ ಬಗ್ಗೆ ವಿಶೇಷವಾಗಿ ಚಿಕ್ಕ ವಯಸ್ಸಿನಲ್ಲೇ ಅಧ್ಯಯನ ನಡೆಸುತ್ತಿರುವ ಪಾಂಡೆ ಎಲ್ಲರ ಗಮನ ಸೆಳೆದಿದ್ದಾರೆ. ವಾರದ ರಜಾದಿನಗಳಲ್ಲಿ ತನ್ನ ಅಜ್ಜನೊಂದಿಗೆ ಕಾಡುಮೇಡು ಸುತ್ತಿ ಪಾಂಡೆ ತಗೆದಿರುವ ಚಿತ್ರಗಳಿಗೆ ವನ್ಯಜೀವಿ ಛಾಯಾಗ್ರಾಹಕರೇ ಬೆರಗಾಗಿದ್ದಾರೆ.
ವೇದಾಂಶ್ಗೆ ವನ್ಯಜೀವಿ, ಪರಿಸರ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚು ಒಲವು ಉಂಟಾಗಲು ಅವರು ಬೆಳೆದುಬಂದ ಪರಿಸರ ಕಾರಣ. ಸುಂದರ ಪರಿಸರದ ನಡುವೆ ಹುಟ್ಟಿ ಬೆಳೆದ ವೇದಾಂಶ್, ಚಿಕ್ಕ ವಯಸಿನಲ್ಲಿಯೇ ವನ್ಯಜೀವಿಗಳ ಛಾಯಾಚಿತ್ರಗಳನ್ನು ತೆಗೆಯುವ ಗೀಳನ್ನು ಬೆಳೆಸಿಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಬೆಳೆದ ವೇದಾಂಶ್
ಮಂಗಳೂರಿನಲ್ಲಿ ಹುಟ್ಟಿ, ಮೈಸೂರಿನಲ್ಲಿ ಮತ್ತು ಮಲೆನಾಡಿನ ತಪ್ಪಲಾದ ಶಿವಮೊಗ್ಗದಲ್ಲಿ ಬೆಳೆದ ವೇದಾಂಶ್, ಚಿಕ್ಕ ವಯಸ್ಸಿನಿಂದಲೇ ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಅತೀವ ಆಸಕ್ತಿ ಹೊಂದುವಂತಾಯಿತು. ಇದಕ್ಕೆ ಪೋಷಕರ ನೆರವು, ಪ್ರೋತ್ಸಾಹ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಜ್ಜನ ನೆರಳಿನಲ್ಲಿಯೇ ಈ ಗೀಳನ್ನು ಬೆಳೆಸಿಕೊಂಡರು.
ಪೋಷಕರೊಂದಿಗೆ ಅರಣ್ಯಗಳಿಗೆ ಭೇಟಿ
ಪ್ರಾಥಮಿಕ ಶಾಲಾ ಹಂತದಲ್ಲಿಯೇ ವನ್ಯಜೀವಿಗಳ ಬಗೆಗಿನ ಪುಸ್ತಕಗಳು, ಕತೆಗಳನ್ನು ಓದಿ ತಿಳಿದುಕೊಂಡ ವೇದಾಂಶ್, ಆಗಿನಿಂದಲೇ ಪರಿಸರ ರಕ್ಷಣೆಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಪಹಪಿ ಇಟ್ಟುಕೊಂಡವರು. ಈ ವಿಚಾರಗಳನ್ನು ತಮ್ಮ ಪೋಷಕರೊಂದಿಗೆ ಹಂಚಿಕೊಳ್ಳುತ್ತಿದ್ದ ವೇದಾಂಶ್, ಆಗಿನಿಂದಲೇ ಪೋಷಕರೊಂದಿಗೆ ಅರಣ್ಯಗಳಿಗೆ ಭೇಟಿ ನೀಡಲು ಆರಂಭ ಮಾಡಿದರು.
ಭವಿಷ್ಯದ ಅತ್ಯುತ್ತಮ ವನ್ಯಜೀವಿ ಛಾಯಾಗ್ರಾಹಕ
ತಂದೆ ತರುತ್ತಿದ್ದ ಕ್ಯಾಮೆರಾದಲ್ಲಿ ಕಣ್ಣಿಗೆ ಕಾಣಿಸುತ್ತಿದ್ದ ವನ್ಯಜೀವಿಗಳನ್ನು ಸೆರೆಹಿಡಿದು ತಾನೊಬ್ಬ ಭವಿಷ್ಯದ ಅತ್ಯುತ್ತಮ ವನ್ಯಜೀವಿ ಛಾಯಾಗ್ರಾಹಕನಾಗಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದ್ದರು. ಮಗನ ಈ ಆಸಕ್ತಿಯನ್ನು ಕಂಡ ಪೋಷಕರು ವ್ಯಾಸಂಗಕ್ಕೆ ಚ್ಯುತಿ ಆಗದ ರೀತಿಯಲ್ಲಿ ವೇದಾಂಶ್ ನನ್ನು ರಜೆಯ ಸಂದರ್ಭದಲ್ಲಿ ಅರಣ್ಯಗಳಿಗೆ ಕಳುಹಿಸಿಕೊಡುತ್ತಿದ್ದಾರೆ.
ವೃತ್ತಿಪರ ವನ್ಯಜೀವಿ ಛಾಯಾಗ್ರಾಹಕ
ಕೆಲವೊಮ್ಮೆ ತಾವೂ ಆತನೊಂದಿಗೆ ಹೋದರೆ ಮತ್ತೆ ಕೆಲವೊಮ್ಮೆ ಅಜ್ಜನ ಜೊತೆ ಕಾಡಿಗೆ ಭೇಟಿ ನೀಡುತ್ತಾ ಇಂದು ವೃತ್ತಿಪರ ವನ್ಯಜೀವಿ ಛಾಯಾಗ್ರಾಹಕರೂ ನಾಚಿಸುವ ರೀತಿಯಲ್ಲಿ ಹಲವಾರು ವನ್ಯಜೀವಿಗಳ ಹಲವು ನೋಟಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ನಾಡಿನ ವಿವಿಧ ಅರಣ್ಯಗಳಲ್ಲಿ ತೆಗೆದಿರುವ ವನ್ಯಜೀವಿಗಳ ಛಾಯಾಚಿತ್ರಗಳನ್ನು ಹೊರಜಗತ್ತಿಗೆ ತೋರಿಸಲು ಪ್ರದರ್ಶನ ನಡೆಸುತ್ತಿದ್ದಾರೆ.
ಅತ್ಯಂತ ಚಿಕ್ಕ ವಯಸ್ಸಿನ ವನ್ಯಜೀವಿ ಛಾಯಾಗ್ರಾಹಕ
ಕರ್ನಾಟಕದ ಇತಿಹಾಸದಲ್ಲಿ ವನ್ಯಜೀವಿ ಛಾಯಾಚಿತ್ರ ಏರ್ಪಡಿಸುತ್ತಿರುವ ಅತ್ಯಂತ ಚಿಕ್ಕ ವಯಸ್ಸಿನ ವನ್ಯಜೀವಿ ಛಾಯಾಗ್ರಾಹಕ ಎಂಬ ಹೆಗ್ಗಳಿಕೆಗೆ ವೇದಾಂಶ್ ಪಾತ್ರರಾಗಿದ್ದಾರೆ. ಕಬಿನಿ, ನಾಗರಹೊಳೆ, ಬಂಡೀಪುರ, ಆಗುಂಬೆ ಮತ್ತು ಕೊಡಗಿನ ಅರಣ್ಯ ಪ್ರದೇಶಗಳಲ್ಲಿ ತೆಗೆದಿರುವ ಛಾಯಾಚಿತ್ರಗಳನ್ನು ಹೆಚ್ಚಾಗಿ ಇಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.
ಗ್ಲೋಬಲ್ ಎನ್ವಿರಾನ್ಮೆಂಟ್ ಸಮ್ಮಿಟ್
ಈ ಚಿಕ್ಕ ವಯಸ್ಸಿನ ವೇದಾಂಶ್ ಗೆ ಸಂದಿರುವ ಮತ್ತೊಂದು ಗರಿ ಎಂದರೆ, ಗ್ಲೋಬಲ್ ಎನ್ವಿರಾನ್ಮೆಂಟ್ ಸಮ್ಮಿಟ್ ನಲ್ಲಿ ಪಾಲ್ಗೊಂಡಿದ್ದು. ಬೆಂಗಳೂರಿನಲ್ಲಿ ನಡೆದ ಈ ಸಮ್ಮೇಳನದಲ್ಲಿ ಇಸ್ರೋ ಅಧ್ಯಕ್ಷರು ಮತ್ತು 9 ಮಂದಿ ಅತಿ ಗಣ್ಯ ವ್ಯಕ್ತಿಗಳು ಅರಣ್ಯ ಸಂರಕ್ಷಣೆ ಬಗ್ಗೆ ಮಾತನಾಡಿದರು. ಇವರಲ್ಲಿ ಅತ್ಯಂತ ಚಿಕ್ಕ ವಯಸ್ಸಿನವರೆಂದರೆ ವೇದಾಂಶ್. ಇವರು ಅರಣ್ಯ ಸಂರಕ್ಷಣೆ ಬಗ್ಗೆ ಬೆಳಕು ಚೆಲ್ಲಿದ ವಿಚಾರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವಲ್ಲದೇ, ಅವರು ತೆಗೆದಿದ್ದ ಛಾಯಾಚಿತ್ರಗಳಿಗೆ ಅಭಿನಂದನೆ ಸಲ್ಲಿಸಿದರು.
ಚಿತ್ರಕಲಾ ಪರಿಷತ್ತಿನಲ್ಲಿ ವನ್ಯಜೀವಿ ಚಿತ್ರ ಪ್ರದರ್ಶನ
ವರ್ಲ್ಡ್ ವೈಲ್ಡ್ ಲೈಫ್ ಫಂಡ್ ಸಹಯೋಗದಲ್ಲಿ ವೇದಾಂಶ್ ಅವರು ಮಕ್ಕಳ ದಿನಾಚರಣೆ ಅಂಗವಾಗಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನವೆಂಬರ್ 24,25 ಹಾಗೂ 26ರಂದು ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದಾರೆ. ವರ್ಲ್ಡ್ ವೈಲ್ಡ್ ಲೈಫ್ ಫಂಡ್ನ ಕರ್ನಾಟಕ ವಿಭಾಗದ ಅಧ್ಯಕ್ಷರಾದ ಹರಿ ಸೋಮಶೇಖರ್ ಅವರು ಈ ಪ್ರದರ್ಶನ ಉದ್ಘಾಟಿಸಲಿದ್ದಾರೆ.