ಉಪ ಚುನಾವಣಾ ಕಣಕ್ಕೆ ಹೋರಾಟಗಾರ ವಾಟಾಳ್ ನಾಗರಾಜ್
ಬೆಂಗಳೂರು, ನವೆಂಬರ್ 17 : ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ, ಹೋರಾಟಗಾರ ವಾಟಾಳ್ ನಾಗರಾಜ್ ಉಪ ಚುನಾವಣಾ ಕಣಕ್ಕಿಳಿಯಲಿದ್ದಾರೆ. ಡಿಸೆಂಬರ್ 5ರಂದು ನಡೆಯುವ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ವಾಟಾಳ್ ನಾಗರಾಜ್ ಚುನಾವಣಾ ಕಣಕ್ಕಿಳಿಯಲಿದ್ದಾರೆ. ಸೋಮವಾರ ಅವರು ನಾಮಪತ್ರವನ್ನು ಸಲ್ಲಿಸುವ ನಿರೀಕ್ಷೆ ಇದೆ.
ಬೆಂಗಳೂರು ದಕ್ಷಿಣದಿಂದ ಚುನಾವಣಾ ಕಣಕ್ಕಿಳಿದ ವಾಟಾಳ್ ನಾಗರಾಜ್
"ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗುವ ಪಕ್ಷಾಂತರಿಗಳಿಂದ ಪ್ರಜಾಪ್ರಭುತ್ವ ಹಾಳಾಗಿದೆ. ತಮ್ಮ ಸ್ವಹಿತಾಸಕ್ತಿಗಾಗಿ ಹೀಗೆ ಪಕ್ಷಾಂತರ ಮಾಡುತ್ತಿದ್ದಾರೆ. ಇದೊಂದು ರೀತಿ ದರೋಡೆ ಮಾಡಿದಂತೆ" ಎಂದು ವಾಟಾಳ್ ನಾಗರಾಜ್ ಹೇಳಿದರು.
ಮಹಾಲಕ್ಷ್ಮೀ ಲೇಔಟ್ ಕದನ; ಬಿಜೆಪಿಯ ಎಸ್. ಹರೀಶ್ ನಡೆ ಏನು?
"ಅನರ್ಹ ಶಾಸಕರನ್ನು ಜನರು ತಿರಸ್ಕರಿಸಬೇಕು. ಇಂತಹ ರಾಜಕಾರಣಿಗಳು ಸಂಸದೀಯ ವ್ಯವಸ್ಥೆಗೆ ಕಪ್ಪು ಚುಕ್ಕೆ ತರುತ್ತಿದ್ದಾರೆ. ಜನರು ಇಂತಹವರನ್ನು ಸೋಲಿಸಿ ಬುದ್ಧಿ ಕಲಿಸಬೇಕು. ಇಂತಹ ಅಪ್ರಮಾಣಿಕ ರಾಜಕಾರಣಿಗಳ ವಿರುದ್ಧ ಹೋರಾಟಕ್ಕೆ ನಾನು ಸದಾ ಸಿದ್ಧ" ಎಂದರು.
ಮಹಾಲಕ್ಷ್ಮೀ ಲೇಔಟ್ ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಕಸರತ್ತು!
"ಭ್ರಷ್ಟಾಚಾರದ ವಿರುದ್ಧ ಹೋರಾಡಲು ನಾನು ಶಾಸಕನಾಗಬೇಕಿದೆ. ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಿಂದ ಉಪ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಯಡಿಯೂರಪ್ಪ ಎಂದರೆ ಯಡವಟ್ಟು ಎಂದು ಅರ್ಥ. ಆದ್ದರಿಂದ, ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿ" ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದರು.
2018ರ ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ವಾಟಾಳ್ ನಾಗರಾಜ್ ಕಣಕ್ಕಿಳಿದಿದ್ದರು. 5,977 ಮತಗಳನ್ನು ಪಡೆದು ಸೋತಿದ್ದರು. 2019ರ ಲೋಕಸಭಾ ಚುನಾವಣೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿದು ಸೋತಿದ್ದರು.