'ಪದವಿ ಸಿಗಲಿ ಬಿಡಲಿ ಕನ್ನಡಕ್ಕಾಗಿ ನನ್ನ ಹೋರಾಟ ನಿರಂತರ'
ಬೆಂಗಳೂರು, ಮೇ 20: 'ಕನ್ನಡದ ಬಗ್ಗೆ ನೈಜ ಕಾಳಜಿ ಹೊಂದಿರುವ, ನಾಡು-ನುಡಿ ಬಗ್ಗೆ ಜೀವನದುದ್ದಕ್ಕೂ ನಿರಂತರ ಹೋರಾಟ ಮಾಡುತ್ತಾ ಬಂದಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಬೇಕಾದ ಅಗತ್ಯವಿದೆ' ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಂದು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಅವರಿಗೆ ಕೆಂಗಲ್ ಹನುಮಂತಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಿ ಡಾ. ಕಂಬಾರರು ಮಾತನಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಾಟಾಳ್ ನಾಗರಾಜ್ ಅವರು 'ಪದವಿ ಸಿಗಲಿ, ಬಿಡಲಿ. ನನ್ನ ಹೋರಾಟ ಕನ್ನಡಕ್ಕಾಗಿ ನಿರಂತರವಾಗಿರುತ್ತದೆ' ಎಂದು ಮಾರ್ಮಿಕವಾಗಿ ನುಡಿದರು.
'ಕನ್ನಡದ ಪರವಾಗಿ ಧ್ವನಿಯೆತ್ತುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಕನ್ನಡಕ್ಕಾಗಿ, ಕನ್ನಡದ ಕೆಲಸಗಳಿಗಾಗಿ ದುಂಬಾಲು ಬೀಳುವವರು ವಾಟಾಳ್ ನಾಗರಾಜ್ ಮಾತ್ರ' ಎಂದು ವಾಟಾಳರ ಗುಣಗಾನ ಮಾಡಿದ ಡಾ. ಕಂಬಾರರು 'ವಾಟಾಳ್ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡುವ ಮೂಲಕ ಕನ್ನಡತನವನ್ನು ಗಟ್ಟಿಗೊಳಿಸಬೇಕಾಗಿದೆ' ಎಂದು ತಿಳಿಸಿದರು.
ದೇಶದಲ್ಲಿ 300 ಭಾಷೆಗಳು ಮಾಯವಾಗಿವೆ. ಕನ್ನಡ ಭಾಷೆ ಕೂಡ ಮಾಯವಾಗುವ ಲಕ್ಷಣಗಳು ಗೋಚರಿಸುತ್ತಿದೆ. ಕನ್ನಡದ ಬಗ್ಗೆ ನಾವೆಲ್ಲಾ ಒಟ್ಟಾಗಿ ಹೋರಾಟ ಮಾಡದಿದ್ದರೆ ಕನ್ನಡಕ್ಕೆ ಅಪಾಯ ಒದಗುತ್ತದೆ ಎಂದೂ ಡಾ. ಕಂಬಾರರು ಆತಂಕ ವ್ಯಕ್ತಪಡಿಸಿದರು.
ಮಾಜಿ ಸಚಿವ ವಿ ಸೋಮಣ್ಣ ಮಾತನಾಡಿ, ಕೆಂಗಲ್ ಹನುಮಂತಯ್ಯ ಅವರ ಕಾಲದಿಂದಲೂ ನಾಡು, ನುಡಿಗಾಗಿ ವಾಟಾಳ್ ನಾಗರಾಜ್ ಅವರು ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ. ಸದನದ ಹೊರಗೂ, ಒಳಗೂ ಅವರು ಹೋರಾಟ ನಡೆಸಿದ್ದಾರೆ. ನಿಜಲಿಂಗಪ್ಪ ಮುಖ್ಯಮಂತ್ರಿ ಆಗಿದ್ದಾಗ ಇವರು ಸಚಿವರಾಗುವ ಅವಕಾಶವಿತ್ತು. ಆದರೆ ಪದವಿಗೆ ಆಸೆ ಪಡದೆ ಕನ್ನಡಕ್ಕಾಗಿ ಹೋರಾಟ ಮುಂದುವರೆಸಿದ ಧುರೀಣ ಅವರು' ಎಂದು ಬಣ್ಣಿಸಿದರು.
ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ, ಅಖಂಡ ನೆಲೆಗಟ್ಟಿನಲ್ಲಿ ಹೋರಾಟ ಮಾಡಿರುವ ವಾಟಾಳ್ ನಾಗರಾಜ್ ಅಂತಹವರಿಗೆ ಶಾಸನಸಭೆಯಲ್ಲಿ ಪ್ರಾತಿನಿಧ್ಯ ನೀಡಿದಾಗ ಮಾತ್ರ ಕನ್ನಡದ ದನಿ ಗಟ್ಟಿಯಾಗುತ್ತದೆ. ವಾಟಾಳ್ ಅವರು ನಿತ್ಯ ನಿರಂತರ ಹೋರಾಟಗಾರ, ಪರಿಷತ್ ನಲ್ಲಿ ಕೇವಲ ಕವನಗಳನ್ನು ವಾಚನ ಮಾಡಿದರೆ ಕನ್ನಡ ಉಳಿಯುವುದಿಲ್ಲ, ಕನ್ನಡಕ್ಕಾಗಿ ಧ್ವನಿಯೆತ್ತಬೇಕು, ಅಂತಹ ಧೀಮಂತ ಧ್ವನಿ ವಾಟಾಳ್ ನಾಗರಾಜ್ ಅವರು ವಿಧಾನಪರಿಷತ್, ವಿಧಾನಸಭೆಯಲ್ಲಿ ಇರಬೇಕಾಗಿತ್ತು ಎಂದರು.
ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಮಾತನಾಡಿ, ಕರ್ನಾಟಕದಲ್ಲಿ 21 ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ಕೆಂಗಲ್ ಹನುಮಂತಯ್ಯ ಜನಮಾನಸದಲ್ಲಿ ಉಳಿದಿದ್ದಾರೆ. ಅದೇ ರೀತಿ ಸಾಕಷ್ಟು ಕನ್ನಡಪರ ಹೋರಾಟಗಾರರಾಗಿದ್ದು ವಾಟಾಳ್ ನಾಗರಾಜ್ ಅವರು ಜನಮಾನಸದಲ್ಲಿ ಉಳಿದಿದ್ದಾರೆ ಎಂದರು.