ಎಂಜಿ ರಸ್ತೆಯಲ್ಲಿ ಹೊಸ ವರ್ಷ ಆಚರಣೆ: ವಾಟಾಳ್ ನಾಗರಾಜ್ ಬಂಧನ
ಬೆಂಗಳೂರು,ಜನವರಿ 01: ನಿರ್ಬಂಧದ ಹೊರತಾಗಿಯೂ ಎಂಜಿ ರಸ್ತೆಯಲ್ಲಿ ಹೊಸವರ್ಷ ಆಚರಣೆಗೆ ಮುಂದಾದ ಕನ್ನಡ ಚಳವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಾಟಾಳ್ ನಾಗರಾಜ್ ಅವರು ಎಂಜಿ ರಸ್ತೆಯಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಹೊಸ ವರ್ಷಾಚರಣೆಗೆ ಮುಂದಾದ ಹಿನ್ನಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಮಾರಕ ಕೊರೊನಾ ವೈರಸ್ ನ ರೂಪಾಂತರಿ ವೈರಸ್ ನಗರಕ್ಕೂ ಕಾಲಿಟ್ಟಿರುವ ಹಿನ್ನಲೆಯಲ್ಲಿ ಹೊಸ ವರ್ಷಾಚರಣೆಗೆ ನಗರ ಪೊಲೀಸರು ನಿರ್ಬಂಧ ಹೇರಿದ್ದರು.
ಅಲ್ಲದೆ ನಗರಾದ್ಯಂತ 12 ಗಂಟೆಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿದ್ದು, ಹೊಸ ವರ್ಷಾಚರಣೆಗೆ ಕೇಂದ್ರ ಸ್ಥಾನಗಳಾಗಿದ್ದ ಬ್ರಿಗೇಡ್ ರಸ್ತೆ ಮತ್ತು ಎಂಜಿ ರಸ್ತೆಯಲ್ಲಿ ಜನ ಗುಂಪು ಸೇರದಂತೆ ಹದ್ದಿನ ಕಣ್ಣಿರಿಸಿದ್ದಾರೆ.
ನಗರದಲ್ಲಿ ಹೊಸ ಮಾದರಿಯ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಸುರಕ್ಷತೆ ದೃಷ್ಟಿಯಿಂದ ಇಂದು ಮಧ್ಯಾಹ್ನದಿಂದಲೇ 144 ಸೆಕ್ಷನ್ ಜಾರಿಮಾಡಲಾಗಿದೆ.
ಹೊಸ ವರ್ಷದ ಆಚರಣೆ ವೇಳೆ ಮೋಜು ಮಾಡಲು ನೈಸ್ ರಸ್ತೆಗಳಲ್ಲಿ ಜನ ಸೇರುತ್ತಾರೆ. ಕೆಲವರು ಬೈಕ್ ರೇಸ್, ವ್ಹೀಲಿಂಗ್ ಮಾಡುತ್ತಾರೆ, ಅಂತಹವರ ವಿರುದ್ಧ ಹದ್ದಿನ ಕಣ್ಣಿಡಲಾಗಿದೆ. ನೈಸ್ ರಸ್ತೆಯಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ.
ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 12 ಗಂಟೆಯಿಂದಲೇ ನಿಷೇಧಾಜ್ಞೆ ಜಾರಿ
ನಗರದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಿರುವುದರಿಂದ ನಗರದ ಹೊಸ ಭಾಗಗಳತ್ತ ಜನರು ಹೊರಡುತ್ತಿದ್ದಾರೆ. ಅಲ್ಲಿಯೂ ಸಂಭ್ರಮಾಚರಣೆಗೆ ತಡೆ ಇರಲಿದ್ದು, ನಗರದ ಪ್ರಮುಖ ಮೇಲ್ಸೇತುವೆಗಳು ಹಾಗೂ ಹೊರಭಾಗಗಳನ್ನು ಸಂಪರ್ಕಿಸುವ ಮೇಲ್ಸೇತುವೆಗಳನ್ನು ಗುರುವಾರ ರಾತ್ರಿ 10 ರಿಂದ ಶುಕ್ರವಾರ ಬೆಳಗ್ಗೆ 6 ಗಂಟೆಯವರೆಗೆ ಮುಚ್ಚಲಾಗಿದೆ.
Recommended Video