ನೂತನ ನಾಡಧ್ವಜಕ್ಕೆ ವಾಟಾಳ್ ನಾಗರಾಜ್ ವಿರೋಧ
ಬೆಂಗಳೂರು, ಮಾರ್ಚ್ 09: ಕಳೆದ 50 ವರ್ಷಗಳಿಂದ ಕನ್ನಡಿಗರ ಮನೆ ಮಾತಾಗಿದ್ದ ಅವರ ಭಾವನೆಗಳ ಬೆಳಕಾಗಿದ್ದ ಹಾಲಿ ಧ್ವಜವೇ ನಾಡಧ್ವಜವಾಗಿ ಮುಂದುವರೆಯಲಿ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದರು.
ಹೊಸ ನಾಡಧ್ವಜ ರೂಪಿಸಿ ಅನಾವರಣಗೊಳಿಸಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಹೇಳಿದ ಅವರು, ನಮಗೆ ಸರ್ಕಾರಿ ಧ್ವಜ ಅಗತ್ಯವಿಲ್ಲ. ಕಳೆದ 50 ವರ್ಷಗಳಿಂದಲೂ ಕನ್ನಡಿಗರು ಬಳಸುತ್ತಾ ಬಂದ, ಎತ್ತಿ ಹಿಡಿದ ಹಳದಿ-ಕೆಂಪು ಬಣ್ಣದ ಧ್ವಜವೇ ನಮ್ಮ ನಾಡಧ್ವಜ ಎಂದು ಹೇಳಿದರು.
ಹೊಸ ಕನ್ನಡ ಧ್ವಜ ರೆಡಿ, ಕೇಂದ್ರ ಒಪ್ಪುವುದಷ್ಟೆ ಬಾಕಿ
ಸಾಹಿತಿಗಳು, ಬರಹಗಾರರು, ಬುದ್ಧಿಜೀವಿಗಳು, ಅಧಿಕಾರಿಗಳು ಸೇರಿ ಹೊಸ ನಾಡಧ್ವಜ ರೂಪಿಸಿದ್ದಾರೆ, ಅಧಿಕಾರಿಗಳು ಸೇರಿ ಹೊಸ ನಾಡಧ್ವಜ ರೂಪಿಸಿದ್ದಾರೆ. ಆದರೆ, ಇದೇ ಸಾಹಿತಿಗಳು ಹಳದಿ, ಕೆಂಪು ಬಣ್ಣದ ಧ್ವಜವನ್ನೇ ಕಳೆದ ಐದು ದಶಕಗಳಿಂದಲೂ ನಾಡಧ್ವಜವೆಂದು ಹಾರಿಸುತ್ತಾ ಬಂದಿದ್ದರು. ಪ್ರತಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ನಾಡಧ್ವಜಾರೋಹಣ ನಡೆಯುತ್ತಿತ್ತು.
ಕೆಂಪು ಹಳದಿ ಧ್ವಜವನ್ನೇ ಹಿಡಿದು ಸಾಕಷ್ಟು ಹೋರಾಟ ಮಾಡಿದ್ದೇವೆ. ನಾಡು ಕಟ್ಟುವಲ್ಲಿ ಶ್ರಮಿಸಿದ್ದೇವೆ. ಅದನ್ನೇ ನಾವು ಮುಂದುವರೆಸುತ್ತೇವೆ ಎಂದು ಹೇಳಿದರು.