ರೈಲು ಬಂದ್: ವಾಟಾಳ್ ನಾಗರಾಜ್ ಸೇರಿ ಹಲವು ಕನ್ನಡ ಪರ ಹೋರಾಟಗಾರರ ಬಂಧನ
ಬೆಂಗಳೂರು,ಜನವರಿ 30: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ರೈಲು ಬಂದ್ಗೆ ತೆರಳಿದ್ದ ವೇಳೆ ವಾಟಾಳ್ ನಾಗರಾಜ್ ಸೇರಿ ಹಲವು ಕನ್ನಡ ಪರ ಹೋರಾಟಗಾರರನ್ನು ಬಂಧಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹುಚ್ಚತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಗಡಿ ಬಗ್ಗೆ ಇವರ ಎಲ್ಲ ಹೇಳಿಕೆಗಳನ್ನು ಸಾರಾಸಗಟಾಗಿ ಖಂಡಿಸುತ್ತೇವೆ. ಸೊಲ್ಲಾಪುರ, ಮುಂಬೈ ನಮಗೆ ಸೇರಬೇಕು. ಮಹಾರಾಷ್ಟ್ರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು.
ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧ ಮಾಡಬೇಕು, ಮಹಾರಾಷ್ಟ್ರ ಅಭಿವೃದ್ಧಿ ನಿಗಮವನ್ನು ಕೂಡಲೇ ರದ್ದು ಮಾಡಬೇಕೆಂದು ಆಗ್ರಹಿಸಿದರು.
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಕೆ.ಆರ್.ಕುಮಾರ್, ಮಂಜುನಾಥ್ ದೇವು, ಗಿರೀಶ್ ಗೌಡ ಸೇರಿದಂತೆ ಅನೇಕ ಮುಖಂಡರು ರೈಲು ತಡೆ ನಡೆಸಲು ಮುಂದಾದಾಗ ಪೊಲೀಸರು ಬಂಧಿಸಿದರು.
ಫೆಬ್ರವರಿ 20ರಂದು ಎಲ್ಲಾ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೆಳಗಾವಿಗೆ ಮುತ್ತಿಗೆ ಹಾಕಲಿದ್ದೇವೆ. ಮರಾಠಿ ನಾಮಫಲಕಗಳನ್ನು ತೆರವುಗೊಳಿಸಲಿದ್ದೇವೆ ಎಂದು ಹೇಳಿದರು. ಸಾ.ರಾ.ಗೋವಿಂದು ಮಾತನಾಡಿ, ಉದ್ಧವ್ ಠಾಕ್ರೆ 50 ವರ್ಷದ ಹಳೆ ವಿಡಿಯೋ ಬಿಡುಗಡೆ ಮಾಡಿ ಗಡಿ ವಿಷಯ ಕೆದಕುತ್ತಿದ್ದಾರೆ. ತಮ್ಮ ರಾಜಕೀಯ ಅಸ್ತಿತ್ವಕೋಸ್ಕರ ರಾಜ್ಯದ ಸೌಹಾರ್ದತೆಯನ್ನು ಹಾಳುಗೆಡವುತ್ತಿದ್ದಾರೆ. ಇವರ ಇಂಥ ಹೇಳಿಕೆಗಳಿಗೆ ಬೆಲೆ ಕೊಡಬಾರದು.
ಇದಕ್ಕಾಗಿ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ ಫೆಬ್ರವರಿ 3ನೇ ವಾರ ಬೆಳಗಾವಿಯಲ್ಲಿ ಕನ್ನಡ ಒಕ್ಕೂಟದ ವತಿಯಿಂದ ಮತ್ತೊಂದು ಉಗ್ರ ಹೋರಾಟ ಮಾಡುತ್ತೇವೆ . ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದಷ್ಟು ಪ್ರತಿರೋಧ ಹೆಚ್ಚಾಗುತ್ತದೆ ಎಂದರು.
Recommended Video
ಗಡಿ ವಿವಾದ ಮುಗಿದ ಅಧ್ಯಾಯವಾಗಿದೆ. ಎಂಇಎಸ್, ಶಿವಸೇನೆಯವರಿಗೆ ತಕ್ಕ ಉತ್ತರ ಕೊಡುವ ಸಾಮರ್ಥ್ಯ ಕನ್ನಡಪರ ಹೋರಾಟಗಾರರಿಗೆ ಇದೆ. ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿದ ಹಿನ್ನೆಲೆಯಲ್ಲಿ ಮರಾಠಿಗರ ಉಪಟಳ ರಾಜ್ಯದಲ್ಲಿ ಹೆಚ್ಚಾಗಿದೆ. ಕೂಡಲೇ ಸರ್ಕಾರ ನಿಗಮವನ್ನು ರದ್ದು ಮಾಡಬೇಕು.