ವಾಸುದೇವ ಮಯ್ಯ ಆತ್ಮಹತ್ಯೆ ಕೇಸ್;11 ಜನರ ವಿರುದ್ಧ ಎಫ್ಐಆರ್
ಬೆಂಗಳೂರು, ಜುಲೈ 09: ಗುರುರಾಘವೇಂದ್ರ ಕೋ ಆಪರೇಟಿವ್ ಸೊಸೈಟಿ ಮಾಜಿ ಸಿಇಒ ವಾಸುದೇವ ಮಯ್ಯ (73) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಮಣ್ಯಪುರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಡೆತ್ ನೋಟ್ ಆಧಾರದ ಮೇಲೆ 11 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ಹಾಕಲಾಗಿದೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೂರ್ಣಪ್ರಜ್ಞಾ ಲೇಔಟ್ನಲ್ಲಿ ವಾಸುದೇವ ಮಯ್ಯ ತಮ್ಮ ಕಾರಿನಲ್ಲೇ ವಿಷಸೇವಿಸಿ ಆತ್ಮಹತ್ಯೆ ಶರಣಾಗಿದ್ದರು.
ಬಸವನಗುಡಿಯ ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕಿನ ಹಣಕಾಸು ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ಮಾಜಿ ಸಿಇಒ ಹಾಗೂ ಹಾಲಿ ಮಾರ್ಗದರ್ಶಕ ವಾಸುದೇವ್ ಮಯ್ಯ ಅವರು ಆತ್ಮಹತ್ಯೆ ಬಳಿಕ ಡೆತ್ ನೋಟ್ ಪರಿಶೀಲಿಸಲಾಗಿದೆ. ಮಯ್ಯ ಅವರ ಪುತ್ರಿ ರಶ್ಮಿ ಅವರು ದೂರು ನೀಡಿ ಅನೇಕ ಜನರ ಮಾನಸಿಕ ಹಿಂಸೆಯಿಂದ ನಿತ್ಯ ಸಮಸ್ಯೆ ಎದುರಿಸಿದ್ದರು ಎಂದು ತಿಳಿದು ಬಂದಿದೆ.
ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಮಾಜಿ ಸಿಇಒ ವಾಸುದೇವ ಮಯ್ಯಾ ಆತ್ಮಹತ್ಯೆ
ಯಾರ ಮೇಲೆ ಆರೋಪ: ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಹಾಲಿ ಸಿಇಒ ಸಂತೋಶ್ ಕುಮಾರ್, ರವಿ ಐತಾಳ್, ರಾಕೇಶ್, ಶ್ರೀಪಾದಹೆಗಡೆ ಮತ್ತು ಪ್ರಶಾಂತ್ ಸೇರಿದಂತೆ 11 ಜನರ ವಿರುದ್ಧ ಮಾನಸಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ್ದ ಮೇಲೆ ಎಂದು ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ಹಾಕಲಾಗಿದೆ.
ಆರ್ ಬಿಐ ಪರಿವೀಕ್ಷಣೆ ವೇಳೆ ತಮ್ಮ ತಂದೆ ಕಡೆಯಿಂದ ಬಲವಂತವಾಗಿ ದಾಖಲೆಗಳ ಮೇಲೆ ಸಹಿ ಪಡೆಯಲಾಗಿತ್ತು. ಬ್ಯಾಂಕಿನ ಮುಖ್ಯ ಕಚೇರಿ ನೆಟ್ಟಕಲ್ಲಪ್ಪ ಸರ್ಕಲ್ ಬಳಿಯಿದೆ. ಆದರೆ, ಅವ್ಯವಹಾರದ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿತ್ತು ಎಂದು ರಶ್ಮಿ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಗುರು ರಾಘವೇಂದ್ರ ಬ್ಯಾಂಕ್ ಅವ್ಯವಹಾರ ಪ್ರಕರಣ: ತನಿಖೆ CIDಗೆ ಹಸ್ತಾಂತರ
ಇನ್ನೊಂದೆಡೆ, ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕಿನ ಪ್ರಕರಣವನ್ನು ಎಸಿಬಿಯಿಂದ ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಸಾವಿರಾರು ಕೋಟಿ ರುಪಾಯಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿದೆ.
ಬೆಂಗಳೂರು ನಗರದಲ್ಲಿಯೇ ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ 12 ಶಾಖೆಗಳನ್ನು ಹೊಂದಿದೆ. ಆಕರ್ಷಕ ಬಡ್ಡಿ ದರ ನೀಡುವ ಘೋಷಣೆಯನ್ನು ಬ್ಯಾಂಕ್ ಮಾಡಿತ್ತು. ಆದ್ದರಿಂದ ಗ್ರಾಹಕರು ಸುಮಾರು 2,400 ಕೋಟಿ ಠೇವಣಿ ಇಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.
ಬ್ಯಾಂಕ್ ಸುಮಾರು 1,700 ಕೋಟಿ ಸಾಲ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಆರ್ಬಿಐ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂಬ ಆರೋಪವೂ ಇದ್ದು. ಬ್ಯಾಂಕ್ ಅವ್ಯವಹಾರದ ಕುರಿತು ಕರ್ನಾಟಕ ಹೈಕೋರ್ಟ್ನಲ್ಲಿಯೂ ಪ್ರಕರಣ ದಾಖಲಾಗಿದೆ.