ವಶಿಷ್ಠ ಕ್ರೆಡಿಟ್ ಕೋ ಆಪರೇಟೀವ್ ಬ್ಯಾಂಕ್ನಿಂದ 430 ಕೋಟಿ ರೂ. ವಂಚನೆ!
ಬೆಂಗಳೂರು ಜೂ. 28: ಹೆಚ್ಚಿನ ಬಡ್ಡಿ ಆಸೆಗೆ ಬಿದ್ದು ಖಾಸಗಿ ಸಹಕಾರಿ ಸೊಸೈಟಿಗಳಲ್ಲಿ ಹೂಡಿಕೆ ಮಾಡುವ ಮುನ್ನ ನೂರು ಸಲ ಆಲೋಚಿಸಿ! ಹೆಚ್ಚಿನ ಬಡ್ಡಿ ಆಸೆಗೆ ಬಿದ್ದು ಇಡುವ ಠೇವಣಿ ಗಂಟು ಕಳೆದು ಹೋದೀತು. ರಾಘವೇಂದ್ರ ಸಹಕಾರಿ ಬ್ಯಾಂಕಿನ ಅಕ್ರಮ ಮಾಸುವ ಮುನ್ನವೇ ವಶಿಷ್ಠ ಸೌಹಾರ್ದ ಸಹಕಾರಿ ಸಂಘ ಸುಮಾರು 450 ಕೋಟಿ ರೂ. ಮೋಸ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ವಶಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯ ವಿರುದ್ಧ ಹಣ ಕಳೆದುಕೊಂಡವರು ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡುತ್ತಿದ್ದಂತೆ ಸಹಕಾರಿ ಬ್ಯಾಂಕ್ ನ ಪ್ರಮುಖ ಆರೋಪಿಗಳಾದ ವೆಂಕಟನಾರಾಯಣ ಮತ್ತು ಕೃಷ್ಣ ಪ್ರಸಾದ್ ಪರಾರಿಯಾಗಿದ್ದಾರೆ. ವಶಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಮಾಡಿರುವ ಎಡವಟ್ಟಿನಿಂದ ಸಾವಿರಾರು ಜನರು ಬೀದಿಗೆ ಬಿದ್ದಿದ್ದಾರೆ.
ವಶಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆ ವಾರ್ಷಿಕ ಹೆಚ್ಚು ಬಡ್ಡಿ ಕೊಡುವ ಅಮಿಷ ತೋರಿತ್ತು. ನಾಲ್ಕು ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಈ ಸಹಕಾರ ಸಂಘವನ್ನು ನಂಬಿ ಸಾವಿರಾರು ಮಂದಿ ಹೂಡಿಕೆ ಮಾಡಿದ್ದರು. ಸುಮಾರು 450 ಕೋಟಿ ರೂ. ನಿಶ್ಚಿತ ಠೇವಣಿ ಇಟ್ಟಿದ್ದ ನೂರಾರು ಮಂದಿ ಠೇವಣಿ ಅವಧಿ ಮುಗಿದಿತ್ತು. ಬಡ್ಡಿ ಸಮೇತ ವಾಪಸು ನೀಡುವಂತೆ ಬ್ಯಾಂಕ್ ವತಿಯಿಂದ ನೀಡಿರಲಿಲ್ಲ. ಕೇಳಿದಾಗ, ಕೊರೊನಾ ಬಂದಿದ್ದು ಸಾಲಗಾರರು ಯಾರೂ ಪಾವತಿ ಮಾಡುತ್ತಿಲ್ಲ ಎಂದು ಹೇಳಿದ್ದರು. ಈ ವಿಚಾರವಾಗಿ ಬಸವನುಗುಡಿ ಶಾಸಕ ರವಿ ಸುಬ್ರಮಣ್ಯ ಕೂಡ ಮಧ್ಯ ಪ್ರವೇಶಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಕಾಲವಕಾಶ ನೀಡುವಂತೆ ಕೋರಿದ್ದಾರೆ. ಅದರಂತೆ ಕೆಲ ತಿಂಗಳು ಕಾಲಾವಕಾಶ ನೀಡಿದ್ದಾರೆ. ಹೀಗೆ ಕೆಲವು ತಿಂಗಳು ಕಳೆದರೂ ಹಣ ಪಾವತಿ ಮಾಡಿರಲಿಲ್ಲ. ಸಂಘದ ಮುಖ್ಯಸ್ಥರಾದ ವೆಂಕಟನಾರಾಯಣ ಮತ್ತು ಕೃಷ್ಣ ಪ್ರಸಾದ್ ಪರಾರಿಯಾಗಿದ್ದಾರೆ.
Recommended Video
ಕೃಷ್ಣ ಪ್ರಸಾದ್ ಮತ್ತು ವೆಂಕಟನಾರಾಯಣ ಸಾರ್ವಜನಿಕರ ಹಣವನ್ನು ಬೇರಡೆ ಹೂಡಿಕೆ ಮಾಡಿ ಮೋಸ ಮಾಡಿದ್ದಾರೆ. ವಂಚನೆ ಮಾಡುವ ಉದ್ದೇಶ ಇಟ್ಟುಕೊಂಡೇ ಹೆಚ್ಚಿನ ಬಡ್ಡಿ ಅಮಿಷೆ ತೋರಿಸಿದ್ದಾರೆ. ಈ ಕುರಿತು ಶಾಸಕರ ಗಮನಕ್ಕು ತಂದರೂ ಏನೂ ಪ್ರಯೋಜನ ಆಗಲಿಲ್ಲ. ಮತ್ತೆ ಸ್ಥಳೀಯ ಶಾಸಕರ ಗಮನಕ್ಕೆ ತಂದಾಗ ಪೊಲೀಸ್ ಠಾಣೆಗೆ ದೂರು ನೀಡಲು ಹೇಳಿದರು. ಹೀಗಾಗಿ ದೂರು ನೀಡಿದ್ದೇವೆ ಎಂದು ಹಣ ಕಳೆದುಕೊಂಡಿರುವ ಗ್ರಾಹಕರು ಆರೋಪಿಸಿದ್ದಾರೆ.