4,500 ರುಪಾಯಿ ಮೈಸೂರು ಸಿಲ್ಕ್ ಸೀರೆ ಬಗ್ಗೆ ಪೂರ್ತಿ ಡೀಟೇಲ್ಸ್
Recommended Video
ಎದುರು ಮನೆ ಸಂಧ್ಯಾ, ಪಕ್ಕದ ಮನೆ ರೂಪಾ, ಮಹಡಿ ಮನೆಯ ಸ್ವಾತಿ, ಬೀದಿ ಕೊನೆಯ ಅಲುಮೇಲು... ಎಲ್ಲರದೂ ಅದೇ ಚರ್ಚೆ. ಯಾವಾಗ ರೇಷ್ಮೆ ಸೀರೆ ತರುವುದಕ್ಕೆ ಹೋಗೋದು, ಒಬ್ಬೊಬ್ಬರು ತಲಾ ಎಷ್ಟು ಸೀರೆ ಖರೀದಿ ಮಾಡೋದು? ವಾಟ್ಸಾಪ್ ಗ್ರೂಪ್ ಗಳಲ್ಲಂತೂ ಸೀರೆ ಬಣ್ಣದ ಆಯ್ಕೆ ಕೂಡ ಇದು ಎಂಬುದೇ ಹರಿದಾಡುತ್ತಿದೆ.
ಈ ಸಲ ವರಮಹಾಲಕ್ಷ್ಮಿ ಹಬ್ಬಕ್ಕೆ ಏನು ಸ್ಪೆಷಲ್ ಅಂದರೆ, ಖಂಡಿತಾ ಮೈಸೂರು ಸಿಲ್ಕ್ ರೇಷ್ಮೆ ಸೀರೆ ಅಂತಲೇ ಉತ್ತರ ಹೇಳುವ ಸಾಧ್ಯತೆ ಇದೆ. ಈ ಸಲವಾದರೂ ಮೈಸೂರು ಸಿಲ್ಕ್ ಕೊಡಿಸಿ ಎಂದು ಗಂಡನ ಸ್ವಾಟೆ ತಿವಿಯುವ ಹೆಂಡತಿಯರು, ಅವರನ್ನೇನು ಕೇಳೋದು, ಕೊಡಸ್ಬೇಕ್ ಅಷ್ಟೇ ಅಂತ ಥೇಟ್ 'ಹುಚ್ಚ ವೆಂಕಟ್' ಫೀಮೇಲ್ ವರ್ಷನ್ ನಲ್ಲಿ ಡೈಲಾಗ್ ಕೂಡ ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ.
ಸಚಿವ ಸಾ.ರಾ.ಮಹೇಶ್ ಈಗ ರಾಜ್ಯದ ಮಹಿಳೆಯರ ದೃಷ್ಟಿಯಲ್ಲಿ ಹೀರೋ ಆಗಿಬಿಟ್ಟಿದ್ದಾರೆ. ಮೈತ್ರಿ ಸರಕಾರದಲ್ಲಿ ಏನೇ ಕಚ್ಚಾಟ, ಅಸಮಾಧಾನ ಅಂತ ಇದ್ದರೂ ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳನ್ನು ವರ ಮಹಾಲಕ್ಷ್ಮಿ ಹಬ್ಬಕ್ಕೆ 4,500 ರುಪಾಯಿಗೆ ಮಾರಾಟ ಮಾಡುವ ಘೋಷಣೆಯನ್ನು ಸಚಿವರು ಮಾಡಿದ ಮೇಲಂತೂ ವಾಟ್ಸಾಪ್, ಫೇಸ್ ಬುಕ್ ಎಲ್ಲ ಕಡೆ ಅದೇ ಸುದ್ದಿ.
ಈ ಯೋಜನೆ ಹಿಂದಿರುವುದು ಸಾ.ರಾ.ಮಹೇಶ್ ಎಂಬ ಸಂಗತಿ ಎಷ್ಟು ಮಹಿಳೆಯರಿಗೆ ಗೊತ್ತಿದೆಯೋ ತಿಳಿಯದು. ಆದರೆ ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳನ್ನು ಮಾರಾಟ ಮಾಡುವ ಮಳಿಗೆ ಎಲ್ಲಿದೆ ಎಂದು ಮಹಿಳೆಯರು ಹುಡುಕಲು ಶುರು ಮಾಡಿದ್ದಾರೆ.ಆ ಸೀರೆ ಯಾವಾಗ ಬರುತ್ತದೆ ಎಂಬುದನ್ನು ಕೇಳುತ್ತಿದ್ದಾರೆ. ಅಲ್ಲಿಗೆ ಈ ಯೋಜನೆಯ ಉದ್ದೇಶ ಆರಂಭದಲ್ಲೇ ತಕ್ಕ ಮಟ್ಟಿಗೆ ಯಶಸ್ಸು ಕಂಡಂತೆ ಆಗಿದೆ.
ವರಮಹಾಲಕ್ಷ್ಮೀ ಹಬ್ಬ: ಕೇವಲ 4,500ರೂ.ಗೆ ಮೈಸೂರು ಸಿಲ್ಕ್ ಸೀರೆ
ಆದರೆ, ಈಗ 4,500 ರುಪಾಯಿಗೆ ಮಾರಾಟ ಮಾಡಲು ಮುಂದಾಗಿರುವುದು ಪ್ರಿಂಟೆಡ್ ರೇಷ್ಮೆ ಸೀರೆ ಎಂಬುದು ಗಮನದಲ್ಲಿರಲಿ. ಅದಕ್ಕೆ ಜರಿ ಇರುವುದಿಲ್ಲ. ಮೈಸೂರು ಸಿಲ್ಕ್ ಸೀರೆಯಲ್ಲಿ ಜರಿಗೆ ಬೆಳ್ಳಿ ಹಾಗೂ ಚಿನ್ನದ ಎಳೆಗಳನ್ನು ಬಳಸುತ್ತಾರೆ. ಆದ್ದರಿಂದ ಇಷ್ಟು ಕಡಿಮೆ ಬೆಲೆಗೆ ಜರಿ ಸೀರೆ ನೀಡಲು ಸಾಧ್ಯವಿಲ್ಲ.
ವರಮಹಾಲಕ್ಷ್ಮಿ ಹಬ್ಬಕ್ಕೆ ಎರಡು ದಿನ ಇರುವಂತೆ ಮಾರಾಟ
ಅಸಲಿಗೆ ಈಗ ಮಾರಾಟ ಮಾಡಲು ಮುಂದಾಗಿರುವ ಪ್ರಿಂಟೆಡ್ ರೇಷ್ಮೆ ಸೀರೆ ಕೂಡ 4,500 ರುಪಾಯಿಗೆ ಬರುವುದಿಲ್ಲ. ಆದರೆ ಸಚಿವರೇನೋ ಘೋಷಣೆ ಮಾಡಿದ್ದಾರೆ. ಆ ದಿಕ್ಕಿನಲ್ಲಿ ಪ್ರಯತ್ನ ನಡೆಯುತ್ತಿದೆ. ಆದರೆ ಈಗಲೇ ಸೀರೆ ಮಾರಲಾಗುತ್ತಿದೆಯಾ ಅಂದರೆ, ಇಲ್ಲ ಅನ್ನೋ ಉತ್ತರ ಬರುತ್ತದೆ. ಏಕೆಂದರೆ, ವರಮಹಾಲಕ್ಷ್ಮಿ ಹಬ್ಬಕ್ಕೆ ಎರಡು ದಿನ ಇರುವಂತೆ ಮಾರಾಟ ಶುರು ಮಾಡಲಾಗುತ್ತದೆ.
ಸಚಿವರು ಘೋಷಣೆ ಮಾಡಿರುವುದು ಪ್ರಿಂಟೆಡ್ ರೇಷ್ಮೆ ಸೀರೆ
"ಅದ್ಯಾರು ಸುದ್ದಿ ಮಾಡಿದರೋ, ಹಬ್ಬಿಸುತ್ತಿದ್ದಾರೋ ವಾಟ್ಸಾಪ್ ನಲ್ಲಿ ತಪ್ಪು ತಪ್ಪಾದ ಮಾಹಿತಿ ಹರಡುತ್ತಿದ್ದಾರೆ. ಈಗ ಸಚಿವರು ಘೋಷಣೆ ಮಾಡಿರುವುದು ಪ್ರಿಂಟೆಡ್ ರೇಷ್ಮೆ ಸೀರೆ. ಅದು ಕೂಡ ಒಳ್ಳೆ ರೇಷ್ಮೆಯೇ. ಆದರೆ ಜರಿ ಇರುವುದಿಲ್ಲ. ನಮಗೆ ಸೀರೆ ಮಾರಾಟದ ಬಗ್ಗೆ ಮಾಹಿತಿ ಬಂದಿಲ್ಲ. ಅದು ಬಂದ ಮೇಲೆ ಏನಾದರೂ ಹೇಳುವುದಕ್ಕೆ ಸಾಧ್ಯ" ಎಂದು ಬಸವನಗುಡಿಯಲ್ಲಿರುವ ರೇಷ್ಮೆ ಮಾರಾಟ ಮಳಿಗೆಯವರು ಹೇಳಿದರು.
ಜುಲೈ 14ರಿಂದ 25% ವರೆಗೆ ರಿಯಾಯಿತಿ ಮಾರಾಟ
"ಸದ್ಯಕ್ಕೆ ಇರುವ ಮಾಹಿತಿ ಪ್ರಕಾರ ಇದೇ ಜುಲೈ 14ರಿಂದ ಆಷಾಢ ಮಾಸದ ಸಲುವಾಗಿ 25% ವರೆಗೆ ರಿಯಾಯಿತಿ ದರದಲ್ಲಿ ಮಾರಾಟ ಆರಂಭವಾಗುತ್ತದೆ. ನಮ್ಮಲ್ಲೂ ಕಂತಿನ ಲೆಕ್ಕದಲ್ಲಿ ಸೀರೆ ಖರೀದಿ ಮಾಡಬಹುದು. ಅದಕ್ಕೆ ಕೆಲವು ಮುಖ್ಯ ದಾಖಲಾತಿಗಳನ್ನು ನೀಡಬೇಕಾಗುತ್ತದೆ. ಅದರ ಅರ್ಜಿ ಮತ್ತಿತರ ಮಾಹಿತಿ ನಮ್ಮ ಮಳಿಗೆಯಲ್ಲೇ ಸಿಗುತ್ತದೆ" ಎಂದು ಹೇಳಿದರು.
ಸಿಬ್ಬಂದಿಯ ಸೌಜನ್ಯ ಮೆಚ್ಚಲೇಬೇಕು
ಇಷ್ಟೆಲ್ಲ ಮಾಹಿತಿ ತೆಗೆದುಕೊಳ್ಳುವಾಗಲೇ ಮಳಿಗೆಗೆ ದೂರವಾಣಿ ಕರೆ ಬಂತು. ಆ ಕಡೆಯಿಂದ ಧ್ವನಿಯೊಂದು, ವರಮಹಾಲಕ್ಷ್ಮಿ ಹಬ್ಬದ ಆಫರ್ ಬಗ್ಗೆ ವಿಚಾರಿಸಿತು. ಅದಕ್ಕೆ ಮಳಿಗೆಯವರು, ಮೇಡಂ ನಮಗೆ ಇನ್ನೂ ಮಾಹಿತಿ ಬಂದಿಲ್ಲ. ನಿಮ್ಮ ಕಾಂಟ್ಯಾಕ್ಟ್ ನಂಬರ್ ಕೊಡಿ. ಅದು ಬಂದ ಕೂಡಲೇ ತಿಳಿಸುತ್ತೀವಿ ಎಂದು ತುಂಬ ಸೌಜನ್ಯದಿಂದಲೇ ಉತ್ತರಿಸಿದರು. ಗಾಂಧೀಬಜಾರಿನ ಶಿವಸಾಗರ್ ಹೋಟೆಲ್ ಎದುರು, ಕೆನರಾ ಬ್ಯಾಂಕ್ ಪಕ್ಕ ಇರುವ ಮೈಸೂರು ಸಿಲ್ಕ್ ಮಳಿಗೆಯ ಸಿಬ್ಬಂದಿಯ ಸೌಜನ್ಯ ಹಾಗೂ ಸಮಾಧಾನದ ವ್ಯವಹಾರದ ಬಗ್ಗೆಯೂ ಒಂದೊಳ್ಳೆ ಮಾತು ಬರೆದರೆ ತಪ್ಪಿಲ್ಲ ಎನಿಸಿತು.