Vande Bharath Mission: ಸಿಂಗಪುರದಿಂದ 42 ಮಂದಿ ಆಗಮನ
ದೇವನಹಳ್ಳಿ, ಮೇ 13: ವಂದೇ ಭಾರತ್ ಮಿಷನ್ ಮೂಲಕ ವಿದೇಶದಲ್ಲಿದ್ದ ವಿದ್ಯಾರ್ಥಿಗಳು, ಉದ್ಯೋಗಿಗಳನ್ನು ಭಾರತಕ್ಕೆ ವಿಶೇಷ ವಿಮಾನ ಮೂಲಕ ಕರೆಸಿಕೊಳ್ಳಲಾಗಿದೆ. ಸಿಂಗಪುರದಿಂದ ವಿಮಾನದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರ ಪೈಕಿ 42 ಮಂದಿ ಬೆಂಗಳೂರು ನಿವಾಸಿಗಳಾಗಿದ್ದಾರೆ.
ಕೋವಿಡ್-19 ಲಾಕ್ ಡೌನ್ ಪರಿಸ್ಥಿತಿಯಲ್ಲಿ, ಸಿಂಗಾಪೂರ್ ನಿಂದ ನಿನ್ನೆ(12.05.2020) ರಾತ್ರಿ 9 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೇವನಹಳ್ಳಿಯಲ್ಲಿರುವ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಎರಡನೇ ವಿಮಾನದಲ್ಲಿ ಗರ್ಭಿಣಿಯರು, ಮಕ್ಕಳು ಸೇರಿದಂತೆ ಒಟ್ಟು 180 ಅನಿವಾಸಿ ಭಾರತೀಯರು ಪ್ರಯಾಣಿಸಿದ್ದಾರೆ.
ವಿದೇಶದಿಂದ ಭಾರತಕ್ಕೆ ಬರಲು, ಇಲ್ಲಿಂದ ವಿದೇಶಕ್ಕೆ ತೆರಳಲು ಮಾರ್ಗಸೂಚಿ
180 ಮಂದಿ ಪ್ರಯಾಣಿಕರಲ್ಲಿ 42 ಮಂದಿ (23 ಪುರುಷರು ಹಾಗೂ 19 ಮಹಿಳೆಯರು) ಪ್ರಯಾಣಿಕರು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅದರಲ್ಲಿ 40 ಮಂದಿ ಪ್ರಯಾಣಿಕರು ಕರ್ನಾಟಕದವರಾಗಿದ್ದಾರೆ ಹಾಗೂ ಇಬ್ಬರು ಪ್ರಯಾಣಿಕರು ತಮಿಳುನಾಡು ರಾಜ್ಯದವರಾಗಿದ್ದಾರೆ. 138 ಮಂದಿ ಪ್ರಯಾಣಿಕರು ಕೇರಳ ರಾಜ್ಯದವರಾಗಿದ್ದಾರೆ. ಏರ್ ಇಂಡಿಯಾ ವಿಮಾನವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಂತರ ಕೇರಳದ ಕೊಚ್ಚಿಗೆ ಪ್ರಯಾಣಿಸಿತು.
ನಿಲ್ದಾಣಕ್ಕೆ ಆಗಮಿಸಿದ ಪ್ರತಿಯೊಬ್ಬರ ತಪಾಸಣೆ
ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ, ಆರೋಗ್ಯ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ವತಿಯಿಂದ ಪ್ರಯಾಣಿಕರ ಕೋವಿಡ್-19 ಆರೋಗ್ಯ ತಪಾಸಣೆಗಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಗತ್ಯ ಸಕಲ ಸಿದ್ದತೆ ಹಾಗೂ ಸೂಕ್ತ ಭದ್ರತೆ ಮಾಡಿಕೊಳ್ಳಲಾಗಿತ್ತು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರತಿಯೊಬ್ಬರನ್ನು ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳಿಂದ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ.
42 ಪ್ರಯಾಣಿಕರಲ್ಲೂ ಕೊರೋನಾ ಸೋಂಕಿನ ಲಕ್ಷಣಗಳಿಲ್ಲ
42 ಪ್ರಯಾಣಿಕರಲ್ಲೂ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಆದರೂ ಪ್ರತಿಯೊಬ್ಬ ಪ್ರಯಾಣಿಕರೂ ಕ್ವಾರಂಟೈನ್ ನಲ್ಲಿ ಇರುವುದು ಕಡ್ಡಾಯವಾಗಿದೆ. ಆದ್ದರಿಂದ ಕ್ವಾರಂಟೈನ್ ಗಾಗಿ ಹೋಟೆಲ್ ಹಾಗೂ ರೆಸಾರ್ಟ್ ಗಳನ್ನು ಬಳಸಲಾಗುತ್ತಿದೆ.
ಲಾಕ್ಡೌನ್ : ಕಾರ್ಮಿಕ, ಪ್ರವಾಸಿಗ, ವಿದ್ಯಾರ್ಥಿಗಳ ನೆರವಿಗೆ ಸೇವಾ ಸಿಂಧು
ಕ್ವಾರಂಟೈನ್ ಗಾಗಿ ಪ್ರಯಾಣಿಕರು ತಂಗಲಿರುವ ಹೋಟೆಲ್ ಗಳಿಗೆ, ಪ್ರಯಾಣಿಕರನ್ನು ವಿಮಾನ ನಿಲ್ದಾಣದಿಂದ, ಬಿಎಂಟಿಸಿ ಬಸ್ ಗಳ ಮೂಲಕ ತಲುಪಿಸಲಾಯಿತು. ಕ್ವಾರಂಟೈನ್ ವೆಚ್ಚವನ್ನು ಪ್ರಯಾಣಿಕರೇ ಭರಿಸಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ.
12 ದೇಶದಲ್ಲಿ ಸಿಲುಕಿದ್ದ ಭಾರತೀಯರು ವಾಪಸ್
ಲಾಕ್ ಡೌನ್ ಪರಿಣಾಮ ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ವಾಪಸ್ ಕರೆತರಲು ಸರ್ಕಾರ 'ವಂದೇ ಭಾರತ್ ಮಿಷನ್' ಆರಂಭ ಮಾಡಿತ್ತು. ಇದುವರೆಗೂ ದೇಶಕ್ಕೆ 6037 ಜನರು ವಾಪಸ್ ಆಗಿದ್ದಾರೆ. ವಂದೇ ಭಾರತ್ ಮಿಷನ್ ಅಡಿ ಒಟ್ಟು 12 ದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ವಾಪಸ್ ಕರೆತರಲಾಗುತ್ತಿದೆ. ರಾಯಭಾಯ ಕಚೇರಿ ಮೂಲಕ ಭಾರತಕ್ಕೆ ಬರಲು ಜನರು ನೋಂದಣಿ ಮಾಡಿಕೊಂಡಿದ್ದರು. ತುರ್ತು ಅಗತ್ಯ ಇರುವವರನ್ನು ಮೊದಲು ಕರೆತರಲಾಗಿದೆ.
ಅಮೆರಿಕ, ಯುಕೆ, ಬಾಂಗ್ಲಾದೇಶ, ಸಿಂಗಪುರ, ಸೌದಿ ಅರೇಬಿಯಾ, ಕುವೈತ್, ಫಿಲಿಫೈನ್ಸ್, ಯುಎಇ ಮತ್ತು ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳಿಂದ 14,800 ಜನರನ್ನು ಮೊದಲ ಹಂತದಲ್ಲಿ ಕರೆತರಲಾಗುತ್ತದೆ.
ಪ್ರಯಾಣಿಕರು ಎ, ಬಿ ಮತ್ತು ಸಿ ಗ್ರೇಡ್ ಗಳಾಗಿ ವಿಂಗಡಣೆ
ಎ, ಬಿ ಮತ್ತು ಸಿ ಗ್ರೇಡ್ ಗಳಾಗಿ ವಿಂಗಡಣೆ ಲಂಡನ್, ಸಿಂಗಪುರದಿಂದ ರಾಜ್ಯಕ್ಕೆ ಬಂದಿರುವ ಕನ್ನಡಿಗರು ಉಳಿದುಕೊಳ್ಳಲು ಹೋಟೆಲ್, ರೆಸಾರ್ಟ್ ಗಳನ್ನು ಬುಕ್ ಮಾಡಲಾಗಿದೆ. ಪ್ರಯಾಣಿಕರ ಆರೋಗ್ಯ ಪರಿಸ್ಥಿತಿಗೆ ಅನುಗುಣವಾಗಿ ಎ, ಬಿ ಮತ್ತು ಸಿ ಗ್ರೇಡ್ ಗಳಾಗಿ ವಿಂಗಡಣೆ ಮಾಡಲಾಗಿದ್ದು, ಎ ಗ್ರೇಡ್ ಹೊಂದಿರುವವರು ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ. ಬಿ ಮತ್ತು ಸಿ ಗ್ರೇಡ್ ಹೊಂದಿರುವವರು ಹೋಟೆಲ್ ಮತ್ತು ರೆಸಾರ್ಟ್ ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ. ಕ್ವಾರಂಟೈನ್ ನಲ್ಲಿರುವವರೇ ವೆಚ್ಚವನ್ನು ಭರಿಸಬೇಕು. ಪಾಸ್ ಪೋರ್ಟ್ ದಾಖಲೆ ನೀಡಿ ಸಿಮ್ ಪಡೆಯಲು ಅವಕಾಶ ನೀಡಲಾಗಿದೆ.