ಬೆಂಗಳೂರಿನಿಂದ ಓಡಾಡಲಿದೆ ವಂದೇ ಭಾರತ್ ವಿಶೇಷ ರೈಲು, ಎಲ್ಲಿಂದ ಎಲ್ಲಿಗೆ ಪ್ರಯಾಣ ತಿಳಿಯಿರಿ
ಬೆಂಗಳೂರು, ಸೆಪ್ಟೆಂಬರ್ 14: ಸೆಮಿ-ಹೈ-ಸ್ಪೀಡ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಾಕಷ್ಟು ಜನಪ್ರಿಯವಾಗುತ್ತಿರುವ ಸಮಯದಲ್ಲಿ ನೈಋತ್ಯ ರೈಲ್ವೆ (SWR) ಬೆಂಗಳೂರಿನಿಂದ ಮೂರು ಸ್ಥಳಗಳಿಗೆ ಈ ಹೊಸ ತಲೆಮಾರಿನ ರೈಲುಗಳನ್ನು ಓಡಿಸಲು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ.
ಈ ಪ್ರಸ್ತಾವಿತ ಮಾರ್ಗಗಳೆಂದರೆ ಬೆಂಗಳೂರಿನಿಂದ ಕೊಯಮತ್ತೂರು, ಬೆಂಗಳೂರಿನಿಂದ ಚೆನ್ನೈ ಮತ್ತು ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗಗಳಾಗಿವೆ. ವಂದೇ ಭಾರತ್ ರೈಲಿಗಾಗಿ ಪ್ರಸ್ತಾಪಿಸಲಾದ ಮಾರ್ಗಗಳು ಅವುಗಳ ಜನಪ್ರಿಯತೆ ಮತ್ತು ಕಾರ್ಯಸಾಧ್ಯತೆಯನ್ನು ಆಧರಿಸಿವೆ ಎಂದು ನೈರುತ್ಯ ರೈಲ್ವೆ ಮೂಲಗಳು ತಿಳಿಸಿವೆ.
ರೈಲ್ವೆ ಇಲಾಖೆ ಆದಾಯದಲ್ಲಿ 26,271 ಕೋಟಿ ರೂ. ಹೆಚ್ಚಳ
ಈ ಪ್ರಸ್ತಾವನೆಯನ್ನು ರೈಲ್ವೆ ಮಂಡಳಿಗೆ ಔಪಚಾರಿಕವಾಗಿ ಸಲ್ಲಿಸಲಾಗಿದೆ. ಹೊಸ ಸೇವೆಗಳನ್ನು ಪರಿಚಯಿಸುವ ಕುರಿತು ಮಂಡಳಿಯು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ರೈಲುಗಳ ಸಂಖ್ಯೆ, ವೇಳಾಪಟ್ಟಿಗಳು ಮತ್ತು ಇತರೆ ವಿಷಯಗಳನ್ನು ರೈಲ್ವೆ ಮಂಡಳಿಯು ನಿರ್ಧರಿಸುತ್ತದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಿಂದ ಕೊಯಮತ್ತೂರು, ಚೆನ್ನೈ, ಹುಬ್ಬಳಿಗೆ ವಿಮಾನ ಪ್ರಯಾಣವನ್ನು ಅವಲಂಬಿಸಿರುವ ಜನರು ವಂದೇ ಭಾರತ್ ರೈಲಿನಲ್ಲಿ ಓಡಾಡಲು ಪ್ರಾರಂಭಿಸಬಹುದು ಎಂದು ನಾವು ಭಾವಿಸುತ್ತೇವೆ. ಹೊಸ ರೈಲುಗಳಲ್ಲಿ ಪ್ರಯಾಣದ ಅನುಭವವು ವೇಗ ಮತ್ತು ಪ್ರಯಾಣದ ಸೌಕರ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ, ಒರಗುವ ಆಸನಗಳು, ಬಳಕೆದಾರ ಸ್ನೇಹಿ ಸೌಕರ್ಯಗಳು, ಕೋಚ್ನ ವಿನ್ಯಾಸವಾರು ಸೌಂದರ್ಯದ ವೈಶಿಷ್ಟ್ಯಗಳು ಉತ್ತಮವಾಗಿರಲಿವೆ ಎಂದು ಮೂಲಗಳು ತಿಳಿಸಿವೆ.
180 ಕಿಮೀ ವೇಗದಲ್ಲಿ ರೈಲು ಓಡಾಟ ಪ್ರಯೋಗ
ವೇಗ, ಸುರಕ್ಷತೆ ಮತ್ತು ಸೇವೆಗಳು ವಂದೇ ಭಾರತ್ ಎಕ್ಸ್ಪ್ರೆಸ್ನ ವಿಶಿಷ್ಟ ಲಕ್ಷಣಗಳಾಗಿವೆ ಎಂದು ಕೆಲವು ದಿನಗಳ ಹಿಂದೆಯಷ್ಟೇ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದರು. ಮುಂಬೈ ಮತ್ತು ಅಹಮದಾಬಾದ್ ನಡುವೆ ಮೂರನೇ ವಂದೇ ಭಾರತ್ನ ಪ್ರಾಯೋಗಿಕ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಮತ್ತು ರೈಲನ್ನು ಸ್ಥಿರ ಸ್ಥಿತಿಯಲ್ಲಿ ಗರಿಷ್ಠ 180 ಕಿಮೀ ವೇಗದಲ್ಲಿ ಓಡಿಸಲಾಗಿದೆ. ಇದು 52 ಸೆಕೆಂಡುಗಳಲ್ಲಿ 0-100 kmph ಅನ್ನು ತಲುಪಬಲ್ಲದು. ಇದಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರಿಂದ ಹಸಿರು ನಿಶಾನೆ ದೊರೆತಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ 75 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ಹೊರತರಲಿದೆ ಎಂದು ಸಚಿವರು ತಿಳಿಸಿದರು.
ದೀರ್ಘಾವಧಿಗೆ ರೈಲ್ವೆ ಭೂಮಿ ಗುತ್ತಿಗೆ ನೀಡಲು ಕೇಂದ್ರದ ಅನುಮೋದನೆ
ಹುಬ್ಬಳ್ಳಿ ಹಾಗೂ ಬೆಂಗಳೂರು ಹಳಿ ಅಳವಡಿಕೆ
ಹುಬ್ಬಳ್ಳಿ- ಬೆಂಗಳೂರು ನಡುವೆ ವಂದೇ ಭಾರತ್ ರೈಲು ಓಡಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹುಬ್ಬಳ್ಳಿ ಹಾಗೂ ಬೆಂಗಳೂರು ನಡುವಿನ ಹಳಿಗಳನ್ನು ಹೆಚ್ಚು ಮಾಡಿರುವುದು ವಂದೇ ಭಾರತ್ ರೈಲು ಓಡಿಸಲು ಹೆಚ್ಚು ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ. ಹುಬ್ಬಳ್ಳಿ- ಬೆಂಗಳೂರು ನಡುವೆ ದಕ್ಷಿಣ ಹುಬ್ಬಳ್ಳಿ ಮತ್ತು ಹಾವೇರಿ ನಡುವೆ 45 ಕಿ.ಮೀ ದೂರದಲ್ಲಿ ಹಳಿ ದ್ವಿಗುಣಗೊಳಿಸುವಿಕೆ ಬಾಕಿ ಇದೆ. ವರ್ಷಾಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಪ್ರಯಾಣದ ಅವಧಿ ಒಂದು ಗಂಟೆ ಕಡಿಮೆ
ನೈರುತ್ಯ ರೈಲ್ವೆ ಮಾರ್ಚ್ 2023 ರ ವೇಳೆಗೆ ಈ ಮಾರ್ಗದ ವಿದ್ಯುದೀಕರಣ ಮಾಡಲು ಗುರಿ ಇಟ್ಟುಕೊಂಡಿದೆ. ಒಮ್ಮೆ ಹಳಿಗಳ ಹೆಚ್ಚಿಸುವಿಕೆ ಪೂರ್ಣಗೊಂಡರೆ, ಕರ್ವ್ಗಳು ಚಪ್ಪಟೆಯಾಗಿರುವುದರಿಂದ ಮತ್ತು ಶಾಶ್ವತ ವೇಗದ ನಿರ್ಬಂಧಗಳನ್ನು ತೆಗೆದುಹಾಕುವುದರಿಂದ ಅಸ್ತಿತ್ವದಲ್ಲಿರುವ ರೈಲುಗಳ ಪ್ರಯಾಣದ ಸಮಯವನ್ನು ಒಂದು ಗಂಟೆ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಮೂಲವು ತಿಳಿಸಿದೆ.
52 ಸೆಕೆಂಡುಗಳಲ್ಲಿ ಗಂಟೆಗೆ 100 ಕಿಮೀ ವೇಗ
ಭಾರತದ ಸೆಮಿ ಹೈಸ್ಪೀಡ್ ರೈಲಾಗಿರುವ ವಂದೇ ಭಾರತ್ ಎಕ್ಸ್ಪ್ರೆಸ್, ಬುಲೆಟ್ ರೈಲಿನ ದಾಖಲೆಯನ್ನು ಅಹಮದಾಬಾದ್ ಮತ್ತು ಮುಂಬೈ ನಡುವಿನ ಪ್ರಾಯೋಗಿಕ ಓಡಾಟದ ಸಮಯದಲ್ಲಿ ಮುರಿದಿದೆ. ದೇಶದ ಮೂರನೇ ವಂದೇ ಭಾರತ್ ರೈಲು ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 100 ಕಿಮೀ ವೇಗದಲ್ಲಿ ಓಡಿದೆ. ರೈಲು ತನ್ನ ಪ್ರಾಯೋಗಿಕ ಚಾಲನೆಯನ್ನು ಪೂರ್ಣಗೊಳಿಸಿದ್ದು, ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 30ರಂದು ಗುಜರಾತ್ನ ಗಾಂಧಿನಗರದಿಂದ ರೈಲಿಗೆ ಚಾಲನೆ ನೀಡುವ ಸಾಧ್ಯತೆಯಿದೆ.