ದುಬ್ಲಿನ್ನಿಂದ ಬೆಂಗಳೂರಿಗೆ ಬಂದ 136 ಕನ್ನಡಿಗರು
ಬೆಂಗಳೂರು, ಮೇ 27 : ವಂದೇ ಭಾರತ್ ಮಿಷನ್ ಅಡಿ 20ನೇ ವಿಮಾನ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ದುಬ್ಲಿನ್ನಿಂದ ಆಗಮಿಸಿದ ವಿಮಾನದಲ್ಲಿ 136 ಜನರು ನಗರಕ್ಕೆ ಬಂದಿಳಿದರು.
ಲಾಕ್ ಡೌನ್ ಪರಿಣಾಮ ಐರ್ಲೆಂಡ್ನ ದುಬ್ಲಿನ್ನಲ್ಲಿ ಸಿಲುಕಿದ್ದ ಜನರು ಬುಧವಾರ ಸಂಜೆ 6.53ಕ್ಕೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದರು.
ವಂದೇ ಭಾರತ್ ಮಿಷನ್ ಅಡಿ ಬೆಂಗಳೂರು ನಗರಕ್ಕೆ ಬಂದ 20ನೇ ವಿಮಾನ ಇದಾಗಿದೆ. ವಿಮಾನದಲ್ಲಿ 136 ಮಂದಿ ಅನಿವಾಸಿ ಭಾರತೀಯರು ಆಗಮಿಸಿದರು. ಒಂದು ಮಗು ಸೇರಿದಂತೆ 75 ಪುರುಷರು ಮತ್ತು 61 ಮಹಿಳೆಯರು ವಿಮಾನದಲ್ಲಿದ್ದರು.
ಏರ್ ಇಂಡಿಯಾ ವಿಮಾನ ಬೆಂಗಳೂರು ನಗರದಿಂದ ಕೇರಳದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿತು. ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳು ಎಲ್ಲಾ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದರು.
"ಯಾವುದೇ ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಪ್ರಯಾಣಿಕರನ್ನು 14 ದಿನಗಳ ಕ್ವಾರಂಟೈನ್ಗಾಗಿ ಹೋಟೆಲ್ಗಳಿಗೆ ಕಳುಹಿಸಲಾಗಿದೆ" ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ. ಎನ್. ರವೀಂದ್ರ ಹೇಳಿದ್ದಾರೆ.
ಮೇ 25ರಿಂದ ದೇಶದಲ್ಲಿ ದೇಶಿಯ ವಿಮಾನಗಳ ಸಂಚಾರವೂ ಆರಂಭವಾಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ 75 ವಿಮಾನಗಳು ಸಂಚಾರ ನಡೆಸಿವೆ.
ಇಬ್ಬರಿಗೆ ಕೊರೊನಾ ಸೋಂಕು: "ಬುಧವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ" ಎಂದು ಜಿಲ್ಲಾಧಿಕಾರಿ ಪಿ. ಎನ್. ರವೀಂದ್ರ ತಿಳಿಸಿದ್ದಾರೆ.