ಪಿಯುಸಿ: ಮೌಲ್ಯಮಾಪನ ಆರಂಭವಾಯ್ತು, ಫಲಿತಾಂಶ ಯಾವಾಗ?
ಬೆಂಗಳೂರು, ಏಪ್ರಿಲ್ 5: ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭವಾಗಿದೆ.
ಕರ್ನಾಟಕದಾದ್ಯಂತ 48 ಕೇಂದ್ರಗಳಲ್ಲಿ ಏಕಕಾಲದಲ್ಲಿ ಸುಮಾರು 20,000 ಉಪನ್ಯಾಸಕರು ಮೌಲ್ಯಮಾಪನ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಏಪ್ರಿಲ್ 16ರ ಒಳಗೆ ಮೌಲ್ಯಮಾಪನ ಪೂರ್ಣಗೊಳಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.[ಮೌಲ್ಯಮಾಪನ ಬಹಿಷ್ಕರಿಸುವ ಉಪನ್ಯಾಸಕರಿಗೆ ಜೈಲು ಶಿಕ್ಷೆ!]
ಈ ಬಾರಿ ಭಿಗಿ ಭದ್ರತೆಯಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು ಮೌಲ್ಯಮಾಪನವನ್ನೂ ಬೇಗ ಪೂರ್ಣಗೊಳಿಸಿ ಫಲಿತಾಂಶ ಪ್ರಕಟಿಸುವ ಇರಾದೆಯಲ್ಲಿ ಶಿಕ್ಷಣ ಇಲಾಖೆ ಇದೆ. ಮೌಲ್ಯಮಾಪನದಲ್ಲಿ ಪಾರದರ್ಶಕತೆ ತರಲು ಎಲ್ಲಾ ಕೇಂದ್ರಗಳಲ್ಲೂ ಸಿಸಿಟಿವಿ ಅಳವಡಿಸಲಾಗಿದೆ. ಇನ್ನು ಸ್ಟ್ರಾಂಗ್ ರೂಂಗಳಿಗೂ ಭಾರೀ ಭದ್ರತೆ ಒದಗಿಸಲಾಗಿದ್ದು 24*7 ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇದೆ.
ಈಗಾಗಲೇ ಮೇ 1, ಮೇ 10 ಕ್ಕೂ ಮೊದಲು ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದೆ ಎನ್ನುವ ಸುದ್ದಿಗಳೂ ಬರುತ್ತಿವೆ. ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಹೇಳುವುದೇ ಬೇರೆ.
"ಫಲಿತಾಂಶ ಪ್ರಕಟಗೊಳ್ಳುವ ದಿನಾಂಕವನ್ನು ಇನ್ನೂ ನಿರ್ಧರಿಸಿಲ್ಲ. ಆದಷ್ಟು ಬೇಗ ಮೌಲ್ಯಮಾಪನ ಮುಗಿಸುವ ಗುರಿ ಹಾಕಿಕೊಂಡಿದ್ದೇವೆ. ಏನಿದ್ದರೂ ಸಿಇಟಿ ಪರೀಕ್ಷೆ ಮುಗಿದ ನಂತರವೇ ಫಲಿತಾಂಶ ಪ್ರಕಟಗೊಳ್ಳಲಿದೆ," ಎಂದು ತಿಳಿಸಿದ್ದಾರೆ.