ವಾಜಪೇಯಿ ಜನ್ಮದಿನ: ಪ್ರಾಮಾಣಿಕ ಆಟೋ ಚಾಲಕರಿಗೆ ಡಿಸಿಎಂ ಗೌರವ
ಬೆಂಗಳೂರು, ಡಿಸೆಂಬರ್ 25: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಶುಕ್ರವಾರ ನಗರದ ಮಲ್ಲೇಶ್ವರದಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಪ್ರಾಮಾಣಿಕ ಹಾಗೂ ಹಿರಿಯ ಆಟೋ ಚಾಲಕರಿಗೆ ಸನ್ಮಾನಿಸಿ ಖಾಕಿ ಸಮವಸ್ತ್ರವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಟೋಗಳು ನಮ್ಮ ಬೆಂಗಳೂರಿನ ಜನಜೀವನದ ಅವಿಭಾಜ್ಯ ಅಂಗ. ಒಂದು ದಿನ ಆಟೋಗಳು ರಸ್ತೆಗೆ ಇಳಿಯದಿದ್ದರೆ ಆಗುವ ಕಷ್ಟ ಅಷ್ಟಿಷ್ಟಲ್ಲ. ಅದರಲ್ಲೂ ಚಳಿ, ಮಳೆ, ಬಿಸಿಲೆನ್ನದೆ ರಸ್ತೆಗಳಲ್ಲೇ ಕೆಲಸ ಮಾಡುತ್ತ ಜೀವನ ನಡೆಸುವ ಆಟೋ ಚಾಲಕರ ಸೇವೆ ಶ್ಲಾಘನೀಯ ಎಂದರು.
ಅನೇಕ ವರ್ಷಗಳಿಂದ ಬೆಂಗಳೂರಿನಲ್ಲಿ ಆಟೋ ಚಾಲನೆ ಮಾಡಿಕೊಂಡು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಆಟೋ ಚಾಲಕರಿಗೆ ಹೂಮಾಲೆ ಹಾಕಿ ಮೈಸೂರು ಪೇಟ ತೊಡಿಸಿ ಪ್ರಶಂಸನೆಯ ಫಲಕ ನೀಡಿ ಆತ್ಮೀಯವಾಗಿ ಗೌರವಿಸಿದ ಡಿಸಿಎಂ, ಅವರ ಕುಂದುಕೊರತೆಗಳನ್ನು ವಿಚಾರಿಸಿದರು.
ಕೋವಿಡ್ ಬಂದ ಕಾರಣ ಸಾರಿಗೆಗೆ ಸಂಬಂಧಿಸಿದ ಎಲ್ಲ ವ್ಯವಸ್ಥೆಗಳಿಗೂ ಹೊಡೆತ ಬಿದ್ದಿದೆ. ಸರಕಾರ ತನ್ನ ಇತಿಮಿತಿಯೊಳಗೆ ಎಲ್ಲ ನೆರವು ನೀಡಿದೆ.
ಲಾಕ್ಡೌನ್ ಕಾಲದಲ್ಲಿ ಮಲ್ಲೇಶ್ವರ ಕ್ಷೇತ್ರದ ಆಟೋ ಚಾಲಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಯಿತು. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು ಎಂದು ಡಿಸಿಎಂ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಲ್ಲೇಶ್ವರ ಕ್ಷೇತ್ರದ ಬಿಜೆಪಿ ನಾಯಕರು ಹಾಜರಿದ್ದರು.