'ಉತ್ತರಾಖಂಡದಲ್ಲಿ ಬಂಡೆ ಉರುಳೋದು, ತೊಂದರೆ ಆಗೋದು ಮಾಮೂಲು'
ಉತ್ತರಾಖಂಡದ ವಿಷ್ಣು ಪ್ರಯಾಗ್ ನಲ್ಲಿ ಹೆದ್ದಾರಿ ಮಧ್ಯೆ ಬಂಡೆ ಉರುಳಿ, ಪ್ರವಾಸಿಗರಿಗೆ ತೊಂದರೆಯಾಗಿತ್ತು ಎಂಬ ಸುದ್ದಿಯನ್ನು ಓದಿರುತ್ತೀರಿ. ಅಲ್ಲಿನ ಪ್ರವಾಸ ಹೇಗಿರುತ್ತದೆ ಎಂಬ ಬಗ್ಗೆ ಉದ್ಯಮಿ ವೆಂಕಟೇಶ್ ಕುಲಕರ್ಣಿ ಅನುಭವ ಹಂಚಿಕೊಂಡಿದ್ದಾರೆ
ಬೆಂಗಳೂರು, ಮೇ 20: ಉತ್ತರಾಖಂಡದ ವಿಷ್ಣು ಪ್ರಯಾಗದಲ್ಲಿ ರಸ್ತೆ ಮಧ್ಯೆ ಬಂಡೆ ಉರುಳಿಬಿದ್ದು ಹದಿನೈದು ಸಾವಿರ ಮಂದಿ ಅಲ್ಲಿಂದ ಬರಲಾರದೆ ತೊಂದರೆ ಅನುಭವಿಸಿದ್ದಾರೆ ಎಂಬ ಸುದ್ದಿಯನ್ನು ನೀವೆಲ್ಲ ಓದಿರುತ್ತೀರಿ. ಚಾರ್ ಧಾಮ್ ಎಂದು ಹೆಸರಾದ ಸ್ಥಳದಲ್ಲಿನ ಅನುಭವದ ಬಗ್ಗೆ ಉದ್ಯಮಿಯಾದ-ಅಥಣಿ ಮೂಲದ ಬೆಂಗಳೂರು ವಾಸಿ ವೆಂಕಟೇಶ್ ಆರ್ ಕುಲಕರ್ಣಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇನ್ನು ಅವರೇ ಹಂಚಿಕೊಂಡ ಅನುಭವದ ಮಾತುಗಳು ಇಲ್ಲಿವೆ. "ಅಲ್ಲಿ ಈ ರೀತಿ ಬಂಡೆಗಳು ಉರುಳುವುದು ತುಂಬ ಸಾಮಾನ್ಯವಾದ ಸಂಗತಿ. ಆದರೆ ಅಲ್ಲಿ ಮಿಲಿಟರಿಯವರು ಹೆಚ್ಚೆಂದರೆ ನಾಲ್ಕು ತಾಸಿನಲ್ಲಿ ಸರಿ ಮಾಡಿಬಿಡ್ತಾರೆ. ನಾನು ಆರು ವರ್ಷಗಳಿಂದ ಎಂಟು ಸಲ ಹೋಗಿದ್ದೀನಿ. ಈ ತಿಂಗಳು 11, 12 ಕೂಡ ಅಲ್ಲೇ ಇದ್ದೆ. ನನ್ನ ಪ್ರಕಾರ ಹೇಳುವುದಾದರೆ ನಿನ್ನೆ ಆದ ಘಟನೆ ತೀರಾ ಹೆದರುವಂಥದ್ದು ಅಲ್ಲವೇ ಅಲ್ಲ.[ಉತ್ತರಾಖಂಡದಲ್ಲಿ ಭಾರಿ ಕುಸಿತ, ಅಪಾಯದಲ್ಲಿ 15,000ಜನ]
"ಕಳೆದ ವರ್ಷ ಮೇಘ ಸ್ಫೋಟ ಆಗಿತ್ತಲ್ಲ, ಅದು ತೀರಾ ಗಂಭೀರವಾದದ್ದು. ಇನ್ನು ಇತ್ತ್ತೀಚೆಗೆ ಹರಿದ್ವಾರದಿಂದ ಬದರಿಗೆ ತುಂಬ ಒಳ್ಳೆ ರಸ್ತೆ ಮಾಡಿದ್ದಾರೆ. ನೀವು ನಂಬಲಿಕ್ಕಿಲ್ಲ. ಸದಾ ನೀರು ಹರಿಯುವಲ್ಲಿ ಕೂಡ ಶ್ರಮ ಹಾಕಿ ಅದ್ಭುತವಾದ ಡಾಂಬರು ರಸ್ತೆ ಮಾಡಿದ್ದಾರೆ. ಮುಂಚೆ ಈ ಮುನ್ನೂರು ಕಿಲೋಮೀಟರ್ ರಸ್ತೆಯಲ್ಲಿ ಸಾಗುವುದಕ್ಕೆ ಹನ್ನೆರಡು ತಾಸು ಆಗ್ತಿತ್ತು. ಈಗ ಹತ್ತು ತಾಸು ಸಾಕು.[ಆರು ತಿಂಗಳ ನಂತರ ಬಾಗಿಲು ತೆರೆದ ಹರಿದ್ವಾರ್ ಗೆ ಮೋದಿ ಭೇಟಿ]
"ಹರಿದ್ವಾರದಲ್ಲಿರುವ ಪೇಜಾವರ ಮಠದ ಮ್ಯಾನೇಜರ್ ಪವನ್ ಆಚಾರ್ ಜತೆಗೆ ಈ ಬಗ್ಗೆ ಮಾತನಾಡಿದೆ. ಅವರು ಕೂಡ ಇದೇ ಮಾತನ್ನು ಹೇಳಿದರು. ಅಲ್ಲಿ ಇಂಡೋ ಟಿಬೆಟನ್ ಸೈನಿಕರು ತುಂಬ ಉತ್ಸಾಹದಿಂದ ಕೆಲಸ ಮಾಡ್ತಾರೆ. ಆದ್ದರಿಂದ ಇಂಥ ಘಟನೆಗಳು ಅಲ್ಲಿನವರಿಗಾಗಲೀ ಅಥವಾ ನಿರಂತರವಾಗಿ ಅಲ್ಲಿಗೆ ಹೋಗುವವರಿಗಾಗಲೀ ಗಾಬರಿ ಮಾಡಲ್ಲ" ಎಂದರು.