ಹಂಪಿ ನರಹರಿತೀರ್ಥರ ವೃಂದಾವನ ಭೂಮಿ ವಿವಾದ ; ಉತ್ತರಾದಿ ಮಠಕ್ಕೆ ಜಯ
ಬೆಂಗಳೂರು, ಮಾರ್ಚ್ 15 : ಹಂಪಿಯ ಹತ್ತಿರದ ವೆಂಕಟಾಪುರ ಗ್ರಾಮದ ತುಂಗಭದ್ರಾ ನದಿಯ ಮಧ್ಯದಲ್ಲಿದ್ದ ಕಲ್ಲುಗುಡ್ಡದ ದ್ವೀಪದಲ್ಲಿರುವ ನರಹರಿತೀಥರ ವೃಂದಾವನ ಗಡ್ಡೆ ಭೂಮಿಯ ವಿವಾದವು ಉತ್ತರಾದಿ ಮಠದ ಪರವಾಗಿ ಇತ್ಯರ್ಥವಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಮಠಕ್ಕೆ ಆದ ಮಂಜೂರಾತಿಯನ್ನು ಕರ್ನಾಟಕ ಅಪೆಲೆಟ್ ಟ್ರಿಬುನಲ್ ಎತ್ತಿ ಹಿಡಿದಿದೆ. ಈ ಮೂಲಕ ನರಹರಿತೀರ್ಥರ ಮೂಲವೃಂದಾವನ ಇರುವ ಸ್ಥಳವು ಉತ್ತರಾದಿಮಠಕ್ಕೆ ಸೇರಿದ್ದೆಂದು ಮತ್ತೊಮ್ಮೆ ದೃಢಪಟ್ಟಿದೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉತ್ತರಾದಿ- ರಾಯರ ಮಠದವರು ನೀವೇ ನವವೃಂದಾವನ ಗೊಂದಲ ಬಗೆಹರಿಸಿಕೊಳ್ಳಿ
ನರಹರಿತೀರ್ಥರ ವೃಂದಾವನ ಭೂಮಿಯ ಮಂಜೂರಾತಿಯ ವಿರುದ್ಧ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದವರ ಅರ್ಜಿಯನ್ನು ಮತ್ತು ಪುನರ್ವಿಮರ್ಶೆ ಅರ್ಜಿಗಳನ್ನು ವಜಾಗೊಳಿಸಿದೆ. ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ನರಹರಿತೀರ್ಥರ ವೃಂದಾವನವು ಹಂಪಿಯ ಹತ್ತಿರದ ವೆಂಕಟಾಪುರ ಗ್ರಾಮದ ತುಂಗಭದ್ರಾ ನದಿಯ ಮಧ್ಯದಲ್ಲಿದ್ದ ಕಲ್ಲುಗುಡ್ಡದ ದ್ವೀಪದಲ್ಲಿದೆ.
ತಲೆತಲಾಂತರದಿಂದ ಈ ವೃಂದಾವನದ ಪೂಜೆ-ಆರಾಧನೆಗಳನ್ನು ಉತ್ತರಾದಿಮಠವು ಮಾಡುತ್ತಾ ಬಂದಿತ್ತು. ಈ ಬರಡು ಭೂಮಿ ವೆಂಕಟಾಪುರ ಸರ್ವೇ ನಂಬರ್ 897 ಅನ್ನು 7-4-1971ರಂದು ತಹಶೀಲ್ದಾರರು ಉತ್ತರಾದಿಮಠಕ್ಕೆ ಮಂಜೂರು ಮಾಡಿದ್ದರು. ರಾಘವೇಂದ್ರಸ್ವಾಮಿ ಮಠದವರು ಈ ಆದೇಶವನ್ನು ರದ್ದು ಮಾಡಲು ಕೇಳಿಕೊಂಡಿದ್ದರು. ತಹಸೀಲ್ದಾರರು ಮಂಜೂರಾತಿಯನ್ನು ರದ್ದು ಮಾಡಿ, ಭೂಮಿಯನ್ನು ಸರಕಾರ ತೆಗೆದುಕೊಳ್ಳಲು ಆದೇಶಿಸಿದ್ದರು.
ಉತ್ತರಾದಿಮಠವು ಇದನ್ನು ಪ್ರಶ್ನಿಸಿ ಅಸಿಸ್ಟೆಂಟ್ ಕಮೀಷನರ್ ಗೆ ಮನವಿ ಮಾಡಿತು. ಆ ಮನವಿ ವಜಾಗೊಂಡಿತು. ಅನಂತರ ಉತ್ತರಾದಿ ಮಠವು ಡೆಪ್ಯೂಟಿ ಕಮೀಷನರ್ ರಿಗೆ ಎರಡನೆಯ ಮನವಿ ಮಾಡಿತು. ಅವರು ಮನವಿ ಎತ್ತಿ ಹಿಡಿದು, 7-4-1971 ರಿಂದ ಈ ವೃಂದಾವನ ಭೂಮಿ ಉತ್ತರಾದಿ ಮಠದ ಪರವಾಗಿಯೇ ಇದೆ ಎಂದು ಹೇಳಿದ್ದರು.
ಈ ಆದೇಶದ ವಿರುದ್ಧ ರಾಯರ ಮಠವು 2006ರಲ್ಲಿ, 36 ವರುಷಗಳ ನಂತರ ಹಿಂದಿನ ಮಂಜೂರಾತಿಯನ್ನು ರದ್ದು ಮಾಡಲು ಕರ್ನಾಟಕ ಅಪೆಲೆಟ್ ಟ್ರಿಬುನಲ್ ಗೆ ಮನವಿ ಮಾಡಿ, ಬಳ್ಳಾರಿ ಜಿಲ್ಲಾಧಿಕಾರಿ ಆದೇಶವನ್ನು ಪುನರ್ವಿಮರ್ಶಿಸಲು ಕೇಳಿಕೊಂಡಿತ್ತು.
12 ವರ್ಷಗಳ ನಂತರ ಕರ್ನಾಟಕ ಅಪೆಲೆಟ್ ಟ್ರಿಬುನಲ್ ಎರಡೂ ಮಠಗಳ ವಾದಗಳನ್ನು ಕೂಲಂಕಷವಾಗಿ ವಿಮರ್ಶಿಸಿ, ಮಾರ್ಚ್ 13ರಂದು ತೀರ್ಪು ನೀಡಿ, ರಾಘವೇಂದ್ರಸ್ವಾಮಿ ಮಠದ ಅರ್ಜಿ ಮತ್ತು ಪುನರ್ ವಿಮರ್ಶೆಗೆ ಹಾಕಿದ ಅರ್ಜಿಗಳೆರಡನ್ನೂ ವಜಾಗೊಳಿಸಿದೆ. ಉತ್ತರಾದಿಮಠದ ಪರವಾಗಿ ಹಿರಿಯ ವಕೀಲ ಜಯವಿಠಲ ಕೋಲಾರ ವಾದ ಮಂಡಿಸಿದ್ದರು ಎಂದು ಉತ್ತರಾದಿಮಠ ಅಧಿಕೃತ ವಕ್ತಾರ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ತಿಳಿಸಿದ್ದಾರೆ.