ತಪ್ತ ಮುದ್ರಾಧಾರಣೆಗೆ ಸಜ್ಜಾದ ಉತ್ತರಾದಿ ಮಠ
ನಗರದ ಬಸವನಗುಡಿಯ ಉತ್ತರಾದಿ ಮಠದ ರಸ್ತೆಗೆ ಮಧ್ವ ಮತದ ಯತಿವರ್ಯ ಸತ್ಯ ಪ್ರಮೋದ ತೀರ್ಥ ಸ್ವಾಮೀಜಿ ಅವರ ಹೆಸರಿಟ್ಟ ಶುಭ ಸಂದರ್ಭದ ಬೆನ್ನಲ್ಲೇ ತಪ್ತಮುದ್ರಧಾರಣೆ ಮಹೋತ್ಸವ ಸರ್ವಸಿದ್ಧತೆಯಾಗಿದೆ.
ಆಷಾಡಶುಕ್ಲ ಪ್ರಥಮ ಏಕಾದಶಿ.ರಾಜ್ಯದ ನಾನಾ ಭಾಗದಲ್ಲಿರುವ ಮಾಧ್ವ ಮಠಗಳಲ್ಲಿ ತಪ್ತಮುದ್ರಾಧಾರಣೆಯು ವಿವಿಧ ಮಠಾಧೀಶರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಗಳೊಂದಿಗೆ ಆಚರಣೆಯಾಗಲಿದೆ.ಮಹಿಳೆಯರು, ಪುರುಷರು, ಆಬಾಲವೃದ್ಧರು, ಯಾವುದೇ ಜಾತಿಮತದವರು ಹಾಕಿಕೊಳ್ಳಬಹುದಾಗಿದೆ.
ಸುದರ್ಶನ ಹೋಮವನ್ನು ನಡೆಸಿ ಅದರಲ್ಲಿ ಕಾಯಿಸಿದ ಶಂಖ, ಚಕ್ರ, ಗದ, ಪದ್ಮ ಚಿಹ್ನೆಯನ್ನು ಎದೆ, ಎಡ ಮತ್ತು ಬಲ ತೋಳಿಗೆ ಹಾಕುವುದನ್ನು ತಪ್ತ ಮುದ್ರಾಧಾರಣೆ ಎಂದು ಕರೆಯಲಾಗುತ್ತದೆ. ತಪ್ತ ಅಂದರೆ ಕಾಯಿಸಿದ ವಿವಿಧ ಚಿಹ್ನೆಗಳ ಮುದ್ರೆಗಳನ್ನು ಹಾಕುವುದು. ಈ ಚಿಹ್ನೆಗಳು ವಿಷ್ಣುವಿನ ಆಭರಣ ಸಾಧನಗಳು. ಇದು ವೈಷ್ಣವ ಲಾಂಛನವಾಗಿದ್ದು ಮಠಾಧೀಶರು ಮಾತ್ರ ಹಾಕುತ್ತಾರೆ.
ಸತ್ಯ ಪ್ರಮೋದ ತೀರ್ಥ(1948-1997) ರ ಹೆಸರಿನ ರಸ್ತೆಯನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತಕುಮಾರ್ ಅವರು ಭಾನುವಾರ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮೇಯರ್ ಬಿ.ಎಸ್ ಸತ್ಯನಾರಾಯಣ, ಚಿಕ್ಕಪೇಟೆ ಶಾಸಕ ಅರ್.ವಿ ದೇವರಾಜ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮುಂತಾದವರು ಭಾಗವಹಿಸಿದ್ದರು. ಸಮಾರಂಭದ ಚಿತ್ರಗಳು ಮುಂದಿವೆ ನೋಡಿ...
ಅನೇಕ ಕಡೆಗಳಲ್ಲಿ ಮುದ್ರಾಧಾರಣೆ
ಬೆಂಗಳೂರಿನ ಉತ್ತರಾದಿ ಮಠವಲ್ಲದೆ ಪೇಜಾವರ, ಕಾಣಿಯೂರು, ಉತ್ತರಾದಿ, ಪುತ್ತಿಗೆ, ಸೋದೆ, ಸವಣೂರು, ತುಮಕೂರಿನ ಭೀಮನಕಟ್ಟೆಯಲ್ಲಿ, ಹುಬ್ಬಳ್ಳಿಯಲ್ಲಿ ಉಡುಪಿಯ ಭಂಡಾರಕೇರಿ ಮಠದ ಶ್ರೀಗಳು, ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಠಾಧೀಶರು,ಅದಮಾರು, ಫಲಿಮಾರು ಸೇರಿದಂತೆ ಅನೇಕ ಕಡೆಗಳಲ್ಲಿ ಮುದ್ರಾಧಾರಣೆ ನಡೆಯಲಿದೆ.
ಸತ್ಯಾತ್ಮ ತೀರ್ಥಸ್ವಾಮೀಜಿ ಹಿತವಚನ
ಸಂಸಾರ ಎಂಬ ಭವಸಾಗರದಲ್ಲಿ ಮುಳುಗಿ ಹೋಗಿರುವ ಜನರ ದೇಹಶುದ್ಧಿಗೆ ಏಕಾದಶಿಯಂದು ನೀಡುವ ತಪ್ತಮುದ್ರಾಧಾರಣೆ ಬಹು ಪ್ರಮುಖವಾದುದು. ವೈಷ್ಣವದೀಕ್ಷೆ ಪ್ರತೀಕವಾಗಿರುವ ತಪ್ತಮುದ್ರಾಧಾರಣೆಯಿಂದ ಧರ್ಮದ ನೀತಿಯ ಕರ್ತವ್ಯವನ್ನು ಜೀವಂತವಾಗಿಸಬಹುದು ಎಂದು ಸತ್ಯಾತ್ಮ ತೀರ್ಥಸ್ವಾಮೀಜಿ ಹೇಳಿದ್ದಾರೆ.
ತಪ್ತಮುದ್ರಾಧಾರಣೆಯಿಂದ ಶುದ್ಧಿ
ಬುದ್ಧಿ ಮನಸ್ಸುಗಳಿರಲು ದೇಹಬೇಕು. ಕಾಮ, ಕ್ರೋಧ, ಲೋಭದಿಂದಾಗಿ ಮೈಲಿಗೆಯಾದ ದೇಹವನ್ನು ತಪ್ತಮುದ್ರಾಧಾರಣೆಯಿಂದ ಶುದ್ಧಿಗೊಳಿಸಿದಾಗ ಸಂಸ್ಕಾರ, ಪಾವಿತ್ರ್ಯ ಲಭಿಸುತ್ತದೆ
ಯುಗಪುರುಷ ಸತ್ಯ ಪ್ರಮೋದ ತೀರ್ಥರು
ಯುಗಪುರುಷ ಸತ್ಯ ಪ್ರಮೋದ ತೀರ್ಥರು ಧಾರವಾಡ ಮೂಲದವರಾಗಿದ್ದು ಗುರುರಾಜ ನಾಮಾಂಕಿತರಾಗಿ 1948ರಲ್ಲಿ ಬೆಂಗಳೂರಿನ ಉತ್ತರಾದಿ ಮಠದ ಗುರುಗಳಾದರು. ಮಧ್ವಾಚಾರ್ಯರ ನಂತರ ಗುರುಪೀಠವನ್ನೇರಿದ 41ನೇ ಯತಿವರ್ಯ ಎನಿಸಿದರು. ಸುಂಕೇನಹಳ್ಳಿ ವಾರ್ಡ್ ಗೆ ಸೇರುವ ಉತ್ತರಾದಿಮಠದ ಮುಂದಿನ ರಸ್ತೆಗೆ ಅವರ ಹೆಸರನ್ನು ಇಡಲಾಗಿದೆ.