ಮಂಗಳೂರು ಗೋಲಿಬಾರ್ ಬಗ್ಗೆ ಖಾದರ್ ಭಾಷಣ: ಕೆರಳಿದ ಬಿಜೆಪಿ ಶಾಸಕರು
ಬೆಂಗಳೂರು, ಫೆಬ್ರವರಿ 19: ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ, ಮಾಜಿ ಮಂತ್ರಿ ಯು.ಟಿ.ಖಾದರ್ ಅವರು ಮಂಗಳೂರು ಗಲಭೆ ಕುರಿತು ಮಾತನಾಡಿದರು.
'ಡಿಸೆಂಬರ್ 18 ರಂದು ಇಡೀ ರಾಜ್ಯದ 20 ಜಿಲ್ಲೆಗಳಲ್ಲಿ 144 ನೆ ಸೆಕ್ಷನ್ ಹಾಕಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ತಮ್ಮ ಜಿಲ್ಲೆಗಳಿಗೆ ಹೋಗಿ ಪರಿಸ್ಥಿತಿ ತಿಳಿಗೊಳಿಸುವ ಕೆಲಸ ಮಾಡಬೇಕಿತ್ತು, 144 ನೇ ಸೆಕ್ಷನ್ ಇದ್ದರೂ ಬೆಂಗಳೂರು ಮತ್ತಿತರ ಕಡೆ ಶಾಂತಿಯುತ ಪ್ರತಿಭಟನೆ ನಡೆದಿತ್ತು' ಎಂದು ಖಾದರ್ ಮಾತು ಆರಂಭಿಸಿದರು.
ಮಂಗಳೂರು ಗೋಲಿಬಾರ್: ಸರ್ಕಾರವನ್ನು ಬೆತ್ತಲು ಮಾಡಿದ ಕುಮಾರಸ್ವಾಮಿ
'ಸಿಎಂ ಕೂಡ ಲಾಠಿಚಾರ್ಜ್ ಮಾಡಲ್ಲ ಅಂತಾ ಹೇಳಿಕೆ ನೀಡಿದ್ದರು, ಹಾಗಾಗಿ ನೂರು ಜನರ ಗುಂಪು ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡಲು ಬಂತು, ಅವರ ಮೇಲೆ ಏಕಾಏಕಿ ಲಾಠಿ ಚಾರ್ಜ್ ಮಾಡಿ, ಗೋಲಿಬಾರ್ ಮಾಡಿದರು. ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೆಟರ್ ಕೊಟ್ಟ ಕಾರಣಕ್ಕೆ ತನಿಖೆ ಮಾಡದೆ, ವಿಚಾರಣೆ ಮಾಡದೆ ನನ್ನ ಮೇಲೆ ದೇಶದ್ರೋಹದ ಕೇಸ್ ಹಾಕಿದ್ದಾರೆ ಎಂದರು.
''144 ನೇ ಸೆಕ್ಷನ್ ಜಾರಿಯಲ್ಲಿದ್ದರೂ ರಾಜಕೀಯ ಪಕ್ಷಗಳು ಪ್ರತಿಭಟನೆ ಮಾಡಿದ ಉದಾಹರಣೆಗಳಿವೆ, ಮಂಗಳೂರಿನ ನೆಹರು ಮೈದಾನದಲ್ಲಿ ಇದೇ ಸುನೀಲ್ ಕುಮಾರ್ ನಿಷೇದಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ಮಾಡಿಲ್ಲವೇ?'' ಎಂದು ಹೇಳಿದರು.
ನನ್ನ ವಿರುದ್ಧ ದೇಶದ್ರೋಹದ ಕೇಸ್ ಹಾಕಿದ್ದಾರೆ: ಖಾದರ್
''ನನ್ನ ವಿರುದ್ಧ ದೇಶದ್ರೋಹದ ಕೇಸ್ ಹಾಕಿದ್ದಾರೆ. ಇದು ರಾಜಕೀಯ ಪ್ರೇರಿತ. ಹಿಂದೆ ನಳೀನ್ ಕುಮಾರ್ ಕಟೀಲ್ ಅವರೂ ಕೊಣಾಜೆಗೆ ಬಂದು ಹೇಳಿಕೆ ಕೊಟ್ಟಿದ್ದರು. ಕಾರ್ತಿಕ್ ರಾಜ್ ಹತ್ಯೆ ಬಳಿಕ ಕೊಣಾಜೆಯಲ್ಲಿ ಕಟೀಲ್ ಇಡೀ ಮಂಗಳೂರಿಗೆ ಬೆಂಕಿ ಹಾಕುವ ಹೇಳಿಕೆ ಕೊಟ್ಟರು, ಶೋಭಾ ಕರಂದ್ಲಾಜೆ ಅವರೂ ಕೆಲವು ಹೇಳಿಕೆ ಕೊಟ್ಟಿದ್ದರು. ಇದನ್ನೆಲ್ಲ ನಾವು ರಾಜಕೀಯಕ್ಕೆ ಬಳಸಿಕೊಳ್ಳಲಿಲ್ಲ ಎಂದರು.
ಪಾಕಿಸ್ತಾನಕ್ಕೂ ನನಗೂ ಸಂಬಂಧವಿಲ್ಲ, ಮೋದಿಗೆ ಇದೆ: ಖಾದರ್
''ಪಾಕಿಸ್ತಾನಕ್ಕೂ ನನಗೂ ಯಾವ ಸಂಬಂಧವೂ ಇಲ್ಲ, ನನಗೆ ಅಲ್ಲಿ ಯಾವ ನೆಂಟರೂ ಇಲ್ಲ, ನಾನು ಪಾಕಿಸ್ತಾನಕ್ಕೆ ಹೋಗಿ ಬಿರ್ಯಾನಿ ಊಟ ಮಾಡಿ ಬಂದಿಲ್ಲ, ಪಾಕಿಸ್ತಾನದಲ್ಲಿ ಬಿರ್ಯಾನಿ ತಿಂದು ಬಂದವರು ಪ್ರಧಾನಿ ನರೇಂದ್ರ ಮೋದಿ'' ಎಂದು ಹೇಳಿದರು.
ಕುಮಾರಸ್ವಾಮಿ ಬಿಚ್ಚಿಟ್ಟ ಮಂಗಳೂರು ಗೋಲಿಬಾರ್ ನ ಇನ್ನೊಂದು ಮುಖ
ಕೂಗಾಟ ಪ್ರಾರಂಭಿಸಿದ ಬಿಜೆಪಿ ಶಾಸಕರು
ಯು.ಟಿ.ಖಾದರ್ ಹೇಳಿಕೆಯಿಂದ ಬಿಜೆಪಿ ಶಾಸಕರು ಆಕ್ರೋಶಗೊಂಡು, ಕೂಗಾಟ ಪ್ರಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಶಾಸಕರೂ ಗದ್ದಲ ಎಬ್ಬಿಸಿದರು. 'ಕಿಡಿ ಹಚ್ಚಿದವರು ನೀವೇ' ಎಂದು ಬಿಜೆಪಿಯ ಸತೀಶ್ ರೆಡ್ಡಿ ಮೂದಲಿಸಿದರು. ''ನಾಯಿಬಾಲ ಡೊಂಕು, ದಬ್ಬೆ ಕಟ್ಟಿದ್ರೆ ನೆಟ್ಡಗಾಗಲ್ಲ'' ಎಂದು ಸಚಿವ ಸಿ.ಟಿ. ರವಿ ಟೀಕಿಸಿದರು.
'ನರೇಂದ್ರ ಮೋದಿ ಗೂ ಮೊದಲು ಸಿಂಗ್ ಸಹ ಹೋಗಿದ್ದರು'
''ನರೇಂದ್ರ ಮೋದಿಯವರಿಗೆ ಮೊದಲು ಕಾಂಗ್ರೆಸ್ ಪ್ರಧಾನಿ ಮನಮೋಹನಸಿಂಗ್ ಕೂಡ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದರು. ನಿಮ್ಮಕಾಂಗ್ರೆಸ್ ನಾಯಕರಿಗೆ ಈಗಲೂ ಪಾಕಿಸ್ತಾನದಿಂದ ಡೈಲಿ ಬಿರ್ಯಾನಿ ಪ್ಯಾಕೆಟ್ ಪಾರ್ಸೆಲ್ ಬರುತ್ತದೆ. ಖಾದರ್ ಹೇಳಿಕೆಯನ್ನು ಕಡತದಿಂದ ತೆಗೆಯಬೇಕು'' ಎಂದು ಗೃಹ ಸಚಿವ ಬಸರಾಜ ಬೊಮ್ಮಾಯಿ ಹೇಳಿದರು.
ಪ್ರತಿಭಟನೆಗೆ ಮುಂದಾದ ಬಿಜೆಪಿ ಶಾಸಕರು
'ಖಾದರ್ ಹೇಳಿದ ಪದವನ್ನು ಕಡತದಿಂದ ತೆಗಿಸಬೇಕು ಎಂದು ಒತ್ತಾಯಿಸಿ ಬಿಜೆಪಿಯ ವೀರಣ್ಣ ಚರಂತಿಮಠ ಮತ್ತಿತರ ಶಾಸಕರು ಧರಣಿಗೆ ಮುಂದಾದರು. ವಿಧಾನಸಭೆಯಲ್ಲಿ ಕೋಲಾಹಲ ಗಲಾಟೆ ಎದ್ದಿತು. ಈ ಸಮಯದಲ್ಲಿ ಶಾಸಕ ರೇಣುಕಾಚಾರ್ಯ ಅವರು ಖಾದರ್ ದೇಶದ್ರೋಹಿ ಎಂದರು, ಅರವಿಂದ ಲಿಂಬಾವಳಿ ಸಹ ಇದಕ್ಕೆ ದನಿ ಗೂಡಿಸಿದರು.
ಬಿರಿಯಾನಿ ತಿನ್ನಲು ಹೋಗಿದ್ರು ಎಂಬುದನ್ನು ಒಪ್ಪೊಲ್ಲ: ಬಿಎಸ್ವೈ
ಸಿಎಂ ಬಿಎಸ್ ಯಡಿಯೂರಪ್ಪ ಮಧ್ಯ ಪ್ರವೇಶ ಮಾಡಿ, 'ಪ್ರಧಾನಿ ಮೋದಿಯವರು ಪಾಕಿಸ್ತಾನಕ್ಕೆ ಹೋಗಿದ್ರು ಅಂತಾ ಹೇಳಿ ಒಪ್ತೇವೆ, ಆದರೆ ಅಲ್ಲಿ ಹೋಗಿ ಬಿರ್ಯಾನಿ ತಿಂದರು, ಅಂತಾ ಹೇಳಿದ್ದನ್ನ ಮಾತ್ರ ನಾವು ಒಪ್ಪಲ್ಲ ಇದಕ್ಕೆ ಕ್ಷಮೆ ಕೇಳಬೇಕು, ಅಲ್ಲಿವರೆಗೂ ನಾವು ಸುಮ್ಮನಿರಲ್ಲ' ಎಂದರು.
ರೇಣುಕಾಚಾರ್ಯ ಹೇಳಿದ್ದೂ ಸಹ ತಪ್ಪೆ: ದೇಶಪಾಂಡೆ
ಈ ನಡುವೆ ಈಶ್ವರಪ್ಪ, ಖಾದರ್ ಅಯೋಗ್ಯ ಎಂದರು. ಖಾದರ್ ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು. ಕಾಂಗ್ರೆಸ್ ಸದಸ್ಯ ಆರ್.ವಿ. ದೇಶಪಾಂಡೆ ಮಧ್ಯಪ್ರವೇಶ ಮಾಡಿ, ಯು.ಟಿ. ಖಾದರ್ ಅವರು ಪ್ರಧಾನಿ ಬಿರ್ಯಾನಿ ತಿನ್ನಲು ಹೋಗಿದ್ದರು ಎಂದಿದ್ದು ತಪ್ಪು ಹಾಗೆಯೇ ರೇಣುಕಾಚಾರ್ಯ ಕೂಡ ದೇಶದ್ರೋಹಿ ಎಂದಿದ್ದು ತಪ್ಪು' ಎಂದರು.
'ಬಿರಿಯಾನಿ' ಪದ ಬಳಸಿದ್ದಕ್ಕೆ ಖಾದರ್ ಕ್ಷಮಾಪಣೆ
ಸ್ಪೀಕರ್ ಸಹ ಮಧ್ಯ ಪ್ರವೇಶಿಸಿ, ಖಾದರ್ ಅವರು ಹೇಳಿದ್ದನ್ನು ಇಡೀಯ ರಾಜ್ಯ ನೋಡಿದ್ದಾರೆ. ಪ್ರಧಾನಿ ಬಗ್ಗೆ ಗೌರವದಿಂದ ಮಾತನಾಡಬೇಕು. ನಿಮ್ಮ ಮಾತಿನ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಖಾದರ್, ದ ಪ್ರಧಾನಿಯವರ ಮೇಲೆ ನಮಗೆಲ್ಲಾ ಗೌರವವಿದೆ. ಆದರೆ ಬಿರ್ಯಾನಿ ಶಬ್ದವನ್ನು ಬಳಸಿದ್ದಕ್ಕೆ ಯಾರಿಗಾದರೂ ನೋವುಂಟು ಮಾಡಿದ್ದರೆ ಕ್ಷಮೆ ಕೇಳುತ್ತೇನೆ, ಆ ಪದವನ್ನು ಕಡತದಿಂದ ತೆಗೆದುಹಾಕಬಹುದು. ಅದಕ್ಕಾಗಿ ವಿಷಾದಿಸುತ್ತೇನೆ' ಎಂದರು.