'ಇನ್ಪೋಸಿಸ್ ಫೌಂಡೇಶನ್ ನಿಂದ ಶಾಸ್ತ್ರೀಯ ಕಲೆಗಳ ಅಭಿವೃದ್ದಿ'
ಬೆಂಗಳೂರು, ಜುಲೈ 25: ಮಾರುಕಟ್ಟೆ ಮತ್ತು ಲಾಭ ಉದ್ದೇಶದ ಕಂಪನಿಗಳ ನಡುವೆ ಇನ್ಫೋಸಿಸ್ ಫೌಂಡೇಶನ್ ಭಿನ್ನವಾಗಿದ್ದು, ಶಾಸ್ತ್ರೀಯ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದು ರಾಜ್ಯ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಹೇಳಿದ್ದಾರೆ.
ಉಸ್ತಾದ್ ಬಾಲೇಖಾನ್ ಮೆಮೋರಿಯಲ್ ಟ್ರಸ್ಟ್ ಹಾಗೂ ಇನ್ಪೋಸಿಸ್ ಫೌಂಡೇಶನ್ ನಗರದ ಜೆಎಸ್ಎಸ್ ಸಭಾಂಗಣದಲ್ಲಿ ಶನಿವಾರ ನಡೆದ 'ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಪ್ರಶಸ್ತಿ' ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಪೋರೇಟ್ ಕಂಪನಿಗಳು ಶಾಸ್ತ್ರೀಯ ಕಲೆಗಳಿಗೆ ನೆರವು ನೀಡಲ್ಲ. ಏಕೆಂದರೆ ಶಾಸ್ತ್ರೀಯ ಕಲೆಗಳಿಂದ ಪ್ರಚಾರ ದೊರೆಯುವುದಿಲ್ಲ ಎಂಬ ಭಾವನೆ ಇದೆ. ಹೀಗಾಗಿ ಪಾಶ್ಚಿಮಾತ್ಯ ಕಲೆಗಳನ್ನು ಪೋಸಿಸುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಾಸ್ತ್ರೀಯ ಕಲೆಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಬೇಕು
ಇಂತಹ ಪರಿಸ್ಥಿತಿಯ ನಡುವೆ ಇನ್ಪೋಸಿಸ್ ಫೌಂಡೇಶನ್ ಶಾಸ್ತ್ರೀಯ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ನಮ್ಮ ಸಂಸ್ಕೃತಿ, ಪರಂಪರೆ, ಸಂಪ್ರದಾಯ ಮುಂದಿನ ಪೀಳಿಗೆಗೆ ತಲುಪಿಸಲು ಉದ್ಯಗಳು ಶಾಸ್ತ್ರೀಯ ಕಲೆಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಬೇಕು ಎಂದು ಚಿರಂಜೀವಿ ಸಿಂಗ್ ಹೇಳಿದರು. ಚಿತ್ರದಲ್ಲಿ: ಪಂಡಿತ್ ವೆಂಕಟೇಶ್ ಕುಮಾರ್ ಗಾಯನ.
ದಕ್ಷಿಣ ಭಾರತದ ಕಲೆಗಳ ಸಂಗಮ ಸ್ಥಳ
ಧಾರವಾಡ ನಗರ ಉತ್ತರ ಮತ್ತು ದಕ್ಷಿಣ ಭಾರತದ ಕಲೆಗಳ ಸಂಗಮ ಸ್ಥಳವಾಗಿದೆ. ಅಂತಹ ಸಂಗಮ ಸ್ಥಳ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಉಸ್ತಾದ್ ಬಾಲೇಖಾನ್ ಅವರನ್ನು ನೋಡುವ ಹಾಗೂ ಅವರ ಸಂಗೀತ ಕೇಳುವ ಸದಾವಕಾಶ ನನಗೆ ಸಿಕ್ಕಿತ್ತು. ಬಾಲೆಖಾನ್ ಸಂಗೀತದಲ್ಲಿ ಕಿರಾಣಾ-ಗ್ವಾಲಿಯರ್ ಘರಾಣಗಳ ಸಮ್ಮಿಶ್ರಣವಿತ್ತು. ಅವರ ಕುಡುಂಬದವರು ಅವರ ಹೆಸರಿನಲ್ಲಿ ಉತ್ತಮ ಸೇವೆ ಮಾಡುತ್ತಿದ್ದಾರೆ ಎಂದರು.
ಸಂತೋಷ್ ಹೆಗ್ಡೆ
ಪಂಡಿತ್ ಎಂ ವೆಂಕಟೇಶ್ ಕುಮಾರ್ ಗೆ ಇನ್ಪೋಸಿಸ್ - ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ್ ಪ್ರಶಸ್ತಿ ಪ್ರಧಾನ ಮಾಡಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿದರು.
ಹಾಡುಗಳನ್ನು ಕೇಳುತ್ತಿರುತ್ತೇನೆ ಎಂದರು
ಶಾಸ್ತ್ರೀಯ ಸಂಗೀತದ ಬಗ್ಗೆ ಹೆಚ್ಚಿನ ಜ್ಞಾನ ಇಲ್ಲದಿದ್ದರೂ ಸಂಗೀತ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ನನ್ನ ಕಾರಿನಲ್ಲಿ ಯಾವಾಗಲೂ ಹೆಡ್ ಫೋನ್ ಇಟ್ಟುಕೊಂಡಿದ್ದು 2400 ಕ್ಕೂ ಹೆಚ್ಚು ಹಾಡುಗಳನ್ನು ಕೇಳುತ್ತಿರುತ್ತೇನೆ ಎಂದರು.
ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ. ಸುಧಾಮೂರ್ತಿ
ಹಿಂದುಸ್ಥಾನಿ ಗಾಯಕ ಪಂಡಿತ್ ಅವರಿಗೆ ಉಸ್ತಾದ್ ಬಾಲೆಖಾನ್ ಸ್ಮರಣಾರ್ಥ ಪ್ರಶಸ್ತಿ, ಫಲಕ ಹಾಗೂ ಒಂದು ಲಕ್ಷ ರೂಗಳ ಚೆಕ್ ನೀಡಿ ಗೌರವಿಸಲಾಯಿತು. ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ. ಸುಧಾಮೂರ್ತಿ, ಗಂಗೂಬಾಯಿ ಹಾನಗಲ್ ಅವರ ಪುತ್ರ ಬಾಬುರಾವ್ ಹಾನಗಲ್, ಉಸ್ತಾದ್ ಬಾಲೆಖಾನ್ ಪುತ್ರ ಹಫೀಜ್ ಬಾಲೇಖಾನ್ ಸೇರಿದಂತೆ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು. ನಂತರ ನಡೆದ ಸಂಗೀತ ಕಚೇರಿ ಎಲ್ಲರ ಗಮನ ಸೆಳೆಯಿತು.