ಅನಗತ್ಯ ಸರ್ಕಾರಿ ಇಲಾಖೆಗಳು ರದ್ದು: ಆರ್.ಅಶೋಕ್
ಬೆಂಗಳೂರು, ಫೆಬ್ರವರಿ 28: ಅನಗತ್ಯ ಸರ್ಕಾರಿ ಇಲಾಖೆಗಳು ಕೆಲವನ್ನು ರದ್ದು ಮಾಡಲಾಗುವುದು ಇನ್ನು ಕೆಲವನ್ನು ವಿಲೀನ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್ ಅವರು, ಹಲವು ಅನಗತ್ಯ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ, ಅವುಗಳನ್ನು ಗುರುತಿಸಿ ರದ್ದು ಮಾಡಲಾಗುವುದು ಅಥವಾ ಬೇರೆ ಇಲಾಖೆಗಳ ಜೊತೆಗೆ ವಿಲೀನ ಮಾಡಲಾಗುವುದು ಎಂದರು.
ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ 100 ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ ಅವರಿಗೆ ಕೆಲಸಗಳೇ ಕಡಿಮೆ. ಅವರನ್ನು ಬೇರೆ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳಿಗೆ ನೇಮಿಸಲಾಗುವುದು ಎಂದರು.
ಒಟ್ಟು ಆದಾಯದ ಶೇ 60 ನ್ನು ಸಿಬ್ಬಂದಿಗಳ ವೇತನಕ್ಕೆ ಖರ್ಚು ಮಾಡಲಾಗುತ್ತಿದೆ. ಆದರೆ ಎಷ್ಟೋ ಸಿಬ್ಬಂದಿಗಳಿಗೆ ಸರಿಯಾಗಿ ಕೆಲಸವೇ ಇಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರಚನೆ ಆಗಿರುವ ಹೊಸ ತಾಲ್ಲೂಕುಗಳಿಗೆ ಮೂಲಸೌಕರ್ಯ ಒದಗಿಸುವ ಬಗ್ಗೆ ಮಾತನಾಡಿದ ಅವರು, 'ಹೊಸ ತಾಲ್ಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು' ಎಂದರು.
ವೃದ್ದಾಪ್ಯ ವೇತನವನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು, 60 ವರ್ಷ ಮೇಲ್ಪಟ್ಟವರು ಬ್ಯಾಂಕ್ ಖಾತೆ ನೀಡಿದರೆ ಖಾತೆಗೆ ಹಣ ವರ್ಗಾಯಿಸಲಾಗುವುದು ಎಂದರು.