ಅಮೆರಿಕ-ಭಾರತ ಬಾಂಧವ್ಯ ವೃದ್ಧಿಗೆ ಬೆಂಗಳೂರಿನ ಕಂಪನಿಗಳ ಕೊಡುಗೆ
ಬೆಂಗಳೂರು, ಆಗಸ್ಟ್ 10; ಯುಎಸ್ ಮಿಷನ್ ಇಂಡಿಯಾ ಚಾರ್ಜೆ ಡಿ ಅಫೇರ್ಸ್ ಪೆಟ್ರೀಷಿಯಾ ಲಸಿನಾ ಬೆಂಗಳೂರಿನ ಉದ್ಯಮಿಗಳನ್ನು ಭೇಟಿ ಮಾಡಿ ಅಮೆರಿಕ-ಭಾರತ ನಡುವಿ ಸುಭದ್ರ ಆರ್ಥಿಕ ಒಡನಾಟದ ಬಗ್ಗೆ ಸಂವಾದ ನಡೆಸಿದರು.
ಬುಧವಾರ ಬೆಂಗಳೂರಿನ ವಾಣಿಜ್ಯೋದ್ಯಮ ನೇತಾರರು ಮತ್ತು ಉದ್ಯಮಿಗಳನ್ನು ಭೇಟಿ ಮಾಡಿ ಸಂವಾದ ನಡೆಸಿದರು. ಚಾರ್ಜೆ ಲಸಿನಾ ಅವರು ಸೆಪ್ಟಂಬರ್ 2021ರಲ್ಲಿ ಅಧಿಕಾರವಹಿಸಿಕೊಂಡಿದ್ದು, ಅವರು ಬೆಂಗಳೂರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ.
ಚಾರ್ಜೆ ಅವರೊಂದಿಗೆ ಚೆನ್ನೈನ ಯುಎಸ್ ಕಾನ್ಸಲ್ ಜನರಲ್ ಜುಡಿತ್ ರೇವಿನ್ ಮತ್ತು ಯುಎಸ್ ನ್ಯಾಷನಲ್ ಸೈನ್ಸ್ ಫೌಂಡೇಷನ್(ಎನ್ಎಸ್ಎಫ್)ನ ನಿರ್ದೇಶಕ ಡಾ. ಸೇತುರಾಮನ್ ಪಂಚನಾಥನ್, ಕರ್ನಾಟಕ ಉನ್ನತ ಶಿಕ್ಷಣ, ಐಟಿ & ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ ಉಪಸ್ಥಿತರಿದ್ದರು.
ವಾಣಿಜ್ಯ ಮತ್ತು ಉದ್ಯಮ ನಾಯಕರಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ಚಾರ್ಜೆ ಲಸಿನಾ ಪಾಲ್ಗೊಂಡರು. ಹತ್ತಾರು ಸಾವಿರ ಭಾರತದ ನಾಗರಿಕರನ್ನು ಔಪಚಾರಿಕ ವಲಯದಲ್ಲಿ ಉನ್ನತ ಗುಣಮಟ್ಟದ ಕೆಲಸದ ಪರಿಸರಗಳಲ್ಲಿ ಉದ್ಯೋಗ ನೀಡಿರುವ ಬೆಂಗಳೂರಿನಲ್ಲಿರುವ 650ಕ್ಕೂ ಹೆಚ್ಚು ಯುಎಸ್ ಕಂಪನಿಗಳ ಕೊಡುಗೆ ಸ್ಮರಿಸಿದರು.
ಆರ್ಥಿಕ ಸಂಬಂಧ ಮತ್ತು ಬಂಡವಾಳದ ಮೂಲಕವಷ್ಟೇ ಅಲ್ಲದೇ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಉಪಕ್ರಮಗಳ ಮೂಲಕ ಮತ್ತು ಉದ್ಯೋಗಿಗಳ ಕೌಶಲ ಅಭಿವೃದ್ಧಿಗೆ ಬದ್ಧತೆಯ ಮೂಲಕ ನೀಡುತ್ತಿರುವ ಅಪಾರ ಕೊಡುಗೆಯನ್ನು ಅವರು. ಶ್ಲಾಘಿಸಿದರು.
ಅಮೆರಿಕ-ಭಾರತ ಸಹಯೋಗ; ಚಾರ್ಜೆ ಡಿ ಅಫೇರ್ಸ್ ಪೆಟ್ರೀಷಿಯಾ ಲಸಿನಾ ಅವರು, "ಈ ವರ್ಷ ನಮ್ಮ ಎರಡೂ ದೇಶಗಳು 75 ವರ್ಷಗಳ ರಾಜತಾಂತ್ರಿಕ ಬಾಂಧವ್ಯ ಮತ್ತು ವಿಶ್ವಾಸಾರ್ಹ ಪಾಲುದಾರಿಕೆಯನ್ನು ಸಂಭ್ರಮಾಚರಣೆ ಮಾಡುತ್ತಿದೆ" ಎಂದರು.
ಅಧ್ಯಕ್ಷ ಜೋ ಬೈಡೆನ್ ಹೇಳಿದಂತೆ, "ನಮ್ಮ ಜನರು, ಕೌಟುಂಬಿಕ ಬಾಂಧವ್ಯಗಳು, ಮಿತ್ರತ್ವ ಮತ್ತು ಹಂಚಿಕೊಂಡ ಮೌಲ್ಯಗಳ ಮೂಲಕ ಗಟ್ಟಿಗೊಂಡಿರುವ ಆಳವಾದ ಸಂಪರ್ಕವನ್ನು ಸಂಭ್ರಮಿಸುತ್ತಿದ್ದೇವೆ. ಯುಎಸ್ ಮತ್ತು ಭಾರತದ ಉದ್ಯಮಗಳ ನಡುವೆ ಈ ಸಮಾನ ಮೌಲ್ಯಗಳಿಂದಾಗಿ ಅಮೆರಿಕ ಮತ್ತು ಭಾರತದ ಕಂಪನಿಗಳು ಜೊತೆಯಾಗಿ ಕೆಲಸ ಮಾಡುವ ಮೂಲಕ, ಆವಿಷ್ಕಾರ ಮತ್ತು ಸಮೃದ್ಧಿಯತ್ತ ಮುನ್ನಡೆಯುತ್ತಿವೆ" ಎಂದು ಬಣ್ಣಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಸದೃಢ ಸಹಯೋಗವನ್ನು ವಿಸ್ತರಿಸುವ ಉದ್ದೇಶದಿಂದ ಬೆಂಗಳೂರಿಗೆ ಭೇಟಿ ನೀಡಿರುವ ಎನ್ಎಸ್ಎಫ್ ನಿರ್ದೇಶಕ ಡಾ. ಪಂಚನಾಥನ್, ಮೂಲತಃ ಚೆನ್ನೈ ನಿವಾಸಿ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಪದವೀಧರರಾಗಿರುವ ಅವರು ಯುಎಸ್ ಮತ್ತು ಭಾರತದ ವಿಶ್ವವಿದ್ಯಾಲಯಗಳ ಪ್ರಯೋಗಾಲಯಗಳಲ್ಲಿ 35 ಸಹಯೋಗದ ಸಂಶೋಧನಾ ಯೋಜನೆಗಳಿಗೆ ಎನ್ಎಸ್ಎಫ್ ಅನುದಾನ ಪ್ರಕಟಿಸಲು ಭಾರತಕ್ಕೆ ಆಗಮಿಸಿದ್ದಾರೆ.
ಡಾ. ಪಂಚನಾಥನ್ ಮಾರ್ಗದರ್ಶನದಲ್ಲಿ ವಿಸ್ತಾರ ಶ್ರೇಣಿಯ ವೈಜ್ಞಾನಿಕ ವಲಯಗಳಲ್ಲಿ ಆವಿಷ್ಕಾರದಲ್ಲಿ ಅಮೆರಿಕವನ್ನು ಮುಂಚೂಣಿಗೆ ತರುವ ಉದ್ದೇಶವನ್ನು ಎನ್ಎಸ್ಎಫ್ ಹೊಂದಿದೆ. ಎನ್ಎಸ್ಎಫ್ ಇತ್ತೀಚೆಗೆ ಪ್ರಮುಖ ಶಾಸನ ತಂದಿದ್ದು, ಅದರಂತೆ ಮೂಲಭೂತ ಸಂಶೋಧನೆಯ ಎಲ್ಲ ಕ್ಷೇತ್ರಗಳಿಗೂ ಅನುದಾನ ನೀಡಿ ಬೆಂಬಲಿಸುವುದಲ್ಲದೆ, ತಂತ್ರಜ್ಞಾನ, ಆವಿಷ್ಕಾರ ಮತ್ತು ಸಹಭಾಗಿತ್ವಕ್ಕೆ ಒತ್ತು ನೀಡುತ್ತದೆ.
Recommended Video
ಚಾರ್ಜೆ ಲಸಿನಾ ಅವರು ಇದೇ ಸಂದರ್ಭದಲ್ಲಿ ಹೊಸ ಕಾನ್ಸುಲರ್ ಫಾರ್ ಕಮರ್ಷಿಯಲ್ ಅಫೇರ್ಸ್ ಕ್ಯಾರೀ ಅರುಣ್ ಪರಿಚಯಿಸಿದರು. ಚೆನ್ನೈನಲ್ಲಿರುವ ಕ್ಯಾರಿ ಅರುಣ್ ಅವರು ದಕ್ಷಿಣ ಭಾರತದ ಯುಎಸ್ ಕಮರ್ಷಿಯಲ್ ಸರ್ವೀಸ್ನ ಉಸ್ತುವಾರಿ ವಹಿಸಿದ್ದು, ಅಮೆರಿಕ ಮತ್ತು ಭಾರತದ ವ್ಯಾಪಾರ ಮತ್ತು ವಾಣಿಜ್ಯ ಅವಕಾಶಗಳನ್ನು ಬೆಂಬಲಿಸಲಿದ್ದಾರೆ.