ಬಿಬಿಎಂಪಿ ಮತ್ತೊಂದು ಹಗರಣ ಎಸಿಬಿ ತನಿಖೆಗೆ
ಬೆಂಗಳೂರು, ಫೆಬ್ರವರಿ 29: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸಂಚಾರಿ ಅಭಿಯಂತರರ ಘಟಕದಲ್ಲಿ ನಡೆದಿರುವ ಹಗರಣದ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸಲಾಗಿದೆ.
ಈ ಕುರಿತು ಶುಕ್ರವಾರ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಈ ಬಗ್ಗೆ ಬಿಜೆಪಿ ಬೆಂಗಳೂರು ನಗರ ಅಧ್ಯಕ್ಷ ಎನ್.ಆರ್.ರಮೇಶ್ ನಗರಾಭಿವೃದ್ಧಿ ಇಲಾಖೆಗೆ ದೂರು ನೀಡಿದ್ದರು. ರಸ್ತೆ ಹಾಗೂ ಪಾದಚಾರಿ ಸುರಕ್ಷತಾ ಕಾಮಗಾರಿಗಳನ್ನು ನಿರ್ವಹಿಸುವುದು ಸಂಚಾರಿ ಅಭಿಯಂತರರ ಘಟಕದ (ಟಿಇಸಿ) ಜವಾಬ್ದಾರಿ. 2016-17 ಮತ್ತು 2017-18ನೇ ಸಾಲುಗಳಲ್ಲಿ 119 ಕೋಟಿ ರುಪಾಯಿ ಮೊತ್ತದ ಕಾಮಗಾರಿಗಳನ್ನು ಪೂರ್ಣಗೊಳಿಸಿರುವುದಾಗಿ ಟಿಇಸಿ ಹೇಳಿದ್ದು, 108 ರುಪಾಯಿ ಕೋಟಿ ಮೊತ್ತವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಲಾಗಿದೆ. ಆದರೆ, ನಗರದ 1,400 ಕಿ.ಮೀ ಉದ್ದದ ಮುಖ್ಯ ರಸ್ತೆಗಳಲ್ಲಿ ಶೇ 20 ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.
ಆದಿಶಕ್ತಿ ದೇವಸ್ಥಾನಕ್ಕೆ ಬಿಬಿಎಂಪಿ ಆಯುಕ್ತರಿಂದ ಕಟ್ಟುನಿಟ್ಟಿನ ಸೂಚನೆ
ಸಂಚಾರಿ ಅಭಿಯಂತರರ ಘಟಕದಲ್ಲಿ 65 ಕೋಟಿ ರುಪಾಯಿ ಮೊತ್ತದ 71 ಕಾಮಗಾರಿಗಳನ್ನು ಕಾನೂನುಬಾಹಿರವಾಗಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಗೆ (ಕೆಆರ್ಐಡಿಎಲ್) ವಹಿಸಿದೆ. ಘಟಕದ ಎಂಜಿನಿಯರ್ಗಳು ರಾಜಕಾರಣಿಗಳಿಗೆ ಆಪ್ತರಾಗಿರುವ ಗುತ್ತಿಗೆದಾರರಿಗೆ ಇವುಗಳ ಉಪಗುತ್ತಿಗೆ ಸಿಗುವಂತೆ ನೋಡಿಕೊಂಡಿದ್ದಾರೆ. 54 ರುಪಾಯಿ ಕೋಟಿ ಮೊತ್ತದ ಕಾಮಗಾರಿಗಳನ್ನು ತಮ್ಮ ಆಪ್ತ ಗುತ್ತಿಗೆದಾರರಿಗೇ ನೀಡಿದ್ದಾರೆ ಎಂದು ದೂರಲಾಗಿತ್ತು.
ಅವ್ಯವಹಾರ ನಡೆದಿದೆ ಎಂದು ಬಿಬಿಎಂಪಿಯ ತಾಂತ್ರಿಕ ಹಾಗೂ ಜಾಗೃತ ಕೋಶವು (ಟಿವಿಸಿಸಿ) ವರದಿ ನೀಡಿತ್ತು. ಈ ಪ್ರಕರಣವನ್ನು ಎಸಿಬಿಗೆ ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಾಲಿಕೆಯ ಆಯುಕ್ತರಿಗೆ 2019ರ ಅಕ್ಟೋಬರ್ನಲ್ಲಿ ನಿರ್ದೇಶನ ನೀಡಿದ್ದರು.