ಉದ್ಯಾನಗರಿಯಲ್ಲಿ ಕಮರಿಹೋಗುತ್ತಿದೆಯಾ ಆಟದ ಕನಸು?
ಬೆಂಗಳೂರು, ಸೆಪ್ಟೆಂಬರ್,09 : ಉದ್ಯಾನ ನಗರಿಯಲ್ಲಿ ಬೆಳೆದ ಮಕ್ಕಳಿಗೆ ಬಾಲ್ಯವನ್ನು ಆಹ್ಲಾದಕರವಾಗಿ ಅನುಭವಿಸಲು ಸಾಧ್ಯವಾಗುತ್ತಿಲ್ಲ. ಬಾಲ್ಯದ ಸವಿಗಳಿಗೆಯ ಆಟ, ಹುಡುಗಾಟಗಳು ದೂರದ ಮಾತಾಗಿದೆ.
ಹೌದು ಕೆರೆ, ನದಿ ಜಾಗಗಳನ್ನು ಕಬಳಿಸಿಕೊಂಡು ಬೆಳೆದು ನಿಂತ ಮಹಾ ದೈತ್ಯ ಕಟ್ಟಡಗಳ ನಗರಿಯ ಮಧ್ಯೆ ಉದ್ಯಾನವನ, ಮಕ್ಕಳ ಆಟದ ಕ್ರೀಡಾಂಗಣಗಳು ಕಣ್ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಐದು ಮಕ್ಕಳು ಕ್ರೀಡಾಂಗಣ ಒದಗಿಸಬೇಕೆಂದು ನಗರದ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.[ದೇಸೀ ಕ್ರೀಡೆಗಳಿಗೆ ಗೋಲಿ ಹೊಡೀಬೇಡಿ]
ಬೆಂಗಳೂರಿನ ಚಿಕ್ಕಸಂದ್ರ ನಗರದ ಅಪಾರ್ಟ್ ಮೆಂಟ್ನ ಮಕ್ಕಳು ಆಟವಾಡಲು ವಿಶಾಲವಾದ ಕ್ರೀಡಾಂಗಣದ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿದ್ದಾರೆ. ಈ ಮನವಿಯನ್ನು ಸ್ವೀಕರಿಸಿದ ಪೊಲೀಸರು ಸಂಬಂಧಿಸಿದ ಇಲಾಖೆ ಜೊತೆ ಮಾತುಕತೆ ನಡೆಸಿ ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.
ಯಾವಾಗ ಬಂತು ಈ ಯೋಚನೆ?
ಅಪಾರ್ಟ್ ಮೆಂಟ್ ಮಕ್ಕಳು ಕಾಂಪೌಡಿನ ಒಳಗೆ ಕ್ರಿಕೆಟ್ ಆಡಿಕೊಳ್ಳುತ್ತಿರುವಾಗ ಬಾರಿಸಿದ ಚೆಂಡು ಪಕ್ಕದ ಒಂದು ಅಪಾರ್ಟ್ ಗೆ ಹೋಗಿ ಬಿದ್ದಿತು. ಆಗ ಆ ಮನೆಯ ಹೆಂಗಸು ಬಾಲ್ ಕೊಡಲು ಬಹಳಷ್ಟು ಸತಾಯಿಸಿ ಇನ್ನು ಮುಂದೆ ಆಟ ಆಡಬಾರದೆಂದು ತಾಕೀತು ಮಾಡಿದಳು.
ಈ ವಿಚಾರವನ್ನು ಬಾಲ್ ಕಳೆದುಕೊಂಡ ಮಗು ತನ್ನ ಅಪ್ಪನ ಬಳಿ ಹೇಳಿದ್ದಾನೆ. ಆಗ ತಂದೆ ಸುಜಿತ್ ಆ ಮಗುವಿಗೆ ಕ್ರೀಡಾಂಗಣ ವ್ಯವಸ್ಥೆ ಮಾಡಿಕೊಡಲು ಪೊಲೀಸರಿಗೆ ಭಾನುವಾರ ಬೆಳಿಗ್ಗೆ ಮನವಿ ಮಾಡಲು ತಿಳಿಸಿದ್ದಾರೆ. ಅದರಂತೆ ಆ ಮಗು ತನ್ನ ಸ್ನೇಹಿತರನ್ನು ಕರೆದುಕೊಂಡು ಹೋಗಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.