ಬೆಂಗಳೂರಿನಲ್ಲಿ 3000ಕ್ಕೂ ಹೆಚ್ಚು ಕೊರೊನಾ ರೋಗಿಗಳು ಕಾಣೆ: ಆರ್ ಅಶೋಕ್
ಬೆಂಗಳೂರು, ಏಪ್ರಿಲ್ 28: ಕೊರೊನಾವೈರಸ್ ಸೋಂಕಿನ ಎರಡನೇ ಅಲೆ ಹರಡುವಿಕೆ ಆತಂಕದ ನಡುವೆ ಬೆಂಗಳೂರಿನಿಂದ 3000ಕ್ಕೂ ಹೆಚ್ಚು ಸೋಂಕಿತರು ಕಾಣೆಯಾಗಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬಹುತೇಕ 3000ಕ್ಕೂ ಹೆಚ್ಚು ಕೊರೊನಾವೈರಸ್ ಸೋಂಕಿತರು ತಮ್ಮ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ತಾವು ನೀಡಿರುವ ವಿಳಾಸದಿಂದಲೂ ನಾಪತ್ತೆ ಆಗಿದ್ದು, ಪೊಲೀಸರು ಕಾಣೆಯಾಗಿರುವ ಸೋಂಕಿತರನ್ನು ಪತ್ತೆ ಮಾಡುತ್ತಿದ್ದಾರೆ ಎಂದು ಹೇಳಿದರು.
ನಿಮ್ಮ ಧ್ವನಿ ಬದಲಾವಣೆಯೂ ಕೊರೊನಾ ಸೋಂಕಿನ ಒಂದು ಲಕ್ಷಣ
ಕೊರೊನಾವೈರಸ್ ಸೋಂಕು ತಗುಲಿರುವ ಬಗ್ಗೆ ಸಾರ್ವಜನಿಕವಾಗಿ ಹೇಳದೇ ಮುಚ್ಚಿಡುತ್ತಿದ್ದಾರೆ. ಆ ಮೂಲಕ ಕೊವಿಡ್-19 ಸೋಂಕು ಹರಡುವುದಕ್ಕೆ ನೇರವಾಗಿ ಕಾರಣೀಕರ್ತರಾಗುತ್ತಿದ್ದಾರೆ ಎಂದು ಸಚಿವ ಆರ್ ಅಶೋಕ್ ಆರೋಪಿಸಿದ್ದಾರೆ.
"ತುರ್ತು ಸಂದರ್ಭದಲ್ಲಿ ಚಿಕಿತ್ಸೆಗೆ ಬರುತ್ತಾರೆ"
ರಾಜ್ಯ ಸರ್ಕಾರದಿಂದ ಉಚಿತವಾಗಿ ಕೊರೊನಾವೈರಸ್ ಸೋಂಕಿತರಿಗೆ ಔಷಧಿಗಳನ್ನು ನೀಡುತ್ತಿದ್ದೇವೆ. ಕೊವಿಡ್-19 ಔಷಧಿಗಳಿಂದಲೇ ಸೋಂಕು ಶೇ.90ರಷ್ಟು ಕಡಿಮೆಯಾಗುತ್ತದೆ. ಆದರೆ ಈ ಹಂತದಲ್ಲಿ ಸೋಂಕಿತರು ತಮ್ಮ ಮೊಬೈನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡು ಮುಂದು ಆರೋಗ್ಯ ಸ್ಥಿತಿ ಗಂಭೀರವಾದ ಸಂದರ್ಭಗಳಲ್ಲಿ ಆಸ್ಪತ್ರೆಗಳಿಗೆ ಬರುತ್ತಾರೆ. ಆಗ ಗಂಭೀರ ಸಮಸ್ಯೆ ಎದುರಿಸುತ್ತಿರುವ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳುವುದು ಕಷ್ಟಸಾಧ್ಯವಾಗಬಹುದು ಎಂದು ಸಚಿವ ಆರ್ ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಮೊಬೈಲ್ ಸ್ವಿಚ್ ಆನ್ ಮಾಡಲು ಮನವಿ:
ಬೆಂಗಳೂರಿನಿಂದ ಕಾಣೆಯಾಗಿರುವ 3000ಕ್ಕೂ ಹೆಚ್ಚು ಮಂದಿ ಕೊರೊನಾವೈರಸ್ ಸೋಂಕಿತರು ಸದ್ಯ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ನಿಮ್ಮ ಆರೋಗ್ಯ ಸ್ಥಿತಿ ಹದಗೆಡುವುದಕ್ಕೂ ಮೊದಲು ಎಚ್ಚೆತ್ತುಕೊಳ್ಳಿರಿ. ನಿಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ, ಸರ್ಕಾರದಿಂದ ನೀಡುವ ಔಷಧಿಗಳನ್ನು ಪಡೆದುಕೊಳ್ಳಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.
Recommended Video