ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಪರಿಚಯಿಸಿದ ಉಪೇಂದ್ರ
ಬೆಂಗಳೂರು, ಮಾರ್ಚ್ 30: ಬಹಳ ಭಿನ್ನವಾಗಿ ಚುನಾವಣೆ ಎದುರಿಸಲು ಸಜ್ಜಾಗಿ ಬಂದಿರುವ ಉಪೇಂದ್ರ ಅವರು ತಮ್ಮ ಉತ್ತಮ ಪ್ರಜಾಕೀಯ ಪಕ್ಷದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರಿಚಯ ಮಾಡಿಸಿದರು.
ಮೊದಲ ಹಂತದ ಚುನಾವಣೆಗೆ ಸ್ಪರ್ಧಿಸುತ್ತಿರುವ 14 ಅಭ್ಯರ್ಥಿಗಳನ್ನು ಇಂದು ಉಪೇಂದ್ರ ಅವರು ಮಾಧ್ಯಮಗಳಿಗೆ ಪರಿಚಯ ಮಾಡಿಸಿದರು.
ಸಿನಿ ಶೈಲಿಯಲ್ಲಿಯೇ ಹಿನ್ನೆಲೆಯಲ್ಲಿ ಹಾಡೊಂದು ಬರುತ್ತಿದ್ದಾಗ ಅಭ್ಯರ್ಥಿಗಳು ತಾವು ಪ್ರತಿನಿಧಿಸಿಸುತ್ತಿರುವ ಕ್ಷೇತ್ರ ಹಾಗೂ ತಮ್ಮ ಹೆಸರು ಬರೆದಿರುವ ಬೋರ್ಡ್ ಅನ್ನು ಹಿಡಿದು ವೇದಿಕೆಯ ಮಧ್ಯಕ್ಕೆ ಬಂದು ಪರಿಚಯ ಮಾಡಿಕೊಂಡರು. ಪ್ರತಿಯೊಬ್ಬ ಅಭ್ಯರ್ಥಿಯು ಬಂದಾಗಲೂ ಆ ಕ್ಷೇತ್ರದ ಕುರಿತು ಹಾಡು ಹಿನ್ನೆಲೆಯಲ್ಲಿ ಬರುವಂತೆ ವ್ಯವಸ್ಥೆ ಮಾಡಲಾಗಿತ್ತು.
ನಮ್ಮ ಪಕ್ಷ ಅಥವಾ ಅಭ್ಯರ್ಥಿ ಅಧಿಕಾರಕ್ಕಾಗಿ ಯಾವ ಪಕ್ಷದ ಜೊತೆಯೂ ಕೈಚಾಚುವುದಿಲ್ಲ, ನಮ್ಮ ಪಕ್ಷವಾಗಲಿ, ಅಭ್ಯರ್ಥಿಯಾಗಲಿ ಯಾರಿಗೂ ಹಣ ನೀಡುವುದಿಲ್ಲ, ಕ್ಷೇತ್ರಕ್ಕೆ ತಾವು ಮಾಡುವ ಸೇವೆಯನ್ನು ಮಾತ್ರವೇ ಇರಿಸಿಕೊಂಡು ಮತ ಕೇಳುತ್ತೇವೆ ಎಂದು ಉಪೇಂದ್ರ ಈ ಸಮಯದಲ್ಲಿ ಹೇಳಿದರು.
ನಮ್ಮ ಪಕ್ಷದ ನೀತಿ-ನಿಯಮಗಳಿಗೆ ಬದ್ಧರಾಗಿ ಹಾಗೂ ಅವರು ಜನರ ಪರವಾಗಿ ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ತಿಳಿದು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಎಂದು ತಿಳಿಸಿದರು. ಹಣ ಬಲ, ಜಾತಿಬಲ ಯಾವುದೂ ಇಲ್ಲದೆ ಸಮಾಜಕ್ಕಾಗಿ ದುಡಿಯುವವರೇ ಬೇಕು ಎಂದು ಅವರು ಹೇಳಿದರು.
ಹಾಸನ ಹೆಚ್.ಎಂ ಚಂದ್ರೇಗೌಡ, ಉಡುಪಿ-ಚಿಕ್ಕಮಗಳೂರು ಸುರೇಶ್ ಕುಂದರ್, ಚಿತ್ರದುರ್ಗ ದೇವೇಂದ್ರಪ್ಪ , ತುಮಕೂರು ಛಾಯಾ ರಾಜಾಶಂಕರ್, ಮಂಡ್ಯ ಸಿ.ಪಿ.ಗೌಡ, ದಕ್ಷಿಣ ಕನ್ನಡ ವಿಜಯ ಶ್ರೀನಿವಾಸ್, ಮೈಸೂರು ವಿ.ಆಶಾರಾಣಿ ಸೇರಿದಂತೆ 14 ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ಪಕ್ಷದ ಚಿಹ್ನೆ ಆಟೋರಿಕ್ಷಾ. ಇದನ್ನು ಬೆಂಬಲಿಸುವಂತೆ ಮನವಿ ಮಾಡಿದರು.