ಬೇಸಿಗೆ ಮಳೆ, ಸದ್ಯಕ್ಕೆ ತಂಪಾಯ್ತು ಇಳೆ, ಮುಂದೆ ಬರೀ ಗೋಳೆ!
ಬೆಂಗಳೂರು, ಮಾರ್ಚ್, 15: ಬಿಸಿಲಿನ ಝಳಕ್ಕೆ ಬಸವಳಿದ ಬೆಂಗಳೂರು ತಂಪಾಗಿದೆ. ಸೋಮವಾರ ಸಣ್ಣಗೆ ಕಾಣಿಸಿಕೊಂಡು ಮರೆಯಾಗಿದ್ದ ವರುಣ ಮಂಗಳವಾರ ಆರ್ಭಟಿಸಿದ್ದಾನೆ.
ಮಂಗಳವಾರ ಬೆಳಗ್ಗೆಯಿಂದಲೇ ನಗರದಾದ್ಯಂತ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಕೆಲವೆಡೆ ಧಾರಾಕಾರ ಮಳೆ ಸುರಿದಿದೆ. ಜೆಪಿ ನಗರ, ರಾಮಮಮೂರ್ತಿ ನಗರ, ಬಾಣಸವಾಡಿ, ವೈಟ್ ಫೀಲ್ಡ್ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಬಸವನಗುಡಿ, ಜಯನಗರ, ಕೆಆರ್ ಮಾರುಕಟ್ಟೆ ಮತ್ತು ಮೆಜೆಸ್ಟಿಕ್ ವ್ಯಾಪ್ತಿಯಲ್ಲಿ ತುಂತುರು ಮಳೆ ಸುರಿದಿದೆ. [ಕೆಆರ್ಎಸ್ ಡ್ಯಾಂ ಖಾಲಿ, ಬೆಂಗಳೂರು ಬೇಸಿಗೆ ಬಲು ಭೀಕರ!]
ದಿಢೀರ್ ಮಳೆಗೆ ತತ್ತರಿಸಿದ ಜನರು ಅಂಗಡಿ ಮುಂಗಟ್ಟುಗಳ ಆಶ್ರಯ ಪಡೆದುಕೊಂಡರು. ಕೆಲವಡೆ ರಸ್ತೆ ತುಂಬೆಲ್ಲಾ ನೀರು ಹರಿದಿದ್ದು ಸಂಚಾರಕ್ಕೆ ವ್ಯತ್ಯಯವಾಗಿತ್ತು. ನಗರದಲ್ಲಿ ಕಳೆದ ಕೆಲ ದಿನಗಳಿಂದ ಬಿಸಿಲು ತನ್ನ ಆರ್ಭಟ ಮೆರೆಯುತ್ತಿತ್ತು. ಮಂಗಳವಾರ ಬಿದ್ದ ಮಳೆಗೆ ಇಳೆ ಕೊಂಚ ತಂಪಾಗಿದೆ.
ರಸ್ತೆಗೆ ನುಗ್ಗಿದ ನೀರು
ವೈಟ್ ಫೀಲ್ಡ್ ಭಾಗದಲ್ಲಿ ಮಳೆ ಆರ್ಭಟಿಸಿದೆ. ಧಾರಾಕಾರ ಮಳೆ ಪರಿಣಾಮ ಫೋರಂ ಮಾಲ್ ಬಳಿ ನೀರು ನುಗ್ಗಿ ಸಂಚಾರ ಅಸ್ತವ್ಯಸ್ಥವಾಗಿತ್ತು.
ಕುಡಿವ ನೀರಿಗೆ ಹಾಹಾಕಾರ
ಈ ಬಗೆಯ ಅಕಾಲಿಕ ಮಳೆ ಅಂತರ್ಜಲ ಮತ್ತು ಜಲಮೂಲಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು ಮುಂದೆ ಮಹಾನಗರ ಕುಡಿವ ನೀರಿಗೆ ಹಾಹಾಕಾರ ಮಾಡಿದರೂ ಆಶ್ಚರ್ಯವಿಲ್ಲ.
ಹವಾಮಾನ ಇಲಾಖೆ ಮುನ್ಸೂಚನೆ
ನಗರದಲ್ಲಿಗರಿಷ್ಠ ಉಷ್ಣಾಂಶ 35.4 ಡಿಗ್ರಿ ಸೆಲ್ಸಿಯಸ್ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 36.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಮುಂದಿನ 48 ಗಂಟೆಗಳಲ್ಲಿ ಮತ್ತೆ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜೆಪಿ ನಗರ
ಬೆಂಗಳೂರಿನ ಜೆಪಿ ನಗರದಲ್ಲೂ ಧಾರಾಕಾರ ಮಳೆ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಸುರಿಯಿತು.
ಮುರಿದು ಬಿದ್ದ ಮರ
ವೈಟ್ ಫೀಲ್ಡ್ ವ್ಯಾಪ್ತಿಯಲ್ಲಿ ಮಳೆ ಆರ್ಭಟ ಜೋರಾಗಿತ್ತು. ಬಿಎಂಟಿಸಿ ಬಸ್ ಮೇಲೆ ಮುರಿದು ಬಿದ್ದ ಮರ.
ಮಳೆ ಹೊಸದಲ್ಲ
ಸಾಮಾನ್ಯವಾಗಿ ಮಾರ್ಚ್ ಅಂತ್ಯದ ವೇಳೆ ಸುರಿಯುತ್ತಿದ್ದ ಮಳೆ ಈ ಬಾರಿ ಮಾರ್ಚ್ ಮಧ್ಯ ಭಾಗದಲ್ಲೇ ಸುರಿದಿದೆ.