ಜಾಗತಿಕ ರಕ್ಷಣಾ ವಲಯ ಆಗಲು ಭಾರತ ಸಮರ್ಥವಾಗಿದೆ: ಕೋವಿಂದ್
ಬೆಂಗಳೂರು,ಫೆಬ್ರವರಿ 05: ಕೊರೊನಾ ಸೋಂಕಿನ ನಡುವೆಯೂ ಯಲಹಂಕದ ವಾಯುನೆಲೆಯಲ್ಲಿ ಫೆಬ್ರವರಿ 3ರಿಂದ ಆರಂಭಗೊಂಡಿದ್ದ ಏರೋ ಇಂಡಿಯಾ 2021ಕ್ಕೆ ಇಂದು ತೆರೆ ಬಿದ್ದಿದೆ.
Recommended Video
ಇಡೀ ವಿಶ್ವಕ್ಕೆ ರಕ್ಷಣಾ ಉತ್ಪನ್ನಗಳನ್ನು ಉತ್ಪಾದಿಸುವ ಕೇಂದ್ರವಾಗಬಲ್ಲ ಭಾರತದ ಸಾಮರ್ಥ್ಯದ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.
ಭಾರತ ಕೇವಲ ಮಾರುಕಟ್ಟೆಯಾಗಿರಲಿಲ್ಲ ಆದರೆ ಇಡೀ ಜಗತ್ತಿಗೆ ಅಪಾರ ಅವಕಾಶಗಳ ನೆಲೆಯಾಗಿದೆ. ದೇಶ ಜಾಗತಿಕ ಉತ್ಪಾದನಾ ಕೇಂದ್ರವಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಮೂರು ದಿನಗಳ ವೈಮಾನಿಕ ಪ್ರದರ್ಶನ ಮತ್ತಷ್ಟು ನೆರವಾಗಲಿದೆ ಎಂದರು.
ಸ್ಟಾರ್ಟ್ಅಪ್ಗಳಿಂದ ದೇಶದಲ್ಲಿ 4.71 ಲಕ್ಷ ಉದ್ಯೋಗ ಸೃಷ್ಟಿ:ರಾಜನಾಥ್ ಸಿಂಗ್
ಮಾನವೀಯ ನೆರವು ಮತ್ತು ವಿಪತ್ತು ಪರಿಹಾರದಲ್ಲಿ ಯೋಜನೆ ಮತ್ತು ಸಮನ್ವಯಕ್ಕಾಗಿ ನಮ್ಮ ಪರಿಣತಿ ಮತ್ತು ಸಂಪನ್ಮೂಲಗಳನ್ನು ಎಲ್ಲಾ ಹಿಂದೂ ಮಹಾಸಾಗರ ವಲಯದ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲು ಭಾರತ ಸದಾ ಸಿದ್ಧವಾಗಿದೆ ಎಂದು ರಾಷ್ಟ್ರಪತಿ ಹೇಳಿದರು.
ಕೋವಿಡ್ -19 ಸಾಂಕ್ರಾಮಿಕದ ತರುವಾಯ, ಸಾಗರ್ -1 ಕಾರ್ಯಾಚರಣೆಯಡಿ ನಾವು ನಮ್ಮ ನೆರೆಯವರನ್ನು ತಲುಪಿ, ಅವರಿಗೆ ಔಷಧ, ತಪಾಸಣೆ ಕಿಟ್, ವೆಂಟಿಲೇಟರ್, ಮಾಸ್ಕ್, ಕೈಗವಸು, ಇತರ ವೈದ್ಯಕೀಯ ಪೂರೈಕೆ ಮತ್ತು ವೈದ್ಯಕೀಯ ತಂಡದ ನೆರವು ಒದಗಿಸಿದ್ದೇವೆ ಎಂದರು.
ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇಡೀ ಮಾನವ ಕುಲಕ್ಕೆ ನೆರವಾಗಲು, ಲಸಿಕೆ ಉತ್ಪಾದನೆ ಮತ್ತು ವಿತರಣಾ ಸಾಮರ್ಥ್ಯವನ್ನು ಬಳಸುವ ಭಾರತದ ಬದ್ಧತೆಗೆ ಅನುಗುಣವಾಗಿ, ನಮ್ಮ ಸ್ನೇಹಪರ ವಿದೇಶಿ ರಾಷ್ಟ್ರಗಳಿಗೆ ಅನುದಾನದ ಸಹಾಯದಡಿಯಲ್ಲಿ ಸರಬರಾಜು ಈಗಾಗಲೇ ಪ್ರಾರಂಭವಾಗಿದೆ ಎಂದು ಅವರು ತಿಳಿಸಿದರು
ಮೂರು ದಿನಗಳ ಏರೋ ಇಂಡಿಯಾ
ಮೂರು ದಿನಗಳ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಪ್ರದರ್ಶನಗಳು, ಸೆಮಿನರ್ ಗಳಲ್ಲಿ ಪಾಲ್ಗೊಂಡವರು ಸೇರಿದಂತೆ ಭೌತಿಕವಾಗಿ 16 ಸಾವಿರ ಹಾಗೂ ವರ್ಚುಯಲ್ ನಲ್ಲಿ ಸುಮಾರು 4.5 ಲಕ್ಷ ಜನರು ಪ್ರದರ್ಶನವನ್ನು ವೀಕ್ಷಿಸಿದ್ದಾರೆ. 30 ವಿದೇಶಿ ಕಂಪನಿಗಳು ಸೇರಿದಂತೆ ಒಟ್ಟಾರೇ 500 ಕಂಪನಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. 201 ಪರಸ್ಪರ ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ರಕ್ಷಣಾ ಉತ್ಪನ್ನಗಳ ರಫ್ತು
2024ರೊಳಗೆ ವೈಮಾನಿಕ ಮತ್ತು ರಕ್ಷಣಾ ಉತ್ಪನ್ನಗಳ ರಫ್ತುನಿಂದ 35 ಸಾವಿರ ಕೋಟಿ ಮತ್ತು 1.75 ಲಕ್ಷ ಕೋಟಿ ವಹಿವಾಟು ಗುರಿ ಸಾಧನೆಗೆ ಏರೋ ಇಂಡಿಯಾ ನೆರವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
1966ರಿಂದಲೂ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಾ ಬಂದಿದ್ದರೂ, ಯಾವ ರಾಷ್ಟ್ರಪತಿಯೂ ಭೌತಿಕವಾಗಿ ಪಾಲ್ಗೊಂಡಿರಲಿಲ್ಲ. ಆದರೆ, ಈ ಬಾರಿ ರಾಮನಾಥ್ ಕೋವಿಂದ್ ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಅಭೂತಪೂರ್ವ ಮೆಚ್ಚುಗೆ ವ್ಯಕ್ತಪಡಿಸಿದರು.
ಏರೋ ಇಂಡಿಯಾ ಉತ್ಸಾಹಕ್ಕೆ ಧಕ್ಕೆಯಾಗಿಲ್ಲ
ಕೊರೊನಾ ಸಾಂಕ್ರಾಮಿಕದ ಸವಾಲುಗಳ ಹೊರತಾಗಿಯೂ , ಏರೋ ಇಂಡಿಯಾ 2021 ಉತ್ಸಾಹಕ್ಕೆ ಧಕ್ಕೆಯಾಗದಂತೆ ಮತ್ತು ಎಲ್ಲಾ ಪ್ರೋಟೋಕಾಲ್ಗಳನ್ನು ಅನುಸರಿಸುವ ಮೂಲಕ ಅಭೂತಪೂರ್ವ ಯಶಸ್ಸು ಸಾಧಿಸಲಾಗಿದೆ. ಇದು ವಿಚಾರ ವಿನಿಮಯ ಮತ್ತು ಸಹಭಾಗಿತ್ವ ರೂಪಿಸಲು ಸೂಕ್ತ ಸ್ಥಳವಾಗಿದೆ ಎಂದು ರಾಷ್ಟ್ರಪತಿ ಅಭಿಪ್ರಾಯಪಟ್ಟರು.
ಕೈಗಾರಿಕಾ ಪರವಾನಗಿ ಕುರಿತು ಮಾತು
ಉತ್ಪಾದಕರು ಭಾರತದಲ್ಲಿ ಘಟಕ ಸ್ಥಾಪಿಸಲು ಸುಗಮ ವಾಣಿಜ್ಯವನ್ನು ಉತ್ತೇಜಿಸಲು ಸರ್ಕಾರ ಗಮನ ಹರಿಸಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ರಕ್ಷಣಾ ವಲಯ ಸಹ ಸ್ಥಿರವಾದ ಉದಾರೀಕರಣಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಕೈಗಾರಿಕಾ ಪರವಾನಗಿ ಅವಶ್ಯಕತೆಗಳನ್ನು ಹಲವಾರು ವಸ್ತುಗಳಿಗೆ ತೆಗೆದುಹಾಕಲಾಗಿದೆ. ಕೈಗಾರಿಕಾ ಪರವಾನಗಿ ಮತ್ತು ರಫ್ತು ದೃಢೀಕರಣಗಳ ಪ್ರಕ್ರಿಯೆಗಳನ್ನು ಸರಳೀಕರಿಸಲಾಗಿದೆ ಮತ್ತು ಆನ್ ಲೈನ್ ಮಾಡಲಾಗಿದೆ. ರಕ್ಷಣಾ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗುವಂತೆ ಮತ್ತು ಎಂ.ಎಸ್.ಎಂ.ಇ.ಗಳಿಗೆ ಪ್ರಚೋದನೆ ನೀಡಲು ಉತ್ತರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಎರಡು ರಕ್ಷಣಾ ಕಾರಿಡಾರ್ ಗಳನ್ನು ಸ್ಥಾಪಿಸಲಾಗಿದೆ. ರಕ್ಷಣಾ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬನೆಯ ಹಾದಿಗೆ ಕೊಂಡೊಯ್ಯುವ ಈ ಎಲ್ಲಾ ಪ್ರಯತ್ನಗಳು ದೇಶದಲ್ಲಿ ಉದ್ಯೋಗ ಸೃಷ್ಟಿಯ ದೊಡ್ಡ ಸಾಮರ್ಥ್ಯವನ್ನು ತೆರೆಯುವ ನಿರೀಕ್ಷೆಯಿದೆ ಎಂದು ತಿಳಿಸಿದರು.