ಲಾಕ್ ಡೌನ್; ಹೋಟೆಲ್ ಉದ್ಯಮದ ಸಂಕಷ್ಟ ತೆರೆದಿಟ್ಟ ಸತೀಶ್ ಶೆಟ್ಟಿ
ಬೆಂಗಳೂರು, ಜೂನ್ 08 : "ಇಂದಿನಿಂದ ಹೋಟೆಲ್ನಲ್ಲಿಯೇ ಉಪಹಾರ ಸೇವಿಸುತ್ತಿದ್ದಾರೆ. ನಾಲ್ಕು ದಿನದ ಹಿಂದೆ ಬಾಗಿಲು ತೆರೆದು ಪಾರ್ಸೆಲ್ ಕೊಡಲು ಆರಂಭಿಸಿದೆ. ಶೇ 70ರಷ್ಟು ಜನರು ಕಡಿಮೆಯಾಗಿದ್ದಾರೆ" ಇದು ಬೆಂಗಳೂರಿನ ದರ್ಶಿನಿಯೊಂದರ ಮಾಲೀಕ ಸತೀಶ್ ಶೆಟ್ಟಿ ಅವರ ಮಾತು.
Recommended Video
ಮಾರ್ಚ್ 22ರಂದು ಪ್ರಧಾನಿ ನರೇಂದ್ರ ಮೋದಿ 'ಜನತಾ ಕರ್ಫ್ಯೂ'ಗೆ ಕರೆ ನೀಡಿದ ದಿನ ಹನುಮಂತನಗರದಲ್ಲಿರುವ ಹೋಟೆಲ್ಗೆ ಬೀಗ ಹಾಕಿದ್ದರು ಕುಂದಾಪುರ ಮೂಲದ ಸತೀಶ್ ಶೆಟ್ಟಿ. ಬಳಿಕ ಲಾಕ್ ಡೌನ್ ಘೋಷಣೆ ಆಯಿತು. ಬಾಗಿಲು ತೆರೆಯಲು ಸಾಧ್ಯವಾಗಲೇ ಇಲ್ಲ.
ಹೋಟೆಲ್, ರೆಸ್ಟೋರೆಂಟ್ ತೆರೆಯಲು ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ
ಜೂನ್ 4ರ ಗುರುವಾರ ಬಾಗಿಲು ತೆರೆದಿದ್ದಾರೆ. ನಾಲ್ಕು ದಿನ ಪಾರ್ಸೆಲ್ ಮಾತ್ರ ಕೊಡುತ್ತಿದ್ದ ಅವರು ಸೋಮವಾರದಿಂದ ಹೋಟೆಲ್ನಲ್ಲಿಯೇ ತಿನ್ನಲು ಅವಕಾಶ ಕೊಟ್ಟಿದ್ದಾರೆ. "ಬೆಳಗ್ಗೆ 8.30ರ ವೇಳೆಗೆ ಇಲ್ಲಿ ನಿಲ್ಲಲೂ ಜಾಗ ಸಿಗುತ್ತಿರಲಿಲ್ಲ. ಈಗ ನೋಡಿ ಸರ್ ನಾಲ್ಕು ಜನ ಇದ್ದಾರೆ. 10 ಜನ ಪಾರ್ಸೆಲ್ ತೆಗೆದುಕೊಂಡು ಹೋದರು". ಎಂದು ಸತೀಶ್ ಶೆಟ್ಟಿ ದರ್ಶನಿಯ ಪರಿಸ್ಥಿತಿ ವಿವರಿಸಿದರು.
ಮೈಸೂರಿನ ಪ್ರತಿಷ್ಠಿತ ಸದರನ್ ಸ್ಟಾರ್ ಹೋಟೆಲ್ ಬಂದ್
"ಲಾಕ್ ಡೌನ್ನಿಂದಾಗಿ ಶೇ 70ರಷ್ಟು ವಹಿವಾಟು ಕಡಿಮೆಯಾಗಿದೆ. ಜನ ಬರುತ್ತಾರೆ ಎಂದು ನಂಬಿ ತಿಂಡಿಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಊರಿಗೆ ಹೋದ ಕೆಲಸಗಾರರು ವಾಪಸ್ ಆಗಿಲ್ಲ, ಬರುತ್ತಾರೆ ಎಂಬ ನಿರೀಕ್ಷೆಯೂ ಇಲ್ಲ. ಹಿಂದಿನಿಂದ ನಡೆಸಿಕೊಂಡು ಬಂದ ಉದ್ಯಮ ನಿಲ್ಲಿಸಲು ಆಗುತ್ತಿಲ್ಲ" ಎಂದು ನಿಟ್ಟುಸಿರು ಬಿಟ್ಟರು ಸತೀಶ್ ಶೆಟ್ಟಿ.
ಕ್ವಾರಂಟೈನ್; ಹೋಟೆಲ್ ದರ ಪಟ್ಟಿ ಬಿಡುಗಡೆ ಮಾಡಿದ ಬಿಬಿಎಂಪಿ
ಬೆಳಗಿನ ಕಾಫಿಗೆ ಮುಗಿ ಬೀಳುವವರಿಲ್ಲ
"ಕೊರೊನಾ ಬರುವುದಕ್ಕೂ ಮುಂಚೆ ಏಳು ಗಂಟೆಯಿಂದಲೇ ಜನರು ಕಾಫಿಗೆ ಮುಗಿ ಬೀಳುತ್ತಿದ್ದರು. ವಾಕಿಂಗ್ ಮುಗಿಸಿ ಇಲ್ಲಿಗೆ ಬಂದು ಸ್ನೇಹಿತರ ಜೊತೆ ಮಾತನಾಡುತ್ತಾ ಕಾಫಿ ಕುಡಿಯುತ್ತಿದ್ದರು, ಕೆಲವರು ಇಡ್ಲಿ ತಿನ್ನುತ್ತಿದ್ದರು. ಆದರೆ, ಈಗ ವಾಕಿಂಗ್ ಮುಗಿಸಿ ಮನೆಗೆ ಹೋಗುತ್ತಿದ್ದಾರೆ. ಗಾಜಿನ ಲೋಟದಲ್ಲಿ ಕಾಫಿ ಕೊಡುತ್ತಿಲ್ಲ, ಕಾಗದದ ಲೋಟದಲ್ಲಿ ಕುಡಿಯಲು ಎಲ್ಲರೂ ಇಚ್ಛೆ ಪಡಲ್ಲ. ಕಾಫಿಗಾಗಿ ಹುಡುಕಿಕೊಂಡು ಬರುತ್ತಿಲ್ಲ" ಎಂದು ಸತೀಶ್ ಶೆಟ್ಟಿ ಮುಂಜಾನೆಯ ಕಥೆ ಬಿಚ್ಚಿಟ್ಟರು.
ಆದಾಯ ಇಲ್ಲದಿದ್ದರೂ ಬಾಡಿಗೆ ಕಟ್ಟಿದ್ದೇವೆ
"ಮಾರ್ಚ್ 22ರಿಂದ ಇಲ್ಲಿಯ ತನಕ ಹೋಟೆಲ್ ಬಾಗಿಲು ತೆರೆಯದಿದ್ದರೂ ಬಾಡಿಗೆ ಕಟ್ಟಿದ್ದೇವೆ. ಸಂಗ್ರಹಿಸಿಟ್ಟಿದ್ದ ದಿನಸಿ ಹಾಳಾಗಿ ಹೋಗಿದೆ. ಈಗ ಹೊಸದಾಗಿ ಬಂಡವಾಳ ಹಾಕಿ ಉದ್ಯಮ ಆರಂಭಿಸಿದ್ದೇವೆ. ಆದರೆ. ಕಾರ್ಮಿಕರ ಕೊರತೆ ಕಾಡುತ್ತಿದೆ. ಲಾಕ್ ಡೌನ್ ಸಮಯದಲ್ಲಿ ಊರಿಗೆ ಹೋದವರು ವಾಪಸ್ ಬಂದಿಲ್ಲ. ಬರುತ್ತಾರೆ ಎಂಬ ನಂಬಿಕೆಯೂ ಉಳಿದಿಲ್ಲ. ಈಗ ಕಾರ್ಮಿಕರು ಸಿಗುತ್ತಿಲ್ಲ" ಎಂದು ಸತೀಶ್ ಶೆಟ್ಟಿ ಹೇಳಿದರು.
ಜನರು ಬರುತ್ತಲೇ ಇಲ್ಲ
"ಲಾಕ್ ಡೌನ್ನಿಂದಾಗಿ ಹೋಟೆಲ್ ಉದ್ಯಮಕ್ಕೆ ಬಹಳ ಹೊಡೆತ ಬಿದ್ದಿದೆ. ಅದರಲ್ಲಿಯೂ ಚಿಕ್ಕ ದರ್ಶನಿಗಳು ಅಂದಿನ ವಹಿವಾಟನ್ನು ನಂಬಿಕೊಂಡಿದ್ದು. ಆದರೆ, ಈಗ ಬಾಗಿಲು ಮುಚ್ಚುವ ಅನಿವಾರ್ಯತೆ ಎದುರಾಗಿದೆ. ರಸ್ತೆಯಲ್ಲಿ ಜನರು ಓಡಾಡುತ್ತಿದ್ದಾರೆ. ಆದರೆ, ಹೋಟೆಲ್ಗಳಿಗೆ ಬಂದು ಕಾಫಿ ಕುಡಿದು, ಉಪಹಾರ ಸೇವಿಸಲು ಹೆದರುತ್ತಿದ್ದಾರೆ. ಉದ್ಯಮ ಸಹಜ ಸ್ಥಿತಿಗೆ ಮರಳಲು ಸುಮಾರು 6 ತಿಂಗಳು ಬೇಕಾಗಬಹುದು. ಅಲ್ಲಿಯ ತನಕ ನಾವೇ ಬಂಡವಾಳ ಹಾಕಿ ಉದ್ಯಮ ನಡೆಸಬೇಕು" ಎಂದು ಸತೀಶ್ ಶೆಟ್ಟಿ ಚಿಕ್ಕಪುಟ್ಟ ಹೋಟೆಲ್ ವ್ಯಥೆ ತೆರೆದಿಟ್ಟರು.
ಅನ್ನ, ಸಾಂಬಾರ್ ಮಾತ್ರ
"ಒಂದು ಕಡೆ ಕಾರ್ಮಿಕರ ಕೊರತೆ, ಮತ್ತೊಂದು ಕಡೆ ಜನರ ಕೊರತೆ. ಆದ್ದರಿಂದ, ಮೆನುವಿನಲ್ಲಿಯೂ ಬದಲಾವಣೆ ಮಾಡುತ್ತಿದ್ದೇವೆ. ಮಧ್ಯಾಹ್ನದ ಊಟಕ್ಕೆ ಚಪಾತಿ, ಪರೋಟ ಮಾಡುವುದಿಲ್ಲ. ಅನ್ನ, ಸಾಂಬಾರ್, ಬಜ್ಜಿ, ಹಪ್ಪಳ ಇಷ್ಟು ಮಾತ್ರ. ಪರಿಸ್ಥಿತಿಗೆ ತಕ್ಕಂತೆ ನಾವು ಬದಲಾಗಬೇಕು, ಖರ್ಚು ಕಡಿಮೆ ಮಾಡಬೇಕು" ಎಂದು ಸತೀಶ್ ಶೆಟ್ಟಿ ಹೇಳಿದರು.