ರಾಜೀವ್ ಚಂದ್ರಶೇಖರ್ ಕಚೇರಿ ಉದ್ಯೋಗಿಗೆ ಪ್ರಾಣ ಬೆದರಿಕೆ
ಬೆಂಗಳೂರು, ಫೆಬ್ರವರಿ 06 : "ನೀನು ರಾಜೀವ್ ಚಂದ್ರಶೇಖರ್ ಅವರ ಕಚೇರಿಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದೀಯಲ್ವಾ? ಜಾಸ್ತಿ ಸ್ಮಾರ್ಟ್ ಆಗಿ ವರ್ತಿಸಬೇಡ, ತಣ್ಣಗಿರು. ನೀನು ವೈಟ್ ಫೀಲ್ಡ್ ನಲ್ಲಿ ಇರೋದಲ್ವಾ, ಅಲ್ಲಿ ಜಾಸ್ತಿ ಗಾಡಿಗಳು ಅಡ್ಡಾಡುತ್ತಿರುತ್ತವೆ. ಕೆಲಬಾರಿ ಮೈಮೈಲೂ ಬರಬಹುದು!"
ಇದು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸಂಸದ ರಾಜೀವ್ ಚಂದ್ರಶೇಖರ್ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರನ್ನು ಅಪರಿಚಿತ ವ್ಯಕ್ತಿಗಳಿಬ್ಬರು ಬೆದರಿಸಿರುವ ರೀತಿ. ಟ್ರಿನಿಟಿ ಮೆಟ್ರೋ ಸ್ಟೇಷನ್ ಬಳಿ ಭಾನುವಾರ, ಫೆಬ್ರವರಿ 4ರಂದು ಸಂಜೆ ಮನೆಗೆ ತೆರಳುವಾಗ ಅಪರಿಚಿತರು ಪ್ರಾಣ ಬೆದರಿಕೆ ಒಡ್ಡಿದ್ದಾರೆ.
ರಾಜೀವ್ ಚಂದ್ರಶೇಖರ್ ಬಾಯಿಗೆ ಬೀಗ ಜಡಿದ ರಮ್ಯಾ ಟ್ವೀಟ್
ಇದಕ್ಕೆ ಸಂಬಂಧಿಸಿದಂತೆ ಅಪರಿಚಿತರ ವಿರುದ್ಧ ಹಲಸೂರು ಪೊಲೀಸ್ ಸ್ಟೇಷನ್ ನಲ್ಲಿ ಮಂಗಳವಾರ, ಫೆಬ್ರವರಿ 6ರಂದು ದೂರು ದಾಖಲಾಗಿದೆ. ಈ ಎಲ್ಲ ಮಾತುಕತೆಗಳು ಕೆಲವೇ ಸೆಕೆಂಡುಗಳಲ್ಲಿ ಜರುಗಿದ್ದು, ತಮಗೆ ಪ್ರಾಣಬೆದರಿಕೆ ಇರುವುದಾಗಿ ಆ ಉದ್ಯೋಗಿ ಹೇಳಿದ್ದು, ರಕ್ಷಣೆ ನೀಡಬೇಕೆಂದು ಪೊಲೀಸರನ್ನು ಕೋರಿದ್ದಾರೆ.
ನಡೆದಿದ್ದಿಷ್ಟು : ಭಾನುವಾರ 7 ಗಂಟೆಯ ಸುಮಾರಿಗೆ ಟ್ರಿನಿಟಿ ಮೆಟ್ರೋ ಸ್ಟೇಷನ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಅಪರಿಚಿತರಿಬ್ಬರು ಉದ್ಯೋಗಿಯನ್ನು ಅಡ್ಡಹಾಕಿ, "ರಾಜೀವ್ ಕೇಲಿಯೆ ಕಾಮ್ ಕರ್ತಾ ಹೈಕ್ಯಾ? (ರಾಜೀವ್ ಅವರಿಗಾಗಿ ಕೆಲಸ ಮಾಡ್ತೀಯಲ್ಲ?)" ಎಂದು ಕೇಳಿದ್ದಾರೆ. ನನ್ನನ್ನು ಕೇಳುತ್ತಿಲ್ಲದಿರಬಹುದು ಎಂದು ಉದ್ಯೋಗಿ ಮುಂದೆ ಹೋದಾಗ ಮತ್ತೆ ಅಡ್ಡಹಾಕಿ, ಇನ್ನೂ ಗಟ್ಟಿ ಸ್ವರದಲ್ಲಿ ಅದೇ ಪ್ರಶ್ನೆ ಕೇಳಿದ್ದಾರೆ.
"ಹೌದು ಮಾಡುತ್ತಿದ್ದೇನೆ" ಎಂದು ಉತ್ತರಿಸಿದಾಗ, "ಡಿಜಿಟಲ್ ಮಾರ್ಕೆಟಿಂಗ್ ದೇಖತಾ ಹೈನಾ, ಜ್ಯಾದಾ ಉಡ್ ಮತ್, ಠಂಡ್ ರಖ್ (ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಕೆಲಸ ಮಾಡ್ತಿದ್ದೀಯಲ್ಲ, ಹೆಚ್ಚು ಹಾರಾಡಬೇಡ, ತಣ್ಣಗಿರು)" ಎಂದು ತಣ್ಣನೆ ಕ್ರೌರ್ಯದಲ್ಲಿಯೇ ಧಮ್ಕಿ ಹಾಕಿದ್ದಾರೆ. "ಸರಿ ಹಾಗೇ ಆಗಲಿ" ಎಂದು ಉತ್ತರಿಸಿ ಮುಂದಡಿಯಿಡುತ್ತಿದ್ದಾಗ, ಗಾಡಿ ಹರಿಸುವ ಬೆದರಿಕೆ ಒಡ್ಡಿ ಜಾಗ ಖಾಲಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಾಜೀವ್ ಚಂದ್ರಶೇಖರ್ ಆಕ್ರೋಶ : ಇದಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ನನ್ನ ಅನಿಸಿಕೆ ನಿಜವಾಗಿದೆ, ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ, ಹೊಲಸು ರಾಜಕೀಯ ಮಾಡುತ್ತಿರುವ ರಾಜಕೀಯ ಪಕ್ಷಗಳು ಸುಳ್ಳು ಹೇಳುವುದು, (ಮೋದಿಗೆ) ಅವಮಾನ ಮಾಡುವುದಲ್ಲದೆ, ಈಗ ಪ್ರಾಣ ಬೆದರಿಕೆ ಒಡ್ಡುವುದಕ್ಕೂ ಆರಂಭಿಸಿವೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮೇಲ್ ದಾಳಿ ಮಾಡಿದ್ದಾರೆ.
ಸ್ಟೀಲ್ ಫ್ಲೈಓವರ್ ಮಿನಿಸ್ಟರ್ ವೊಬ್ಬರು ಹಿಂದೆಯೇ ನನಗೆ ಪಾಠ ಕಲಿಸುವುದಾಗಿ ಹೇಳಿದ್ದರು. ಈಗ, ನನ್ನ ಕಚೇರಿಯ ಬಳಿಯೇ ನನ್ನ ಉದ್ಯೋಗಿಗಳಿಗೆ ಬೆದರಿಕೆ ಒಡ್ಡಲಾಗಿದೆ. ನನಗೂ ಹಿಂದೆ ಅನೇಕ ಬಾರಿ ಬೆದರಿಕೆ ಹಾಕಲಾಗಿತ್ತು. ನನ್ನ ಕಚೇರಿಯ ಉದ್ಯೋಗಿಗಳಿಗೆ ನಾನೇ ಭದ್ರತೆ ಒದಗಿಸಿದ್ದೇನೆ. ಆ ಅಪರಿಚಿತರನ್ನು ಸುಮ್ಮನೆ ಬಿಡುವುದಿಲ್ಲ. ಪೊಲೀಸರು ಕೂಡ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದು ರಾಜೀವ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.