ಬಿಬಿಎಂಪಿ ಚುನಾವಣೆ ತಡ ಮಾಡಿದ್ದಕ್ಕೆ ಒಬಿಸಿಗೆ ಅನ್ಯಾಯ: ರಾಮಲಿಂಗಾ ರೆಡ್ಡಿ
ಬೆಂಗಳೂರು, ಮೇ 10: ಬಿಜೆಪಿ ಸರ್ಕಾರವು ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ಗಳನ್ನು ಮರು ವಿಂಗಡಿಸದೆ, ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡುತ್ತೇವೆ ಎಂದು ಹೇಳಿಕೊಂಡು ಬಂದಿದ್ದ ಬಿಜೆಪಿ ಯಾವುದನ್ನೂ ಮಾಡದೇ ಬೆಂಗಳೂರು ಅಭಿವೃದ್ದಿಗೆ ಭಾರೀ ಹಿನ್ನಡೆ ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ, ಈ ಹಿಂದೆ ಬೆಂಗಳೂರು ಅಭಿವೃದ್ಧಿಗಾಗಿ ರಘು ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಮಿತಿಯ ವರದಿಯನ್ನು ತರಾತುರಿಯಲ್ಲಿ ಅಂಗೀಕಾರ ಮಾಡಿದರು ಹಾಗೂ ಕಾಂಗ್ರೆಸ್ ನಾಯಕರು ಕೊಟ್ಟ ಸಲಹೆ ಸೂಚನೆಗಳನ್ನು ಪರಿಗಣಿಸಲಿಲ್ಲ, ಈವರಿಗೂ ಬೃಹತ್ ಬೆಂಗಳೂರಿಗೆ ಏನು ಮಾಡಿಲ್ಲ ಯಾವುದೇ ನೂತನ ಪ್ರದೇಶಗಳನ್ನು ಬೆಂಗಳೂರಿಗೆ ಸೇರಿಸಲಿಲ್ಲ ಮತ್ತು ಈ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಸಮಯವನ್ನು ಹಾಳು ಮಾಡಿದ ಜಿಜೆಪಿಯು 1 ವರ್ಷ 8 ತಿಂಗಳು ಪಾಲಿಕೆ ಚುನಾವಣೆ ಮುಂದೂಡಿದರು ಎಂದರು.
ಬಿಬಿಎಂಪಿಗೆ ಚುನಾವಣೆ ನಡೆಸಿ, ಎರಡು ವಾರದಲ್ಲಿ ಅಧಿಸೂಚನೆ ಪ್ರಕಟಿಸಿ: ಸುಪ್ರೀಂ ಆದೇಶ
ಬಿಜೆಪಿಗೆ ಚುನಾವಣೆ ಮಾಡುವ ಮನಸ್ಸು ಇದ್ದಿದ್ದರೆ ಇದು ದೊಡ್ಡ ಕೆಲಸವಾಗಿರಲಿಲ್ಲ, ಆರೇ ತಿಂಗಳಲ್ಲಿ ಮಾಡಬಹುದಿತ್ತು ಬಿಬಿಎಂಪಿಯ ಚುನಾವಣೆ ಮಾಡದೆ ಚುನಾವಣೆ ಮುಂದೂಡುವುದು ಇವರ ಮೂಲ ಉದ್ದೇಶವಾಗಿತ್ತು.ಬೆಂಗಳೂರು ಆಯುಕ್ತರು ಮರು ವಿಂಗಡಣೆ ಮಾಡಬೇಕಿತ್ತು. ಆದರೆ ಅವರು ಈ ವಿಚಾರವಾಗಿ ಒಂದೇ ಒಂದು ಸಭೆ ನಡೆಸಲಿಲ್ಲ ಜನಪ್ರತಿನಿಧಿಗಳ, ಸಾರ್ವಜನಿಕರ ಅಭಿಪ್ರಾಯ ಪಡೆದುಕೊಳ್ಳಲಿಲ್ಲ ಎಂದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅವಧಿಯಲ್ಲಿ ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಆಯೋಗ ಮಾಡಿ ಒಬಿಸಿ ಕುರಿತ ಅಂಕಿ ಅಂಶ ಕೊಟ್ಟಿದ್ದರು. ಆದರೆ ಈ ಬಿಜೆಪಿ ಸರ್ಕಾರ ಅದನ್ನು ಒಪ್ಪಲಿಲ್ಲ. ಒಪ್ಪಿದ್ದರೆ ಯಾವಾಗಲೋ ಓಬಿಸಿಗೆ ಮೀಸಲಾತಿ ನೀಡಬಹುದಿತ್ತು. ಅಥವಾ ಬಿಬಿಎಂಪಿಯು ಕೂಡಲೇ ಚುನಾವಣೆ ಮಾಡಿದ್ದರೂ ಈ ವರ್ಗಕ್ಕೆ ಮೀಸಲಾತಿ ದೊರೆಯುತ್ತಿತ್ತು.ಇನ್ನು ಒಬಿಸಿ ಮೀಸಲಾತಿ ವಿಚಾರವನ್ನು ನೆಪ ಮಾಡಿಕೊಂಡು ಈ ಕಾರಣ ಅದನ್ನು ಮುಂದಿಟ್ಟುಕೊಂಡು ಸರ್ಕಾರ ಪಂಚಾಯತ್ ಹಾಗೂ ಪಾಲಿಕೆ ಚುನಾವಣೆ ಮುಂದೂಡಿತು ಎಂದು ತಿಳಿಸಿದರು.
ಸುಪ್ರೀಂಕೋರ್ಟ್ ನಾಲ್ಕು ದಿನಗಳ ಹಿಂದೆ ಮುಂಬೈ ಪಾಲಿಕೆ ಹಾಗೂ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಲು ಸೂಚಿಸಿದೆ, ನಾನು ಆನೇಕಲ್ನಲ್ಲಿ ಪಾಲಿಕೆ ಚುನಾವಣೆ ಮಾಡಲು ಆದೇಶ ಬರಲಿದೆ ಎಂದು ಹೇಳಿದ್ದೆ ಇಂದು ಅದೇರೀತಿ ಆದೇಶ ಬಂದಿದೆ. ಇಡೀ ದೇಶದ ಎಲ್ಲ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ. ಆದರೆ ನೆಪ ಮಾಡುತ್ತಿದ್ದು ಚುನಾವಣೆಯನ್ನು ತಡ ಮಾಡಿದ್ದಕ್ಕೆ ಒಬಿಸಿ ಸಮುದಾಯಕ್ಕೂ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಒಬಿಸಿ ಸಮುದಾಯವು ಈಗ ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸಬೇಕಾಗಿದೆ. ಸರ್ಕಾರ 20 ತಿಂಗಳು ತಡ ಮಾಡಿದ ಪರಿಣಾಮ ನಗರದ ಅಭಿವೃದ್ಧಿ ಕುಂಠಿತ ಆಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಆಗಿದ್ದ ಕಾರ್ಯಗಳು ಹಿನ್ನಡೆಯಾಗಿವೆ. ನಗರದ ರಸ್ತೆಗಳಲ್ಲಿ ಲಕ್ಷಾಂತರ ಗುಂಡಿಗಳು ಬಿದ್ದವು. ಗುತ್ತಿಗೆದಾರರ ಬಿಲ್ ಪಾವತಿ ಆಗುತ್ತಿಲ್ಲ, ಟೆಂಡರ್ ಗಳಲ್ಲಿ ಅಕ್ರಮ ಆಗುತ್ತಿದೆ. ಸುಪ್ರೀಂಕೋರ್ಟ್ ಆದೇಶದಂತೆ ಚುನಾವಣೆ ನಡೆಯಬೇಕಾಗಿದೆ ಎಂದ ರಾಮಲಿಂಗ ರೆಡ್ಡಿ, ನ್ಯಾಯಾಲಯ ತನ್ನ ತೀರ್ಪಿನಲ್ಲಿ, ರಾಜ್ಯ ಸರ್ಕಾರ ವಾರ್ಡ ಮರು ವಿಂಗಡಣೆ ಮಾಡದಿದ್ದರೆ, ಕಳೆದ ಚುನಾವಣೆಯಲ್ಲಿದ್ದ ವಾರ್ಡ್ಗಳಿಗೆ ಚುನಾವಣೆ ನಡೆಸಬೇಕು ಹಾಗೂ ಒಬಿಸಿ ವರ್ಗಕ್ಕೆ ಸಾಮಾನ್ಯ ವರ್ಗದಲ್ಲಿ ಅವಕಾಶ ನೀಡಬೇಕು. ದೇಶದ ಎಲ್ಲ ರಾಜ್ಯಗಳಲ್ಲೂ ಈ ಚುನಾವಣೆ ಮಾಡಬೇಕು ಎಂದು ಸ್ಪಷ್ಟವಾಗಿ ಆದೇಶ ನೀಡಿದೆ ಎಂದು ತಿಳಿಸಿದರು.