ಐಐಟಿ ಮಾದರಿಯಲ್ಲಿ ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜ್ ಅಭಿವೃದ್ಧಿ!
ಬೆಂಗಳೂರು, ಡಿ. 15: ಬೆಂಗಳೂರಿನ ಯೂನಿವರ್ಸಿಟಿ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜ್ನ್ನು (ಯುವಿಟಿಸಿ) ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪ್ರತ್ಯೇಕ ಕಾಯ್ದೆಯ ಅಗತ್ಯವಿದ್ದು, ಅದಕ್ಕೆ ಬೇಕಾದ ವಿಧೇಯಕವನ್ನು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಯುವಿಸಿಇ ಕಾಯ್ದೆಯನ್ನು ರೂಪಿಸುವ ನಿಟ್ಟಿನಲ್ಲಿ ವಿವಿಧ ಐಐಟಿಗಳು ಹಾಗೂ ಐಐಎಂಗಳ ಕಾಯ್ದೆಗಳನ್ನು ಅಧ್ಯಯನ ಮಾಡಿ ಸಿದ್ಧಪಡಿಸಿದ ಸಮಗ್ರ ವರದಿಯನ್ನು ಐಐಐಟಿಬಿ ನಿರ್ದೇಶಕ ಡಾ. ಸಡಗೋಪನ್ ಅವರ ನೇತೃತ್ವದ ಸಮಿತಿಯಿಂದ ಸ್ವೀಕರಿಸಿದ ಬಳಿಕ ಡಾ. ಅಶ್ವಥ್ ನಾರಾಯಣ ಮಾತನಾಡಿದರು.
ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯಕ್ಕೆ ಶೈಕ್ಷಣಿಕ, ಆರ್ಥಿಕ, ಆಡಳಿತಾತ್ಮಕ ಸ್ವಾಯತ್ತತೆಯನ್ನು ನೀಡುವ ಬಗ್ಗೆ ಸರಕಾರಕ್ಕೆ ಮಹತ್ವದ ಶಿಫಾರಸುಗಳನ್ನು ಮಾಡಿರುವ ಸಮಿತಿಯು, ಸಂಸ್ಥೆಗೆ ಮೀಸಲಾದ ಪ್ರತ್ಯೇಕ ಹಾಗೂ ವಿಶೇಷ ಕಾಯ್ದೆ ಅಗತ್ಯ ಇರುವುದನ್ನು ಒತ್ತಿ ಹೇಳಿದೆ. ಅದರಂತೆ ಅಗತ್ಯವಾದ ಕಾನೂನು, ಆಡಳಿತಾತ್ಕಕ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತಿದೆ ಎಂದರು.
ಪ್ರತ್ಯೇಕ ಕಾನೂನು
ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಸರಕಾರದ ಮೇಲೆ ಅವಲಂಬನೆ ತಗ್ಗಿಸಲು ಆರ್ಥಿಕ ಮಾದರಿಯನ್ನು ಸಿದ್ಧಪಡಿಸಿಕೊಂಡು ಆಂತರಿಕವಾಗಿ ಹಾಗೂ ಬಾಹ್ಯ ಮೂಲಗಳಿಂದ ಸಂಪನ್ಮೂಲ ಕ್ರೋಢೀಕರಣಕ್ಕೆ ಅವಕಾಶ ನೀಡಬೇಕು. ದೇಣಿಗೆ ಸ್ವೀಕಾರ, ಹಳೆಯ ವಿದ್ಯಾರ್ಥಿಗಳಿಂದ ಹಣಕಾಸು ನೆರವು ಪಡೆಯುವ ಅಂಶವು ಉದ್ದೇಶಿತ ವಿಧೇಯಕದಲ್ಲಿದೆ. ಅತ್ಯುತ್ತಮ ಗುಣಮಟ್ಟದ ಬೋಧಕ ಸಿಬ್ಬಂದಿ ನೇಮಕ, ಸಿಬ್ಬಂದಿಗೆ ಉತ್ತಮ ವೇತನ, ಟ್ಯೂಷನ್ ಫೀ ನಿಗದಿ ಮಾಡುವ ಅಧಿಕಾರವನ್ನು ಯುವಿಸಿಇಗೆ ಕೊಡಬೇಕು.
ಸಂಪೂರ್ಣ ಸ್ವಾಯತ್ತತೆ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮತ್ತು ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ನೆರವು ನೀಡುವುದು ವಿಧೇಯಕದಲ್ಲಿದೆ. ಜೊತೆಗೆ ಉತ್ಕೃಷ್ಟ ಶೈಕ್ಷಣಿಕ ಹಿನ್ನೆಲೆಯ ಬೋಧಕರ ನೇಮಕ ಮಾಡಿಕೊಳ್ಳುವ ಮೂಲಕ ಐಐಟಿ ಮಾದರಿಯಲ್ಲಿ ಅಭಿವೃದ್ಧಿ. ಸಂಶೋಧನೆ ಹಾಗೂ ಹೊಸ ರೀತಿಯ ಪಠ್ಯವನ್ನು ಸೇರ್ಪಡೆಗೊಳಿಸುವ ಹಾಗೂ ಹೊಸ ಕೋರ್ಸ್ಗಳನ್ನು ಆರಂಭಿಸಲು ಯುವಿಸಿಇಗೆ ಪೂರ್ಣ ಸ್ವಾಯತ್ತತೆ ಕೊಡಬೇಕು. ಆಡಳಿತದಲ್ಲಿ ಯುವಿಸಿಇಗೆ ಪೂರ್ಣ ಅಧಿಕಾರ ನೀಡುವುದರ ಜತೆಗೆ ಸ್ವತಂತ್ರ ಅಸ್ತಿತ್ವ ನೀಡಬೇಕು.
ಆಡಳಿತ ಮಂಡಳಿ
ಒಟ್ಟಾರೆ ಆಡಳಿತ ಸರಕಾರದ್ದೇ ಆಗಿದ್ದರೂ ಆಡಳಿತದಲ್ಲಿ ಯುವಿಸಿಇಯದ್ದು ಅಂತಿಮ ನಿರ್ಧಾರವಾಗಬೇಕು. 11 ಸದಸ್ಯರ ಆಡಳಿತ ಮಂಡಳಿಯಲ್ಲಿ ಸರಕಾರಕ್ಕೂ ಸಮಾನ ಪ್ರಾತಿನಿಧ್ಯ ಇರುತ್ತದೆ. ಸರಕಾರ, ಕೈಗಾರಿಕೆ, ಶೈಕ್ಷಣಿಕ ವಲಯದಿಂದ ತಲಾ ಮೂವರು ಸದಸ್ಯರು, ಹಳೆಯ ವಿದ್ಯಾರ್ಥಿಗಳಿಂದ ಇಬ್ಬರು ಸದಸ್ಯರು ಇರಬೇಕು. ಈ ಅಂಶವೂ ಪ್ರಸ್ತಾವಿತ ವಿಧೇಯಕದಲ್ಲಿ ಇರುತ್ತದೆಂದು ಡಾ. ಅಶ್ವಥ್ ನಾರಾಯಣ ಮಾಹಿತಿ ನೀಡಿದ್ದಾರೆ.
Recommended Video
ಕ್ಯಾಂಪಸ್ ಪರಿಶೀಲನೆ
ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಸಮಿತಿಯ ಸದಸ್ಯರೊಂದಿಗೆ ಕೆ.ಆರ್. ವೃತ್ತದಲ್ಲಿರುವ ಯುವಿಸಿಇ ಕ್ಯಾಂಪಸ್ಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಕಟ್ಟಡಗಳ ನಿರ್ಮಾಣ, ಮೂಲಸೌಕರ್ಯ ಇತ್ಯಾದಿ ಅಂಶಗಳ ಬಗ್ಗೆ ಸಮಿತಿ ಜತೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಡಾ.ಎಸ್. ಸಡಗೋಪನ್, ಸಮಿತಿ ಸದಸ್ಯರಾದ ಬೆಂಗಳೂರು ವಿವಿ ಕುಲಪತಿ ಪ್ರೊ. ವೇಣುಗೋಪಾಲ್, ಬಿ. ಮುತ್ತುರಾಮನ್, ಪ್ರಶಾಂತ್ ಪ್ರಕಾಶ್ ನಾಗಾನಂದ ದೊರೆಸ್ವಾಮಿ, ನಾರಾಯಣನ್ ಮುಂತಾದವರು ಡಿಸಿಎಂ ಜತೆಯಲ್ಲಿದ್ದರು.