ಕೊರೊನಾ 3ನೇ ಅಲೆ ತಡೆಯಲು ಲಸಿಕೆ ಅನಿವಾರ್ಯ: ಶಾಸಕ ರವಿಸುಬ್ರಮಣ್ಯ
ಬೆಂಗಳೂರು, ಆಗಸ್ಟ್ 13: ''ಕೊರೊನಾವೈರಸ್ ಮೂರನೇ ಅಲೆ ಹಾಗೂ ಹೆಚ್ಚಿನ ಪ್ರಾಣಹಾನಿಯನ್ನು ತಡೆಯಲು ಲಸಿಕೆಯನ್ನು ಪಡೆದುಕೊಳ್ಳುವುದು ಅನಿವಾರ್ಯ,'' ಎಂದು ಬಸವನಗುಡಿ ಶಾಸಕ ರವಿಸುಬ್ರಮಣ್ಯ ಹೇಳಿದರು.
ಕೊರೊನಾವೈರಸ್ ಸಾಂಕ್ರಾಮಿಕದ ವಿರುದ್ದ ಹೋರಾಟದ ಪ್ರಮುಖ ಅಸ್ತ್ರವಾಗಿರುವ ಲಸಿಕಾಕರಣದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಜಯನಗರದ ಯುನೈಟೆಡ್ ಆಸ್ಪತ್ರೆಯ ಸಹಯೋಗದಲ್ಲಿ ರೋಟರ್ಯಾಕ್ಟ್ ಬೆಂಗಳೂರು ಸೌತ್ ಆಯೋಜಿಸಿದ್ದ ಸೈಕಲ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಜಯನಗರದ ಯುನೈಟೆಡ್ ಹಾಸ್ಪಿಟಲ್ನಲ್ಲಿ ಸ್ಪುಟ್ನಿಕ್-ವಿ ಲಸಿಕೆ
ಕೊರೊನಾ ಮೂರನೇ ಅಲೆಯ ಪರಿಣಾಮ ನಿಧಾನವಾಗಿ ಗೋಚರವಾಗುತ್ತಿದೆ. ಇದನ್ನು ತಡೆಯವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ಬಹಳ ಅವಶ್ಯಕ. ಈ ನಿಟ್ಟಿನಲ್ಲಿ ಜಯನಗರದ ಯುನೈಟೆಡ್ ಆಸ್ಪತ್ರೆ ರೋಟರ್ಯಾಕ್ಟ್ ಜೊತೆಗೂಡಿ ಜಾಗೃತಿ ರ್ಯಾಲಿಯನ್ನು ಆಯೋಜಿಸಿರುವುದು ಬಹಳ ಒಳ್ಳೆಯ ಕೆಲಸವಾಗಿದೆ. ಜನರು ಇದುವರೆಗೂ ಲಸಿಕೆಯನ್ನು ಹಾಕಿಸಿಕೊಳ್ಳದೇ ಇರುವಂಥವರು ಕೂಡಲೇ ಲಸಿಕೆಯನ್ನು ಹಾಕಿಸಿಕೊಳ್ಳಲು ಮುಂದಾಗಬೇಕು.
ಯುನೈಟೆಡ್ ಆಸ್ಪತ್ರೆಯ ಸಂಸ್ಥಾಪಕರಾದ ಡಾ. ವಿಕ್ರಮ್ಸಿದ್ದಾರೆಡ್ಡಿ ಮಾತನಾಡಿ, ''ಕೊರೊನಾವೈರಸ್ ಮೂರನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಪ್ರಮುಖ ಅಸ್ತ್ರವಾಗಿರುವ ಕರೋನಾ ಲಸಿಕಾಕರಣದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಬಹಳ ಅವಶ್ಯಕವಾಗಿದೆ. ನಮ್ಮ ಆಸ್ಪತ್ರೆಯ ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ನಾವುಗಳು ಇಂದು ಈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದು, ಇಲ್ಲಿ ಭಾಗವಹಿಸಿರುವ ಎಲ್ಲಾ ಸೈಕ್ಲಿಸ್ಟ್ ಗಳಿಗೆ ಉಚಿತವಾಗಿ ಎರಡೂ ಡೋಸ್ಗಳ ಲಸಿಕೆಯನ್ನು ನೀಡುತ್ತಿದ್ದೇವೆ,'' ಎಂದು ಹೇಳಿದರು.
ಯುನೈಟೆಡ್ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಶಾಂತಕುಮಾರ್ ಮುರುಡಾ ಮಾತನಾಡಿ, ''ನಮ್ಮ ಆಸ್ಪತ್ರೆಯಲ್ಲಿ ಡೆಲ್ಟಾ ಪ್ಲಸ್ ವೇರಿಯೆಂಟ್ನ್ನು ಪರಿಣಾಮಕಾರಿಯಾಗಿ ತಡೆಯಬಲ್ಲಂತಹ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ. ಈ ಲಸಿಕೆಯನ್ನು ಎಲ್ಲ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ನಾವು ನಮ್ಮ ಸಹಯೋಗಿ 20 ಆಸ್ಪತ್ರೆಗಳ ಜೊತೆಯಲ್ಲಿ 210 ರೂಪಾಯಿಗಳ ರಿಯಾಯಿತಿ (1410-210=1200) ಯ ದರದಲ್ಲಿ ನೀಡುತ್ತಿದ್ದೇವೆ.
ಈ ಸೌಲಭ್ಯವನ್ನು ಜನರು ಬೆಂಗಳೂರು ನಗರದಾದ್ಯಂತ ಹರಡಿರುವ ನಮ್ಮ ಸಹಯೋಗಿ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಲು ಸುಲಭವಾದ ತಂತ್ರಜ್ಞಾನ ರೂಪಿಸಲಾಗಿದೆ. ಯುನೈಟೆಡ್ ಆಸ್ಪತ್ರೆ ವೆಬ್ಸೈಟ್ ಮೂಲಕ ಗೂಗಲ್ ಮ್ಯಾಪ್ ಬಳಸಿಕೊಂಡು ನಿಮ್ಮ ಹತ್ತಿರದ ಲಸಿಕಾ ಕೇಂದ್ರಗಳನ್ನು ಗುರುತಿಸಬಹುದಾಗಿದೆ. ಅಲ್ಲದೆ +91 99169 77777 ವಾಟ್ಸಾಪ್ ಮೂಲಕವೂ ಲಸಿಕೆಗೆ ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಸೈಕಲ್ ರ್ಯಾಲಿಯಲ್ಲಿ 250 ಕ್ಕೂ ಹೆಚ್ಚು ಸೈಕ್ಲಿಸ್ಟ್, ವೈದ್ಯರುಗಳು, ಆರೋಗ್ಯ ಕಾರ್ಯಕರ್ತರು ಹಾಗೂ ಫ್ರಂಟ್ಲೈನ್ ವರ್ಕರ್ ಗಳು ಪಾಲ್ಗೊಂಡಿದ್ದರು. 6 ಕಿಲೋಮೀಟರ್ಗಳಷ್ಟು ನಡೆದ ಸೈಕಲ್ ರ್ಯಾಲಿಯಲ್ಲಿ ಲಸಿಕೆಯ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು.
ಕೊರೊನಾವೈರಸ್ ಸಾಂಕ್ರಾಮಿಕವನ್ನು ತಡೆಗಟ್ಟುವುದಕ್ಕೆ ಇರುವ ಪ್ರಮುಖ ಅಸ್ತ್ರ ಎಂದರೆ ಲಸಿಕೆಯನ್ನು ಪಡೆದುಕೊಳ್ಳುವುದು. ಹಲವಾರು ಕಾರಣಗಳಿಂದ ಕೆಲವು ಜನರು ಲಸಿಕೆಯನ್ನು ಪಡೆದುಕೊಂಡಿರುವುದಿಲ್ಲ. ಅವರಲ್ಲಿ ಲಸಿಕೆ ಪಡೆದುಕೊಳ್ಳುವುದರಿಂದ ಆಗುವ ಅನುಕೂಲಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ಯುನೈಟೆಡ್ ಆಸ್ಪತ್ರೆಯ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿಕ್ರಮ್ ಸಿದ್ದಾರೆಡ್ಡಿ ತಿಳಿಸಿದರು.
ಸಾಮಾಜಿಕ ಕಾಳಜಿ ಹಾಗೂ ಕೊರೊನಾ ಲಸಿಕೆಯಿಂದ ಹೆಚ್ಚು ಜನರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಯುನೈಟೆಡ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ ವಿಕ್ರಮ್ ಸಿದ್ದಾರೆಡ್ಡಿ ತಿಳಿಸಿದ್ದಾರೆ
Recommended Video
"ಇನ್ನುಳಿದ 15 ಸಾವಿರ ಡೋಸ್ ಲಸಿಕೆಗಳನ್ನು ನಮ್ಮ 15 ಸಹಯೋಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳ ಮುಖಾಂತರ ಬೆಂಗಳೂರಿನಲ್ಲಿ ಬಳಸಲಿದ್ದು, ಸರ್ಕಾರ ನಿಗದಿಪಡಿಸಿರುವ 1410 ರೂಪಾಯಿಗಳಲ್ಲಿ 210 ರೂಪಾಯಿಗಳ ರಿಯಾಯಿತಿ ನೀಡಿ 1200 ರೂಪಾಯಿ ದರದಲ್ಲಿ ನೀಡಲು ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಧರಿಸಿದೆ. ಎರಡನೇ ಡೋಸ್ ಕೋವ್ಯಾಕ್ಸಿನ್ ದೊರೆಯದೇ ತೊಂದರೆ ಪಡುತ್ತಿರುವ ಜನರ ಅನುಕೂಲಕ್ಕಾಗಿ ಈ ಯೋಜನೆ ರೂಪಿಸಿದ್ದೇವೆ" ಎಂದು ಡಾ ವಿಕ್ರಮ್ ವಿವರಿಸಿದರು. ಜಯನಗರದ ಯುನೈಟೆಡ್ ಆಸ್ಪತ್ರೆಯನ್ನು ಕೋವಿಡ್ ಲಸಿಕೆ ನೀಡುವ ಸಲುವಾಗಿ ಕಾಯ್ದಿರಿಸಲಾಗಿದೆ. ಇದನ್ನು ಲಸಿಕೆ ನೀಡುವ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ. ಲಸಿಕೆ ಪಡೆಯುವವರು ಯಾವುದೇ ಭಯವಿಲ್ಲದೆ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯಬಹುದಾಗಿದೆ.