ಕೆರೆ ಮಾಲಿನ್ಯದ ಬಗ್ಗೆ ಸಿಎಂ, ಡಿಸಿಎಂಗೆ ಯುನೈಟೆಡ್ ಬೆಂಗಳೂರು ದೂರು
ಬೆಂಗಳೂರು, ಜೂನ್ 28: ಕೆರೆಗಳ ಮಾಲಿನ್ಯಕ್ಕೆ ಕಾರಣ ಆಗುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ದೂರು ನೀಡಿದರೆ ಆ ದೂರಿನ ಅನ್ವಯ ನಡವಳಿಕೆ ತೆಗೆದುಕೊಳ್ಳುವುದಕ್ಕೆ ಎಷ್ಟು ಸಮಯ ಬೇಕಾಗಬಹುದು? ನಗರದ ಇಪ್ಪತ್ತೈದು ಕೆರೆಗಳನ್ನು ಪರಿಶೀಲಿಸಿ, ಮಾಲಿನ್ಯಕ್ಕೆ ಕಾರಣ ಆಗುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿ ಎರಡು ವರ್ಷ ಕಳೆದರೂ ಯಾವ ಪ್ರಯೋಜನವೂ ಆಗಿಲ್ಲ.
ಚೆನ್ನೈನ ಜಲ ಗಂಡಾಂತರ ಬೆಂಗಳೂರಿಗೂ ಕಾದಿದೆಯಾ? ಸಮಗ್ರ ವರದಿ
ಹೀಗೆ ಅಹವಾಲನ್ನು ಮುಂದಿಡುತ್ತಿದೆ ಯುನೈಟೆಡ್ ಬೆಂಗಳೂರು ಸಂಸ್ಥೆ. ಬೆಂಗಳೂರಿನ ಕೆರೆಗಳ ಸಂರಕ್ಷಣೆಗಾಗಿ ನಿರಂತರವಾಗಿ ಪ್ರಯತ್ನ ಮಾಡುತ್ತಿರುವ ಯುನೈಟೆಡ್ ಬೆಂಗಳೂರು ಸಂಸ್ಥೆಯು 2017ರಲ್ಲಿ ಈ ಬಗ್ಗೆ ದೂರು ಸಲ್ಲಿಸಿತ್ತು. ಜತೆಗೆ ಸಂಬಂಧಪಟ್ಟ ದಾಖಲೆಗಳನ್ನು ಕೂಡ ಪೊಲೀಸರಿಗೆ ನೀಡಿತ್ತು.
ಆದರೆ, ಎರಡು ವರ್ಷಗಳ ನಂತರವೂ ಯಾವ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿ, ಈ ರೀತಿಯ ವರ್ತನೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶದ ಉಲ್ಲಂಘನೆ ಕೂಡ ಆಗುತ್ತದೆ ಎಂದಿದೆ. ಈ ಹಿಂದೆ ಸಲ್ಲಿಸಿದ್ದ ದೂರು ಮತ್ತು ಸಲ್ಲಿಸಿದ್ದ ದಾಖಲೆಗಳು ಎಲ್ಲವನ್ನೂ ಇದೀಗ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗಮನಕ್ಕೆ ತರಲಾಗಿದೆ.