ಸೈಕಲ್ ಏರಿ ಕಚೇರಿಗೆ ಬಂದ ಕೆಎಎಸ್ ಅಧಿಕಾರಿ ಕೆ.ಮಥಾಯ್!
ಬೆಂಗಳೂರು, ಆಗಸ್ಟ್. 23 : ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯ್ ಸೈಕಲ್ನಲ್ಲಿ ಕಚೇರಿಗೆ ಆಗಮಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. 'ಹನ್ನೊಂದು ತಿಂಗಳಿನಿಂದ ನನಗೆ ಸರ್ಕಾರಿ ವಾಹನ ನೀಡಿಲ್ಲ' ಎಂದು ಅವರು ಆರೋಪಿಸಿದರು.
ಬುಧವಾರ ರಾಜನಕುಂಟೆಯಲ್ಲಿರುವ ಮನೆಯಿಂದ ಎಂ.ಎಸ್.ಬಿಲ್ಡಿಂಗ್ನಲ್ಲಿರುವ ಸಕಾಲ ಕಚೇರಿಗೆ ಮಥಾಯ್ ಅವರು ಸೈಕಲ್ನಲ್ಲಿ ಆಗಮಿಸಿದರು. ಸುಮಾರು 35 ಕಿ.ಮೀ.ದೂರ ಸೈಕಲ್ ತುಳಿದ ಅವರು, ಕಚೇರಿಯಲ್ಲಿರುವ ಸೈಕಲ್ಗೆ ಭದ್ರತೆ ನಿಡಬೇಕು ಎಂದು ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆಯಲು ಮುಂದಾಗಿದ್ದಾರೆ.
ಕೆ.ಮಥಾಯ್ ಹಿಂದೆ ಬಿಬಿಎಂಪಿ ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆಗ ಅಂದಿನ ಬಿಬಿಎಂಪಿ ಆಯುಕ್ತ ಲಕ್ಷ್ಮೀ ನಾರಾಯಣ್ ಅಕ್ರಮದ ಬಗ್ಗೆ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾಲ್ವರು ಐಎಎಸ್ ಅಧಿಕಾರಿಗಳು ನನಗೆ ಕರ್ತವ್ಯದಲ್ಲಿ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ಸಕಾಲ ಇಲಾಖೆಗೆ ಮಥಾಯ್ ಆಗಮಿಸುವ ಮೊದಲು ವಾಹನ ಸೌಕರ್ಯವಿತ್ತು. ಆದರೆ, ಇವರು ಆಗಮಿಸಿ 11 ತಿಂಗಳು ಕಳೆದರೂ ಸರ್ಕಾರಿ ವಾಹನ ನೀಡಿಲ್ಲ. ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯಲ್ಲಿನ ಅಧಿಕಾರಿಗಳು ಕೆಎಎಎಸ್ ಅಧಿಕಾರಿಗೆ ವಾಹನ ಸೌಕರ್ಯವನ್ನು ನೀಡಿಲ್ಲ.
ತಮ್ಮ ಪ್ರತಿಭಟನೆ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಮಥಾಯ್ ಅವರು, 'ಬಿಬಿಎಂಪಿ ಜಾಹೀರಾತು ಹಗರಣದ ಬಗ್ಗೆ ವರದಿ ಮಾಡಿದ್ದು ತಪ್ಪಾ?. ಸಕಾಲ ಇಲಾಖೆಯಲ್ಲಿ ನಾನು ಕರ್ತವ್ಯಕ್ಕೆ ಸೇರ್ಪಡೆಯಾದಗ ಐಎಎಸ್ ಅಧಿಕಾರಿ ಕಲ್ಪನ ನಿಮಗೆ ತುಂಬಾ ಜನ ಶತ್ರುಗಳಿದ್ದಾರೆ ಎಂದು ಹೇಳಿದ್ದರು. ಈಗ ಅವರೇ ನನಗೆ ತೊಂದರೆ ಕೊಡುತ್ತಿದ್ದಾರೆ' ಎಂದು ಹೇಳಿದರು.