ನಾವು ಕೋಟಿ ಜನ, ಕೋಟಿ ಮರ ಬೇಕು : ಅನಂತ್ ಕುಮಾರ್
ಬೆಂಗಳೂರು, ಜೂ. 06 : ಬೆಂಗಳೂರಿನಲ್ಲಿ ನಾವು ಕೋಟಿ ಜನ ಇದ್ದೇವೆ. ಒಂದು ಕೋಟಿ ಮರಗಳಾದರೂ ನಗರದಲ್ಲಿ ಇರಬೇಕು. ನಾವು ಈಗಲೇ ಗಿಡಬೆಳೆಸುವತ್ತ ಗಮನ ನೀಡಬೇಕು ಎಂದು ಕೇಂದ್ರದ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಖಾತೆ ಸಚಿವ ಅನಂತ್ ಕುಮಾರ್ ಅವರು ಶನಿವಾರದಂದು ಕರೆ ನೀಡಿದ್ದಾರೆ.
ಅವರು ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಲಾಲ್ ಬಾಗ್ನಲ್ಲಿ ಅಶೋಕ ಸಸಿಯನ್ನು ನೆಟ್ಟು, ನೀರುಣಿಸಿ, ಬಳಿಕ ಹಸಿರು ತೇರು ಜಾಥಾಗೆ ಚಾಲನೆ ನೀಡಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಸಂಸದ ಅನಂತ್ ಕುಮಾರ್ ಅವರು ಪರಿಸರ ಉಳಿಕೆಯ ಕುರಿತು ಮಾತನಾಡಿದರು.
ನಗರದಲ್ಲಿ ಒಬ್ಬರಿಗೆ ಒಂದು ಗಿಡವಾದರೂ ಇರಬೇಕು ಎಂದು ಭಾವಿಸಿದರೂ ಒಂದು ಕೋಟಿ ಗಿಡಮರಗಳು ಇರಬೇಕಾಗುತ್ತದೆ. ಕೆಲವು ವರ್ಷಗಳ ಹಿಂದೆ ಒಬ್ಬರಿಗೆ ಒಂದು ಮರದ ಅನುಪಾತ ಬೆಂಗಳೂರಿನಲ್ಲಿ ಇತ್ತು. ಅದು ಈಗ ಏಳು ಜನರಿಗೆ ಒಂದು ಮರ ಆಗಿದೆ. ಒಬ್ಬರಿಗೆ ಏಳು ಮರ ಇರಬೇಕು ಎಂಬುದು ವಿಶ್ವಮಾನ್ಯ ಸಂಗತಿಯಾಗಿದೆ. ಇದು ಕಳವಳದ ವಿಷಯ ಎಂದು ವಿಷಾದ ವ್ಯಕ್ತಪಡಿಸಿದರು.
ನಾವೀಗ ಹಸಿರಿಗೆ ವಾರಸುದಾರರಾಗಬೇಕು. ಈಗಿರುವ ಮರಗಳ ಸಂಪತ್ತಿಗೆ ನಾವು ವಾರಸುದಾರರಲ್ಲ. ಅದು ಹಿಂದಿನವರು ನಮಗೆ ಬಿಟ್ಟುಹೋಗಿರುವಂಥದ್ದು. ನಾವು ಹಸಿರಿಗೆ ವಾರಸುದಾರರಾಗಬೇಕೆಂದರೆ ಈಗಲಾದರೂ ನಾವು ಸಸಿಗಳನ್ನು ನೆಟ್ಟು ಮರ ಬೆಳೆಯಲು ಎಡೆಮಾಡಿಕೊಡಬೇಕು. ನಾವೆಲ್ಲರೂ ಹಸಿರಿಗೆ ವಾರಸುದಾರರಾಗೋಣ ಎಂದು ಅನಂತ್ ಕುಮಾರ್ ಕರೆ ನೀಡಿದರು. [ಇಂದು ಮಾತ್ರವಲ್ಲ ಪ್ರತಿದಿನ ಪರಿಸರ ಉಳಿಸಿ]
ಕಾರ್ಪೊರೇಟರುಗಳಿಗೆ ಸಾಕೇಂತಿಕ ಸಸಿ
ದಕ್ಷಿಣ ಬೆಂಗಳೂರು ಲೋಕಸಭೆ ಕ್ಷೇತ್ರದ ಪಕ್ಷದ ಮಾಜಿ ಕಾರ್ಪೊರೇಟರ್ಗಳಿಗೆ ಅವರು ಒಂದು ಸಸಿಯನ್ನು ಸಾಂಕೇತಿಕವಾಗಿ ನೀಡಿ, ನೀವು ನೂರು, ಸಾವಿರ ಮರಗಳ ಸಸಿಗಳನ್ನು ನೆಡಿಸಬೇಕು ಎಂದು ಕಿವಿಮಾತು ಹೇಳಿದರು.
ಹಸಿರು ಪಲ್ಲಕ್ಕಿ ಮತ್ತು ಹಸಿರು ತೇರಿನ ಜಾಥಾ
ಅವರ ಸಾರಥ್ಯದಲ್ಲಿ ಹಸಿರು ಪಲ್ಲಕ್ಕಿ ಮತ್ತು ಹಸಿರು ತೇರಿನ ಜಾಥಾ ಹೊರಟು ಲಾಲ್ ಬಾಗ್ ನಿಂದ ಕೃಷ್ಣರಾವ್ ಪಾರ್ಕ್ಗೆ ತೆರಳಿದಾಗ ಸಚಿವರು ಅಲ್ಲೂ ಬೇವು ಸಸಿಯನ್ನು ನೆಟ್ಟರು. ಬಳಿಕ ಜಾಥಾ ಸಾಗಿ ಸೌತೆಂಡ್ ಸರ್ಕಲ್ನಲ್ಲಿ ಮುಕ್ತಾಯಗೊಂಡಿತು.
ತೇಜಸ್ವಿನಿ ಅನಂತ್ ಕುಮಾರ್, ತಾರಾ ಭಾಗಿ
ಈ ಹಸಿರು ತೇರು ಮತ್ತು ಹಸಿರು ಪಲ್ಲಕ್ಕಿ ಜಾಥಾದಲ್ಲಿ ಅದಮ್ಯ ಚೇತನ ಟ್ರಸ್ಟ್ನ ಅಧ್ಯಕ್ಷರಾದ ತೇಜಸ್ವಿನಿ ಅನಂತ್ ಕುಮಾರ್, ಪರಿಸರ ತಜ್ಞ ಎಲ್ಲಪ್ಪ ರೆಡ್ಡಿ, ವಿಧಾನ ಪರಿಷತ್ ಸದಸ್ಯೆ ನಟಿ ತಾರಾ, ಮಾಜಿ ಕಾರ್ಪೊರೇಟರ್ಗಳು ಭಾಗವಹಿಸಿದ್ದರು.
ಒಬ್ಬರಿಗೆ ಏಳು ಮರ ಬೇಕು
ಒಬ್ಬರಿಗೆ ಏಳು ಮರ ಬೇಕು, ಹಸಿರು ಸಮೃದ್ಧಿಯ ಸಂಕೇತ, ಸ್ವಂತಕ್ಕೊಂದು ಮನೆ ಸಮಾಜಕ್ಕೊಂದು ಮರ, ಎ ಟ್ರೀ ಟುಡೆ ಲೈಫ್ ಟುಮಾರೋ ಮುಂತಾದ ಘೋಷಣೆಗಳಿದ್ದ ಭಿತ್ತಿಪತ್ರಗಳನ್ನು ಹಿಡಿದು, ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಪರಿಸರ ಪ್ರೇಮಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.