ಕ್ರಿಸ್ಮಸ್ - ವೀರಸೇನಾನಿ ರಾಮಮೂರ್ತಿ ದುರಂತ ಕಥೆ
ಕರ್ನಾಟಕದಲ್ಲಿಂದು ಕೇಸರಿ ಹಾಗೂ ಕೆಂಪು ಬಣ್ಣದ ಬಾವುಟವನ್ನು ಎಲ್ಲೆಡೆ ಬಳಸಲಾಗುತ್ತಿದೆ. 60ರ ದಶಕದಲ್ಲಿ ಸ್ವಾತಂತ್ರ್ಯ ಸೇನಾನಿ ವೀರಕೇಸರಿ ಸೀತಾರಾಮಶಾಸ್ತ್ರಿಗಳ ಮಗ ಸಾಮಾಜಿಕ ಹೋರಾಟಗಾರ ಮ. ರಾಮಮೂರ್ತಿ ಅವರು ಮೊದಲಿಗೆ ಈಗ ಚಾಲ್ತಿಯಲ್ಲಿರುವ 'ಕನ್ನಡ ಬಾವುಟ' ವನ್ನು ಬಳಸಲು ಆರಂಭಿಸಿದವರು ಎಂಬುದನ್ನು ಮರೆಯುವಂತಿಲ್ಲ. ಕ್ರಿಸ್ಮಸ್ ದಿನವೆಂದರೆ ಮ. ರಾಮಮೂರ್ತಿ ಅಭಿಮಾನಿಗಳ ಪಾಲಿಗೆ ಕಹಿನೆನಪಿನ ದಿನ.
ಬಾವುಟಕ್ಕೆ ಕಾನೂನಿನ ಮಾನ್ಯತೆ ಅಥವಾ ಅಧಿಕೃತ ಬಾವುಟದ ಮಾನ್ಯತೆ ಸಿಕ್ಕಿಲ್ಲ.ಆದರೆ, ಮ. ರಾಮಮೂರ್ತಿ ಅವರು ಎತ್ತಿ ಹಿಡಿದ ಬಾವುಟ ಇಂದಿಗೂ ಎಲ್ಲೆಡೆ ರಾರಾಜಿಸುತ್ತಿದೆ. ಕನ್ನಡ ನಾಡು-ನುಡಿಗಾಗಿ ಶ್ರಮಿಸಿ, ಹೋರಾಟ ನಡೆಸಿದ್ದ ಮದ್ದೂರು ರಾಮಮೂರ್ತಿ ಅವರು 50 ವರ್ಷಗಳ ಹಿಂದೆ ಆ.ನಾ.ಕೃಷ್ಣರಾಯರು ಮೊದಲುಗೊಂಡ ದಿಗ್ಗಜರ ಗುಂಪಿನ ಜತೆಗೂಡಿ 'ಕನ್ನಡ ಪಕ್ಷ'ವನ್ನು ಸ್ಥಾಪಿಸಿದ್ದರು. ಆದರೆ, ಕ್ರಿಸ್ಮಸ್ ದಿನದಂದು ಅವರ ಜೀವನದಲ್ಲಿ ನಡೆದಿದ್ದು ಮಾತ್ರ ದುರಂತ. ಈ ಬಗ್ಗೆ ಶ್ರೀಧರ ಮೂರ್ತಿ ಅವರು ಫೇಸ್ ಬುಕ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ:
ಇಂದಿಗೆ ಐವತ್ತು ವರಷಗಳ ಹಿಂದೆ ಅಂದರೆ 1967ರ ಡಿಸೆಂಬರ್ 25ರಂದು ಇಡೀ ಜಗತ್ತು ಕ್ರಿಸ್ಮಸ್ ಸಂಭ್ರಮದಲ್ಲಿ ಮುಳುಗಿದ್ದಾಗ. ಕನ್ನಡ ಹೋರಾಟಗಾರ ಪತ್ರಕರ್ತ ಮತ್ತು ಖ್ಯಾತ ಪತ್ತೇದಾರಿ ಕಾದಂಬರಿಕಾರ ಮ.ರಾಮಮೂರ್ತಿ ಆಗ ಬೆಂಗಳೂರಿನ ಹೊರ ವಲಯದಲ್ಲಿದ್ದ ತಲಘಟ್ಟಪುರದಲ್ಲಿ ರೂಪಿಸಿದ್ದ ತಮ್ಮ ತೋಟಕ್ಕೆ ಇಬ್ಬರು ಮಕ್ಕಳಾದ ಮಂಜುನಾಥ್ ಮತ್ತು ದಿನಕರರನ್ನು ಕರೆದು ಕೊಂಡು ಹೋದರು.
ಅಲ್ಲಿ ಟೊಮೋಟೋ ಬೆಳೆಯುವ ಕನಸು ಕಂಡಿದ್ದ ಅವರು ಅದಕ್ಕಾಗಿ ಹೊಸ ಬಾವಿ ತೋಡಿಸಿದ್ದರು. ಇನ್ನೂ ಆವರಣ ರೂಪಿಸಿದ ಅದರ ಅಡಿ ಕುಳಿತು ಹೆಂಡತಿ ಕಟ್ಟಿ ಕೊಟ್ಟದ್ದ ಅಕ್ಕಿರೊಟ್ಟಿ ತಿನ್ನಲು ಆರಂಭಿಸಿದರು. ಆಗ ಮಣ್ಣು ಉದರುತ್ತಿದೆ. ಎಂದು ಮಗ ಹೇಳಿದೆ 'ಏನು ಆಗುವುದಿಲ್ಲ' ಎಂದು ರಾಮಮೂರ್ತಿ ಮಾತನ್ನು ಮುಗಿಸುವ ಮೊದಲೇ ಭೂ ಕುಸಿತ ಸಂಭವಿಸಿ ಮೂವರೂ ಮಣ್ಣಿನ ಕೆಳಗೆ ಸಿಲುಕಿ ಸಾವನ್ನಪ್ಪಿದ್ದರು.
ಶವಗಳನ್ನು ತೆಗೆಯಲು ಮೂರು ದಿನ ಬೇಕಾಯಿತು. ರಾಮ ಮೂರ್ತಿಯವರ ಸಾವು ಕನ್ನಡ ಚಳುವಳಿಗೂ ದೊಡ್ಡ ಆಘಾತವನ್ನು ನೀಡಿ ಮುಂದೆ ಅದರ ದಿಕ್ಕು ಬದಲಾಯಿತು.
ಐವತ್ತು ವರ್ಷಗಳ ಹಿಂದಿನ ಈ ಕರಾಳ ಘಟನೆಗೆ ಸಾಕ್ಷಿಯಾದ ರಾಮಮೂರ್ತಿಯವರ ಮಡದಿ ಕಮಲಮ್ಮ ಇನ್ನೂ ನಮ್ಮ ಜೊತೆ ಇದ್ದಾರೆ.ಶಾರದಾ ಕುಟೀರದಲ್ಲಿ ನೆನಪುಗಳ ಜೊತೆ ಬದುಕನ್ನು ಕಳೆಯುತ್ತಿದ್ದಾರೆ. ಅಂದ ಹಾಗೆ ಇದು ಮ.ರಾಮ ಮೂರ್ತಿಯವರ ಜನ್ಮ ಶತಮಾನೋತ್ಸವದ ವರ್ಷ ಕೂಡ ಹೌದು (ಜನನ 11 ಮಾರ್ಚಿ 1918)